ಬೆಂಗಳೂರು, (www.thenewzmirror.com) ;
ಗೋವಾ ಉತ್ತರಖಂಡ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳ ವಿಚಾರದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಾರವಾಗಿಯೇ ಖಂಡಿಸಿದ್ದಾರೆ.
ಗೋವಾ, ಉತ್ತರಾಖಂಡ ಮತ್ತು ಈಶಾನ್ಯದ ಇತರೆ ರಾಜ್ಯಗಳನ್ನು ತಮ್ಮ “ಸಣ್ಣ ರಾಜ್ಯಗಳೆಂಬ” ಹೇಳಿಕೆಯ ಮೂಲಕ ಅವಮಾನಿಸಿದ್ದಾರೆಂದು, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಮೂಲಭೂತವಾಗಿ ಈ ರಾಜ್ಯಗಳು ವಿಶಾಲವಾದ ಭಾರತದಲ್ಲಿ ತುಂಬಾ ಕಡಿಮೆ ಅಥವಾ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ತಿಳಿಸಲು ಖರ್ಗೆ ಈ ಪದಪ್ರಯೋಗವನ್ನು ಬಳಸಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಖರ್ಗೆ ಅವರನ್ನು ಖಂಡಿಸುತ್ತಾ ಶಾ, ಈ ರಾಜ್ಯಗಳು ದೇಶದ ಪ್ರಮುಖ ಭಾಗಗಳಾಗಿವೆ ಮತ್ತು ಗೋವಾ ಭಾರತ ಮಾತೆಯ ಹಣೆಯ ಮೇಲಿನ ಸಿಂಧೂರದಂತಿದೆ. ಹಾಗೆನೇ ಅದು ಭಾರತದ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಗೋವಾ, ಉತ್ತರಾಖಂಡ ಮತ್ತು ಈಶಾನ್ಯದ ಇತರ ರಾಜ್ಯಗಳಲ್ಲಿ ಗೆದ್ದ ವೇಳೆ ಇವು ಬಹಳ ಚಿಕ್ಕ ರಾಜ್ಯಗಳಾಗಿವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರೋ ಅಮಿತ್ ಶಾ, ಖರ್ಗೆ ಸಾಹೇಬರೇ, ಇವು ಚಿಕ್ಕ ರಾಜ್ಯಗಳಾಗಿರಬಹುದು, ಆದರೆ ಅವು ಭಾರತದ ಬಹುಮುಖ್ಯ ಭಾಗಗಳಾಗಿವೆ ಎಂಬುದನ್ನು ಮರೆಯಬೇಡಿ. ಈ ಸಣ್ಣ ರಾಜ್ಯಗಳನ್ನು ಅವಮಾನಿಸಬೇಡಿ, ಗೋವಾ ಭಾರತ ಮಾತೆಯ ಹಣೆಯಲ್ಲಿರುವ ಸಿಂಧೂರದಂತಿದೆ. ರಾಜ್ಯ ಚಿಕ್ಕದಾದಷ್ಟೂ ಅದರ ಅಭಿವೃದ್ಧಿಗೆ ಶ್ರಮಿಸುವ ಜವಾಬ್ದಾರಿ ಕೇಂದ್ರದ ಮೇಲೆ ಹೆಚ್ಚಾಗುತ್ತದೆ. ಇದು ಮೋದಿ ನೇತೃತ್ವದ ಸರ್ಕಾರದ ನೀತಿಯೆಂದು ಎಂದು ತಿಳಿಸಿದರು.
ದಕ್ಷಿಣ ಗೋವಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಸಾವಿರಾರು ಜನರ ಹರ್ಷೋದ್ಗಾರ ಹೆಚ್ಚುವಂತೆ ಮಾತನಾಡುತ್ತಾ, ಭಾಜಪದ ಚುನಾವಣಾ ಚಾಣಕ್ಯ ಶಾ, ಸಣ್ಣ ರಾಜ್ಯಗಳಿಗಾಗಿ, ಕೇಂದ್ರದ ಜವಾಬ್ದಾರಿಯು ಬಹುಪಟ್ಟು ಹೆಚ್ಚಾಗುತ್ತದೆ. ಕಳೆದ ಒಂಬತ್ತು ವರ್ಷಗಳಿಂದ, ದೆಹಲಿಯಲ್ಲಿನ ಭಾಜಪ ಸರ್ಕಾರದ ಅಧಿಕಾರವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಸುಧಾರಣೆಗಾಗಿ ಕೇಂದ್ರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ರಾಜ್ಯಗಳ ವಾರ್ಷಿಕ ಹಂಚಿಕೆಯನ್ನು ಏಳು ಪಟ್ಟು ಹೆಚ್ಚಿಸಿದೆ ಎಂದು ವಿವರಿಸಿದರು.
