ಬೆಂಗಳೂರು(www.thenewzmirror.com): ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಇತಿಹಾಸಪ್ರಸಿದ್ಧ ಕೆ.ಆರ್. ಮಾರುಕಟ್ಟೆಗೆ (ಕೃಷ್ಣರಾಜೇಂದ್ರ ಮಾರುಕಟ್ಟೆ) ಇಂದು ಬೆಳಿಗ್ಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಲಾಯಿತು. ಮಾರುಕಟ್ಟೆ ಸಂಕೀರ್ಣದಲ್ಲಿ ಸಂಭವಿಸಬಹುದಾದ ಸಂಭಾವ್ಯ ಅಗ್ನಿ ಅವಘಡಗಳನ್ನು ಶಾಶ್ವತವಾಗಿ ತಡೆಗಟ್ಟುವ ಮತ್ತು ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಕ್ಷಣವೇ ಸಮಗ್ರ ‘ಫೈರ್ ಆಡಿಟ್’ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಮಾರುಕಟ್ಟೆ ಸುಧಾರಣೆಗೆ ನೀಡಿರುವ ಪ್ರಮುಖ ನಿರ್ದೇಶನಗಳು:
ಅಗ್ನಿ ಸುರಕ್ಷತೆ ಮತ್ತು ತುರ್ತು ನಿರ್ಗಮನ: ಮಾರುಕಟ್ಟೆಯ ಎಲ್ಲಾ ವಿಭಾಗಗಳಲ್ಲಿ ತಕ್ಷಣವೇ ಅಗ್ನಿ ಸುರಕ್ಷತಾ ತಪಾಸಣೆ (Fire Audit) ನಡೆಸಿ, ತುರ್ತು ನಿರ್ಗಮನ (Emergency Exit) ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆವರಣದಾದ್ಯಂತ ಆಧುನಿಕ ಅಗ್ನಿಶಾಮಕ ಪೈಪ್ಗಳು ಹಾಗೂ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ.
ಒತ್ತುವರಿ ತೆರವು ಮತ್ತು ದುಪ್ಪಟ್ಟು ದಂಡ: ಮಾರುಕಟ್ಟೆಯ ನಡಿಗೆ ಮಾರ್ಗ ಹಾಗೂ ಮಳಿಗೆಗಳ ಮುಂಭಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಲು ಮತ್ತು ಎಲ್ಲಾ ವ್ಯಾಪಾರಿಗಳು ತಮಗೆ ನಿಗದಿತಪಡಿಸಿದ ಜಾಗಗಳಲ್ಲಿಯೇ ಕಡ್ಡಾಯವಾಗಿ ವ್ಯಾಪಾರ ನಡೆಸುವಂತೆ ಕ್ರಮಕೈಗೊಳ್ಳಲು ಆದೇಶಿಸಲಾಗಿದೆ.
ಸ್ವಚ್ಛತೆ ಮತ್ತು ಮೂಲಸೌಕರ್ಯ ಸುಧಾರಣೆ: ಇಡೀ ಮಾರುಕಟ್ಟೆ ಆವರಣವನ್ನು ಸಂಪೂರ್ಣವಾಗಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು ಹಾಗೂ ನಿರಂತರ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಹಳೆಯ ಶೌಚಾಲಯಗಳನ್ನು ತಕ್ಷಣ ತೆರವುಗೊಳಿಸಿ, ಹೊಸ ಸಮರ್ಪಕ ನಿರ್ವಹಣಾ ವ್ಯವಸ್ಥೆ ತರಲು ಸೂಚಿಸಲಾಗಿದೆ.
ಲೀಕೇಜ್-ಪ್ರೂಫ್ ತಂತ್ರಜ್ಞಾನ: ಮುಂಗಾರು ಮಳೆ ಆರಂಭವಾಗುವ ಮುನ್ನವೇ ಮಾರುಕಟ್ಟೆಯ ಮೇಲ್ಛಾವಣಿಯಿಂದ ಮಳೆನೀರು ಸೋರಿಕೆಯಾಗುವುದನ್ನು ತಡೆಯಲು ಅತ್ಯಾಧುನಿಕ ಲೀಕೇಜ್-ಪ್ರೂಫ್ ಹಾಗೂ ಥರ್ಮೋಪ್ಲಾಸ್ಟಿಕ್ ಪೇಂಟಿಂಗ್ ಕಾಮಗಾರಿ ನಡೆಸಲು ನಿರ್ದೇಶನ ನೀಡಲಾಗಿದೆ. ಇದರೊಂದಿಗೆ ದೀರ್ಘಕಾಲದಿಂದ ಬಳಕೆಯಾಗದೆ ಖಾಲಿ ಬಿದ್ದಿರುವ ಮೂರನೇ ಮಹಡಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸೂಕ್ತ ಯೋಜನೆ ರೂಪಿಸಲು ತಿಳಿಸಲಾಗಿದೆ.
ಅನಧಿಕೃತ ಪಾರ್ಕಿಂಗ್ಗೆ ಬ್ರೇಕ್: ಮಾರುಕಟ್ಟೆ ಸುತ್ತಮುತ್ತಲಿನ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಚರಂಡಿ ವ್ಯವಸ್ಥೆಯನ್ನು ಸುಧಾರಿಸಿ, ವಾರಕ್ಕೊಮ್ಮೆ ನೀರು ನಿಲ್ಲುವ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು. ಸಮರ್ಪಕ ತ್ಯಾಜ್ಯ ವಿಲೇವಾರಿ ಹಾಗೂ ಮಾರುಕಟ್ಟೆಯ ಮಧ್ಯಭಾಗದಲ್ಲಿ ಅನಗತ್ಯವಾಗಿರುವ ಫೆನ್ಸಿಂಗ್ ಅನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ.
ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆಗೆ ಭಾರಿ ಪ್ರತಿಕ್ರಿಯೆ:
ಮಾರುಕಟ್ಟೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಸ್ತುತ ಕಲ್ಪಿಸಲಾಗಿರುವ ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆಗೆ ಜನರಿಂದ ಭಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಈ ಸಂಕೀರ್ಣದಲ್ಲಿ 200 ಕಾರುಗಳು ಹಾಗೂ 400 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾದ ಸುರಕ್ಷಿತ ಪಾರ್ಕಿಂಗ್ ಸೌಲಭ್ಯ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಉನ್ನತ ಮಟ್ಟದ ಜಂಟಿ ಪರಿಶೀಲನಾ ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಿ. ಜಗದೀಶ್, ಅಭಿವೃದ್ಧಿ ವಿಭಾಗದ… ಅಪರ ಆಯುಕ್ತರಾದ ವೆಂಕಟಾ ಚಲಪತಿ, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಇಲಾಖೆಯ ಉಪ ಪ್ರಧಾನ ವ್ಯವಸ್ಥಾಪಕರು (DGM) ಹಾಗೂ ಹಿರಿಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.







