ಬೆಂಗಳೂರು, (www.thenewzmirror.com) ;
ಗ್ರಾಮೀಣ ಪ್ರದೇಶದಲ್ಲಿ ಜನನ ಹಾಗೂ ಮರಣ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ 30 ದಿನಗಳ ಒಳಗೆ ಜನನ-ಮರಣ ಘಟನೆಗಳನ್ನು ನೋಂದಾಯಿಸುವ ಸಲುವಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಡೇಟಾ ಎಂಟ್ರಿ ಆಪರೇಟರ್ಗಳಿಗೆ ಜನನ, ಮರಣ ನೋಂದಣಿಗೆ ಸಂಬಂಧಿಸಿದ ಅಧಿನಿಯಮ ಹಾಗೂ ನಿಯಮಗಳು ಮತ್ತು ನೋಂದಣಿಗೆ ಬಳಸಲಾಗುತ್ತಿರುವ ಇ-ಜನ್ಮ ತಂತ್ರಾಂಶದ ಬಗ್ಗೆ ತರಬೇತಿಯನ್ನು ನೀಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, 21 ದಿನಗಳ ತರುವಾಯ ಮತ್ತು 30 ದಿನಗಳ ಒಳಗಿನ ಘಟನೆಗಳನ್ನು ನಿಯಮಗಳಂತೆ 2ರೂ, 30 ದಿನಗಳ ತರುವಾಯ ಒಂದು ವರ್ಷದೊಳಗೆ ವರದಿಯಾಗುವ ಜನನ, ಮರಣಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು. ಎಂದು ತಿಳಿದರು.
ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈಗ 72 ಸೇವೆಗಳು ಲಭ್ಯವಿದ್ದು, ಜನನ, ಮರಣ ನೋಂದಣಿ 73ನೆ ಸೇವೆಯಾಗಿ ಸೇರ್ಪಡೆಗೊಳ್ಳುತ್ತಿದೆ. ಜನನ, ಮರಣ ನೋಂದಣಿ ಸಂಬಂಧದಲ್ಲಿ ಸಂದೇಹ/ಸ್ಪಷ್ಟೀಕರಣ ಅವಶ್ಯಕತೆಯಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಹಾಗೂ ಇ-ಮೇಲ್ [email protected]/[email protected] ಮತ್ತು ಇ-ಜನ್ಮ ಸಹಾಯವಾಣಿ 1800-425-6578 ಸಂಖ್ಯೆಗೆ ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.