ಬೆಂಗಳೂರು, (www.thenewzmirror.com);
ಇಡೀ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ನಿಯಮವನ್ನ ಸಾರಿಗೆ ಇಲಾಖೆಯಲ್ಲಿ ಜಾರಿ ಮಾಡೋಕೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ.., ತಮ್ಮಲ್ಲದ ತಪ್ಪಿಗೆ ಶ್ರಮಿಕ ವರ್ಗ ಶಿಕ್ಷೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲಾ ಗೊತ್ತಿದ್ದರೂ ಸಾರಿಗೆ ಸಚಿವರು ಮಾತ್ರ ಮೌನ ವಹಿಸಿರುವುದು ನಿಜಕ್ಕೂ ದುರಂತ.
ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅಂತ ಕರೆಸಿಕೊಳ್ಳುವ ಬಿಎಂಟಿಸಿಯಲ್ಲಿ ಚಾಲಕ, ನಿವಾರ್ಹಕರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಇತ್ತೀಚೆಗೆ ಬಿಎಂಟಿಸಿಯ ಉತ್ತರ ವಲಯದಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿ.
ನವೆಂಬರ್ 8 2023 ರಂದು ಬಿಎಂಟಿಸಿಯ ಚಾಲಕರೊಬ್ಬರಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ. ಇದರಲ್ಲಿ ನಿಮ್ಮ ಮೇಲೆ ಆರೋಪ ಹೊರಿಸಲಾಗಿದೆ ಎಂದೆಲ್ಲಾ ಉಲ್ಲೇಖಿಸಿ ಸೂಚನಾ ಪತ್ರವನ್ನ ನೀಡಲಾಗಿದೆ.
ಘಟಕ 11 ರ ಚಾಲಕ ಅಶ್ಪಕ್ ಅವರು 500ಡಿ/50 ಮಾರ್ಗದಲ್ಲಿ ಬಸ್ ಅನ್ನ ಚಾಲನೆ ಮಾಡುತ್ತಿದ್ದರು. ಈ ವೇಳೆ ಕೆಎ 57 ಎಫ್ 3715 ಬಸ್ ನಲ್ಲಿ ಸಂಚಾರ ಮಾಡುವ ಪ್ರಯಾಣಿಕರೊಬ್ಬರು ನಿಗಮಕ್ಕೆ ದೂರನ್ನ ನೀಡಿದ್ದಾರೆ. ಈ ದೂರಿನಲ್ಲಿ ದಿನಾಂಕ 13/09/2023 ರಂದು ಪ್ರಯಾಣಿಕೊರಬ್ಬರು ನೀಡಿದ ದೂರಿನ ಪ್ರಕಾರ ಅಂದು ಸಂಜೆ 7.45 ರಲ್ಲಿ ಆಚರಣೆ ಮಾಡುವಾಗ ಸದರಿ ವಾಹನವು ಮಳೆಗಾಲದಲ್ಲಿ ಬಸ್ಸಿನ ಸ್ಥಿತಿಯು ತುಂಬಾ ಕಳಪೆಯಾಗಿದೆ. ಪ್ರತಿ ಸೀಟಿನಲ್ಲಿ ಮಳೆ ನೀರು ಆವರಿಸಿದೆ. ಮೇಲ್ಛಾವಣಿಯ ಬಗ್ಗೆ ದಯವಿಟ್ಟು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ಕೊಟ್ಟಿರುತ್ತಾರೆ.
ಹೀಗೆ ಬಸ್ಸಿನ ಮೇಲ್ಛಾವಣಿ ಸೋರಲು ಚಾಲಕನ ಕರ್ತವ್ಯದಲ್ಲಿನ ನಿರ್ಲಕ್ಷ್ಯತೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿ ಸಂಸ್ಥೆಗೆ ಕೆಟ್ಟ ಹೆಸರು ಬರಲು ಕಾರಣವಾಗುತ್ತೆ. ಆದ್ದರಿಂದ ನಿಮ್ಮ ಮೇಲೆ ಏಕೆ ಸೂಕ್ತ ಶಿಸ್ತಿನ ಕ್ರಮ ಜರುಗಿಸಬಾರದು. ಎಂದು ನೊಟೀಸ್ ನೀಡಲಾಗಿದೆ. ಸದರಿ ನೊಟೀಸ್ ಗೆ ಏಳು ದಿನದ ಒಳಗೆ ಉತ್ತರಿಸಬೇಕೆಂದೂ ಉಲ್ಲೇಖಿಸಿ ಘಟಕ ವ್ಯವಸ್ಥಾಪಕರು ಚಾಲಕನಿಗೆ ನೊಟೀಸ್ ನೀಡಿದ್ದಾರೆ.
ಇಲ್ಲಿ ಉದ್ಬವಿಸುವ ಪ್ರಶ್ನೆ ಏನೆಂದರೆ ಬಸ್ಸು ಸೋರಲು ಚಾಲಕ ಹೇಗೆ ಕಾರಣರಾಗುತ್ತಾರೆ..? ಬಸ್ ಅನ್ನ ಸುಸಜ್ಜಿತವಾಗಿ ನೋಡಿಕೊಳ್ಳುವುದು ಡಿಪೋ ಮ್ಯಾನೇಜರ್ ಅವರ ಜವಾಬ್ದಾರಿ ಅಲ್ವಾ..? ಅದಕ್ಕಾಗಿಯೇ ಅವರು ಸಾವಿರಗಟ್ಟಲೇ ಸಂಬಳವನ್ನ ಪಡೆಯುತ್ತಾರೆ ಅಲ್ವಾ..? ಇಷ್ಟೆಲ್ಲಾ ಇದ್ದಮೇಲೆ ಚಾಲಕನ ನಿರ್ಲಕ್ಷ್ಯತನ ಅಂತ ನೊಟೀಸ್ ಕೊಡುವುದು ಸರಿನಾ..?
