ಬೆಂಗಳೂರು, (www.thenewzmirror.com) :
ವಿಶ್ವದಲ್ಲೇ ತನ್ನನ್ನ ತಾನು ಗುರ್ತಿಸಿಕೊಂಡಿರುವ ಬೆಂಗಳೂರು ಹಿರಿಮೆಗೆ ಮತ್ತೊಂದು ಗರಿ ಬಂದಿದೆ. ದಕ್ಷಿಣ ಭಾರತದ ಮಾದರಿ ವಾರ್ಡ್ ಎಂಬ ಖ್ಯಾತಿಯ ಯಡಿಯೂರು ವಾರ್ಡ್ ಬೆಂಗಳೂರಿನಲ್ಲಿ ಅತ್ಯಂತ ಸ್ವಚ್ಛ ವಾರ್ಡ್ ಗಳ ಪೈಕಿ ಮೊದಲನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಹಲವು ವರ್ಷಗಳಿಂದ ಕಸ ನಿಋವಹಣೆ ವಿಚಾರದಲ್ಲಿ ಉಳಿದ ವಾರ್ಡ್ ಗಳಿಗೆ ಮಾದರಿಯಾಗಿದ್ದ ಯಡಿಯೂರು ವಾರ್ಡ್ ನಲ್ಲಿ ಪ್ರತಿನಿತ್ಯ 5 ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದೆ. ಇದರಿಂದ ದಿನವೊಂದಕ್ಕೆ 3,000 kw ನಷ್ಟು ವಿದ್ಯುತ್ ಯತ್ಪತ್ತಿಯಾಗುತ್ತಿದೆ.
ಈ ವಿದ್ಯುತ್ ನಿಂದ ವಾರ್ಡಿನಲ್ಲಿರುವ 15 ಉದ್ಯಾನವನಗಳು, 17 ಪಾಲಿಕೆ ಕಟ್ಟಡಗಳಿಗೆ ವಿದ್ಯುತ್ ಪೂರೈಸುವ ಕೆಲಸ ಆಗುತ್ತಿದೆ. ಹಾಗೆನೇ ಬೆಸ್ಕಾಂ ವಿದ್ಯುತ್ ಮುಕ್ತ ವಾರ್ಡ್ ಆಗಿ ಪರಿವರ್ತಿಸಲಾಗಿದ್ದು, ಸಂಪೂರ್ಣ ಸ್ವಾವಲಂಬನೆ ಸಾಧಿಸಲಾಗಿದೆ.
2010 ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಎನ್.ಆರ್ ರಮೇಶ್ ಬಳಿಕದ ಅವಧಿಗೆ ಅವರ ಪತ್ನಿ ಪೂರ್ಣಿಮಾ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಕಸ ನಿರ್ವಹಣೆಗೆ ಹೆಚ್ಚಿನ ಒತ್ತುಕೊಟ್ಟಿದ್ದರಿಂದ ಇದು ಸಾಧ್ಯವಾಗಿದೆ.
ಇದರ ಪರಿಣಾಮವಾಗಿ ಹಸಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ತ್ಯಾಜ್ಯ ದ್ರಾವಣದಿಂದ ಪ್ರತಿನಿತ್ಯ ಸುಮಾರು 40,000 ಲೀಟರ್ ಗಳಷ್ಟು ಸಾವಯವ ಗೊಬ್ಬರ ಉತ್ಪಾದಿಸಲಾಗುತ್ತಿದ್ದು, ಪಾಲಿಕೆಯ ದಕ್ಷಿಣ ವಲಯದಲ್ಲಿರುವ 256 ಉದ್ಯಾನವನಗಳಿಗೆ ಪೂರೈಕೆ ಮಾಡುವ ಕಾರ್ಯವೂ ನಿರಂತರವಾಗಿ ಸಾಗುತ್ತಿದೆ. ಹೀಗಾಗಿ ಹಸಿ ತ್ಯಾಜ್ಯದಿಂದ ಪಾಲಿಕೆಗೆ ಪ್ರತಿ ತಿಂಗಳು 1,30,00,000 ಗಳಷ್ಟು ಆದಾಯ ಲಭಿಸುತ್ತಿದೆ.
ಈ ಎಲ್ಲಾ ಕಾರ್ಯಗಳಿಂದ ಯಡಿಯೂರು ವಾರ್ಡ್ ಗೆ ಬೆಂಗಳೂರಿನಲ್ಲಿ ಅತ್ಯಂತ ಸ್ವಚ್ಛ ವಾರ್ಡ್ ಗಳ ಪೈಕಿ ಮೊದಲನೇ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎನ್ನುವುದು ಮಾಜಿ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಅವರ ಅಭಿಪ್ರಾಯ.
ಒಂದು ವಾರ್ಡ್ನಲ್ಲಿ ಇಂಥ ಸಾಧನೆ ಮಾಡೋದಿಕ್ಕೆ ಸಾಧ್ಯವಾಗುತ್ತೆ ಎಂದಾದರೆ ಉಳಿದ ವಾರ್ಡ್ ಗಳಲ್ಲಿ ಸಾಧ್ಯವಿಲ್ಲ ಯಾಕೆ ಎನ್ನವ ಪ್ರಶ್ನೆ ಇದೀಗ ತೆರಿಗೆದಾರರ ಮನದಲ್ಲಿ ಮೂಡುತ್ತಿದ್ದು, ಇದಕ್ಕೆ ಆ ಭಾಗದ ಪುರಪಿತೃಗಳೇ ಉತ್ತರ ಕೊಡಬೇಕಿದೆ.