ಬೆಂಗಳೂರು, (www.thenewzmirror com) ;
ದೇಶವನ್ನು ಪ್ರಗತಿಯ ಪಥದತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ಕೈಗಾರಿಕೆಗಳದ್ದಾಗಿದೆ. ಸರಕಾರಗಳು ಕೈಗಾರಿಕಾ ಸ್ನೇಹಿ ನೀತಿಗಳನ್ನು ರೂಪಿಸಲು ಕೈಗಾರಿಕೋದ್ಯಮಿಗಳು ಸಲಹೆ ನೀಡುವುದು ಬಹಳ ಅವಶ್ಯಕ ಎಂದು ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
FKCCI ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಂಥನ್ – 2024 ರ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೈಗಾರಿಕೆಗಳು ನೀಡುವ ತೆರಿಗೆ ಬಹಳ ಮುಖ್ಯ. ಇಂತಹ ಪ್ರಮುಖ ಪಾತ್ರ ವಹಿಸುವ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ, ಬೇರೆ ದೇಶಗಳೊಂದಿಗೆ ಸಮರ್ಥವಾದ ಸ್ಪರ್ಧೆ ನೀಡಲು ಸಾಧ್ಯವಾಗುವಂತಹ ನೀತಿಗಳನ್ನು ರೂಪಿಸಲು ಕೈಗಾರಿಕೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಸಲಹೆ ನೀಡಬೇಕು. ಇವುಗಳ ಆಧಾರಧ ಮೇಲೆಯೇ ಸರಕಾರಗಳು ನೀತಿಗಳನ್ನ ರೂಫಿಸುವ ಅನಿವಾರ್ಯತೆಯನ್ನು ಸೃಷ್ಟಿಸಬೇಕಾಗಿದೆ ಎಂದರು.
ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ವಾತಾವರಣವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಸ ಉದ್ದಿಮೆಗಳ ಸ್ಥಾಪನೆಗೆ ಹಾಗೂ ಇರುವಂತಹ ಉದ್ದಿಮೆಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇಂತಹ ಸಂಧರ್ಭದಲ್ಲಿ ನಮ್ಮ ಯುವ ಜನತೆ ತಮ್ಮದೇ ಆದ ಉದ್ದಿಮೆಗಳ ಸ್ಥಾಪನೆ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ನಮ್ಮ ಶಿಕ್ಷಣ ಪದ್ದತಿಯಲ್ಲಿ ಕೌಶಲ್ಯದ ಅಳವಡಿಕೆ ಹಾಗೂ ಸ್ವಂತ ಉದ್ಯಮ ಪ್ರಾರಂಭಿಸಲು ಅಗತ್ಯ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ಎಫ್ಕೆಸಿಸಿಐ ಕೈಗೊಂಡಿರುವ ಮಂಥನ್ ಕಾರ್ಯಕ್ರಮ ಹೊಸ ಆವಿಷ್ಕಾರಗಳು, ಸಂಶೋಧನೆಗಳನ್ನ ಕೈಗೊಂಡು ಬೆರಗು ಮೂಡಿಸುತ್ತಿರುವ ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ. ಅಲ್ಲದೇ, ಪರಿಣಿತ ಕೈಗಾರಿಕೋದ್ಯಮಿಗಳು ಅವರಿಗೆ ಮಾರ್ಗದರ್ಶನ ಮಾಡುವ ಪರಿಕಲ್ಪನೆ ಬಹಳ ವಿನೂತನವಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ವಿದ್ಯಾರ್ಥಿಗಳು ಅಷ್ಟೇ ಅಲ್ಲದೇ, ಪಾಲ್ಗೊಂಡ ಎಲ್ಲರೂ ಕೂಡಾ ಸ್ವಂತ ಬಲದ ಮೇಲೆ ಹೊಸ ಉದ್ಯಮ ಪ್ರಾರಂಭಿಸುವ ತಮ್ಮ ಕನಸು ನನಸಾಗುವಂತೆ ಪ್ರಯತ್ನಪಡಬೇಕು ಎಂದು ಹೇಳಿದರು.
ಎಫ್ಕೆಸಿಸಿಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಪ್ರಸಕ್ತ ಸಾಲಿನ ಮಂಥನ್ – 2024 ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ 395 ತಂಡಗಳು ಭಾಗಿಯಾಗಿ ತಮ್ಮ ಯೋಜನೆಯನ್ನ ನಮ್ಮ ಮುಂದೆ ಪ್ರಸ್ತುತಪಡಿಸಿವೆ. ಮಂಥನ್ ಕೇವಲ ಸ್ಪರ್ಧೆಯಲ್ಲ, ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಎಫ್ಕೆಸಿಸಿಐ ಪ್ರಸ್ತಾವನೆ ರೂಪಿಸುವ ನಿಟ್ಟಿನಲ್ಲಿ ಪಾಲ್ಗೊಂಡ ತಂಡಗಳಿಗೆ ಮಾರ್ಗದರ್ಶನ ನೀಡಿತ್ತು. ತಮ್ಮ ಯೋಜನೆಯನ್ನ ಉದ್ದಿಮೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಬೇಕಾದಂತಹ ಕೌಶಲ್ಯ ಹಾಗೂ ತಂತ್ರಗಳ ಬಗ್ಗೆ ಅವರಲ್ಲಿ ತಿಳುವಳಿಕೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಯಶಸ್ವಿ ಉದ್ದಿಮೆದಾರರಾಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ. ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನಮ್ಮ ಎಲ್ಲಾ ಸಲಹೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಪ್ರಥಮ ಸ್ಥಾನ ಪಡೆದ ಉಡುಪಿಯ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶ್ ತಂಡಕ್ಕೆ ಮೂರು ಲಕ್ಷ ರೂಪಾಯಿಗಳ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡನೇ ಸ್ಥಾನ ಪಡೆದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಹಿಳಾ ತಂಡಕ್ಕೆ ಒಂದುವರೆ ಲಕ್ಷ ರೂಪಾಯಿಗಳ ನಗದು, ಮೂರನೇ ಸ್ಥಾನ ಪಡೆದ ಬೆಂಗಳೂರಿನ ಶೇಷಾದ್ರಿಪುರಂ ಪೋಸ್ಟ್ ಗ್ರಾಜುಯೇಟ್ ಡಿಪಾರ್ಪ್ಮೆಂಟ್ ಆಫ್ ಕಾಮರ್ಸ್ ತಂಡಕ್ಕೆ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬಿಎಂಎಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ನ ತಂಡಕ್ಕೆ ನಾಲ್ಕನೇ ಸ್ಥಾನ, ಆರ್ವಿ ವಿಶ್ವವಿದ್ಯಾಲಯದ ತಂಡ ಐದನೇ ಸ್ಥಾನ, ಪಿಇಎಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡಕ್ಕೆ ಆರನೇ ಸ್ಥಾನ, ಸಿಎಂಆರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡ ಏಳನೇ ಸ್ಥಾನ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನೀಯರಿಂಗ್ನ ತಂಡ ಎಂಟನೇ ಸ್ಥಾನ, ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಾಲಜಿಯ ತಂಡ ಒಂಬತ್ತನೇ ಸ್ಥಾನ ಹಾಗೂ ಕೃಷಿ ಕಾಲೇಜು ಧಾರವಾಡದ ವಿದ್ಯಾರ್ಥಿಗಳ ತಂಡ ಹತ್ತನೇ ಸ್ಥಾನ ಪಡೆದುಕೊಂಡಿವೆ. ಆಯ್ಕೆಯಾದ ಎಲ್ಲಾ ತಂಡಗಳಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.