ಗೋವಾದಲ್ಲಿ, 2024 ರ ಸಾರ್ವತ್ರಿಕ ಚುನಾವಣಾ ಪ್ರಯುಕ್ತ, ಭಾಜಪದ ಪ್ರಚಾರಯಾತ್ರೆಗೆ ನಾಂದಿ ಹಾಡುವ ಸಲುವಾಗಿ, ಶಾ ಕರಾವಳಿ ರಾಜ್ಯದ ಪ್ರವಾಸದಲ್ಲಿದ್ದರು. ಪ್ರಸ್ತುತ ದಕ್ಷಿಣ ಗೋವಾ ಸ್ಥಾನವನ್ನು ಹೊಂದಿರುವ ಕಾಂಗ್ರೆಸ್ ತನ್ನ ದುರಾಡಳಿತ, ಭ್ರಷ್ಟಾಚಾರ ಮತ್ತು ವಂಶ ಪಾರಂಪರಿಕ ಆಡಳಿತದಿಂದ ದೇಶವನ್ನು ಹಿಮ್ಮುಖ ಚಲನೆಗೆ ಉತ್ತೇಜಿಸಿದ್ದಕ್ಕಾಗಿ, ಆಧುನಿಕ ಚಾಣಕ್ಯ ಶಾ ಕಾಂಗ್ರೆಸ್ನ್ನು ಕಟುವಾಗಿ ಟೀಕಿಸಿದರು.
ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತೀಕ್ಷ್ಣ ಪ್ರಚಾರದ ಹೊರತಾಗಿಯೂ, ಇತ್ತೀಚಿಗೆ ನಡೆದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಗಳಲ್ಲಿ ದಯನೀಯವಾಗಿ ಸೋತ ಕಾಂಗ್ರೆಸ್ ಬಗ್ಗೆ ಶಾ ವ್ಯಂಗ್ಯವಾಡಿದರು,
“ರಾಹುಲ್ ಬಾಬಾ ಅಲ್ಲಿಗೆ ಹೋದರು … ಪೂರ್ತಿ ಜೋಷ್ನಲ್ಲಿ ಪ್ರಚಾರ ಮಾಡಿದರು ಮತ್ತು ಪ್ರತಿಬಾರಿಯಂತೆ ಕಾಂಗ್ರೆಸ್ ಅಲ್ಲಿಯೂ ಸಂಪೂರ್ಣ ನಾಮಾವಶೇಷವಾಯಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ತ್ರಿಪುರಾದಲ್ಲಿ, ನಾವು ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದ್ದೇವೆ; ನಾಗಾಲ್ಯಾಂಡ್ನಲ್ಲಿ ನಮ್ಮ 13 ಶಾಸಕರು ವಿಧಾನಸಭೆಗೆ ಮರು ಆಯ್ಕೆಯಾಗಿದ್ದಾರೆ ಮತ್ತು; ಮೇಘಾಲಯದಲ್ಲಿಯೂ ನಮ್ಮ ಬೆಂಬಲದಿಂದ ಸರ್ಕಾರ ರಚನೆಯಾಗಿದೆ ಎಂದರು.
370 ನೇ ವಿಧಿಯನ್ನು ರದ್ದುಪಡಿಸಲು ಕಾಂಗ್ರೆಸ್ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸುತ್ತಾ ಶಾ, ಗೋವಾದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಗೋವಾಕ್ಕೆ ವಾರ್ಷಿಕವಾಗಿ ಕೇವಲ 432 ಕೋಟಿ ರೂಪಾಯಿಗಳ ಅನುದಾನ ನೀಡಲಾಗುತ್ತಿತ್ತು, ಆದರೆ ಮೋದಿಯಡಿಯಲ್ಲಿ, ಗೋವಾಕ್ಕೆ ವಾರ್ಷಿಕವಾಗಿ 3,000 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ, ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಗೋವಾದ ಅಭಿವೃದ್ಧಿಗಾಗಿ, ಇನ್ನಷ್ಟು ಭರವಸೆಗಳು ನೀಡುತ್ತಾ, ದಕ್ಷಿಣ ಗೋವಾ ಸ್ಥಾನವನ್ನು ಭಾಜಪಕ್ಕೆ ಮರಳಿ ನೀಡಲು ಮತ್ತು ಪ್ರಧಾನಿ ಮೋದಿಯವರಿಗೆ ಮೂರನೇ ಅವಧಿಯನ್ನು ಖಾತ್ರಿಪಡಿಸುವಂತೆ ಅಲ್ಲಿ ನೆರೆದಿದ್ದ ಜನಸಮೂಹಕ್ಕೆ ಎರಡು ಕೈಗಳಿಂದ ನಮಿಸುತ್ತಾ ವಿನಂತಿಸಿದರು.