ನಿಯಮ ಏನು ಹೇಳುತ್ತೆ.?
ಒಂದು ಬಸ್ ರೂಟ್ ಗೆ ಹೋಗುವ ಮುನ್ನ ಪ್ರತಿ ಹಂತದಲ್ಲೂ ತಪಾಸಣೆ ಆಗಬೇಕು.., ಬಸ್ ನ ಚಕ್ರ.., ಗೇರ್ ಬಾಕ್ಸ್, ಸೀಟ್, ಬಸ್ ನ ಒಳಗೆ ಹೊರಗೆ ಸ್ವಚ್ಚವಾಗಿದ್ಯಾ..? ಬಸ್ ಕ್ಲೀನ್ ಮಾಡಿದ್ದಾರಾ..? ಡಿಸೇಲ್ ಭರ್ತಿಯಾಗಿದ್ಯಾ ಇಲ್ವಾ..? ಇದೆಲ್ಲವನ್ನೂ ಡಿಪೋದಲ್ಲಿ ಇರುವ ಭದ್ರತಾ ಸಿಬ್ಬಂದಿ ಸೇರಿದಂತೆ ಡಿಪೋ ಮ್ಯಾನೇಜರ್ ಸಂಪೂರ್ಣ ತಪಾಸಣೆ ಮಾಡಬೇಕು.., ಅದರಲ್ಲೂ ಮುಖ್ಯವಾಗಿ ಟ್ರಿಪ್ ಮುಗಿಸಿಕೊಂಡು ಬಂದ ಬಳಿಕ ಬಸ್ ನ ಸಮಸ್ಯೆಗಳ ಕುರಿತಂತೆ ಚಾಲಕ, ನಿರ್ವಾಹಕನಿಂದ ಮಾಹಿತಿ ಪಡೆದು ಅದನ್ನ ಸರಿ ಪಡಿಸುವ ಜವಾಬ್ದಾರಿ ಡಿಪೋ ಮ್ಯಾನೇಜರ್ ಅವರದ್ದಾಗಿರುತ್ತೆ. ಹೀಗೆ ದುರಸ್ತಿ ಮಾಡದೇ ಪ್ರಯಾಣಿಕರು ದೂರು ಕೊಟ್ಟರು ಅನ್ನುವ ಕಾರಣಕ್ಕೆ ಚಾಲಕನ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತಾಗಿದೆ.
ನೊಟೀಸ್ ಕೊಟ್ಟಿರುವುದು ತಪ್ಪು
ಇನ್ನು ಬಸ್ ನ ಅವ್ಯವಸ್ಥೆ ಕುರಿತಂತೆ ಚಾಲಕನಿಗೆ ನೊಟೀಸ್ ಕೊಟ್ಟಿರುವುದು ಕಾರ್ಮಿಕ ಮುಖಂಡರ ಅಸಮಧಾನಕ್ಕೆ ಕಾರಣವಾಗಿದೆ. ತಮ್ಮ ತಪ್ಪನ್ನ ಮುಚ್ಚಿಕೊಳ್ಳುವುದಕ್ಕೆ ಈ ರೀತಿ ನೊಟೀಸ್ ಕೊಟ್ಟಿದ್ದಾರೆ. ಕೂಡಲೇ ನೊಟೀಸ್ ವಾಪಾಸ್ ಪಡೆಯಬೇಕೆಂದು ಕಾರ್ಮಿಕ ಮುಖಂಡರು ಎಂಡಿ ಸತ್ಯವತಿ ಅವರಲ್ಲಿ ಮನವಿ ಮಾಡುತ್ತಿದ್ದಾರೆ.
ಸಂಪರ್ಕಕ್ಕೆ ಸಿಗದ ಡಿಪೋ ಮ್ಯಾನೇಜರ್
ಇನ್ನು ಚಾಲಕನಿಗೆ ನೊಟೀಸ್ ಕೊಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಘಟಕ 11ರ ಡಿಪೋ ಮ್ಯಾನೇಜರ್ ಗೆ ಸಂಪರ್ಕ ಮಾಡಲು ದಿ ನ್ಯೂಝ್ ಮಿರರ್ ಪ್ರಯತ್ನ ಪಡ್ತು. ಆದರೆ ಡಿಪೋ ಮ್ಯಾಜೇನರ್ ನಂಬರ್ ನಾಟ್ ರೀಚಬಲ್ ಆಗಿತ್ತು.
ಸಾರಿಗೆ ಸಚಿವರೇ ದಬ್ಬಾಳಿಕೆ ನಿಲ್ಲಿಸಿ
ಇನ್ನು ತಮ್ಮದಲ್ಲದ ತಪ್ಪಿಗೆ ಈ ರೀತಿ ಶ್ರಮಿಕ ವರ್ಗದವರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನ ನಿಲ್ಲಿಸಬೇಕೆಂದು ಕಾರ್ಮಿಕ ಒಕ್ಕೂಟಗಳು ಸಾರಿಗೆ ಸಚಿವರನ್ನ ಒತ್ತಾಯ ಮಾಡುತ್ತಿದ್ದಾರೆ. ಸರಳ ಸಜ್ಜನಿಕೆ ಹಾಗೂ ಕಾರ್ಮಿಕರ ಪರವಾಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಇಂಥ ವರ್ತನೆಗಳಿಗೆ ಬ್ರೇಕ್ ಹಾಕುವ ಕೆಲ್ಸ ಮಾಡಬೇಕಿದೆ.