ಬೆಂಗಳೂರು, (www.thenewzmirror.com);
ಪರಿಷ್ಕೃತಗೊಂಡ ಪಿಂಚಣಿಯ ಬಾಕಿ ಮೊತ್ತ ಬಿಡುಗಡೆಗೆ 50 ಸಾವಿರ ಲಂಚ ಕೇಳಿದ್ದ ಬೆಸ್ಕಾಂ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ ಗಿರೀಶ್ ಅವರನ್ನು ಅಮಾನತು ಮಾಡಬೇಕು ಎಂದು ಸ್ಥಳದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸಿ 2007 ರಲ್ಲಿ ನಿವೃತ್ತಿ ಹೊಂದಿದ್ದೇನೆ.15 ವರ್ಷಗಳಿಂದ ಅಲೆದು ಸುಸ್ತಾಗಿದ್ದೇನೆ ಎಂದು ಅವಲತ್ತುಕೊಂಡ ಎಸ್.ಎಂ. ಗೋವಿಂದಪ್ಪ ಅವರಿಗೆ ಕೆಲವೇ ದಿನಗಳಲ್ಲಿ ನಿಮಗೆ ನಿವೃತ್ತಿ ವೇತನ ದೊರೆಯುತ್ತದೆ ಎಂದು ಭರವಸೆ ನೀಡಿದರು.
ನಗರದ ಶೇಷಾದ್ರಿಪುರಂನ ಶಿರೂರು ಮೈದಾನದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಸರಣಿ ಕಾರ್ಯಕ್ರಮದ 5 ನೇ ಆವೃತ್ತಿಯು ಅನೇಕ ಜನಪರ ಸ್ಪಂದನೆಗಳಿಗೆ ಸಾಕ್ಷಿಯಾಯಿತು.
ವೇದಿಕೆಯ ಮುಂಭಾಗ ಜಮಾಯಿಸಿದ್ದ 100 ಕ್ಕೂ ಹೆಚ್ಚು ಮಲ್ಲೇಶ್ವರದ ಬೀದಿಬದಿ ವ್ಯಾಪಾರಿಗಳು ಶಿವಕುಮಾರ್ ಸಾರ್ ನಮಗೆ ವ್ಯಾಪಾರ ಮಾಡಲು ಸ್ಥಳವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು “ನೀವು ಎಲ್ಲಿದ್ದೀರೋ ಅಲ್ಲಿಗೆ ಬರುತ್ತೇನೆ, ನಿಮ್ಮ ಸಮಸ್ಯೆ ಆಲಿಸುತ್ತೇನೆ ಎಂದು ವೇದಿಕೆ ಇಳಿದು ಬೀದಿಬದಿ ವ್ಯಾಪಾರಿಗಳು ಇದ್ದಲ್ಲಿಗೆ ಡಿಸಿಎಂ ಅವರು ತೆರಳಿದರು.
ಪಾಲಿಕೆ ವತಿಯಿಂದ ತಳ್ಳುವ ಗಾಡಿಗೆ 10 ಸಾವಿರ ನೀಡಲಾಗುವುದು. ಸಾರ್ವಜನಿಕರಿಗೆ ಹಾಗೂ ನಿಮಗೆ ಇಬ್ಬರಿಗೂ ತೊಂದರೆ ಆಗದಂತೆ ತೀರ್ಮಾನ ಮಾಡಲಾಗುವುದು ಎಂದಾಗ ಜೈಕಾರ ಕೂಗಿ ಬೀದಿಬದಿ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ನಾನು ಅಂಗವಿಕಲ, ಸಾಕಷ್ಟು ಕಡೆ ಕೆಲಸಕ್ಕೆ ಅಲೆದಿರುವೆ, ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಒಂದು ಸರ್ಕಾರಿ ಕೆಲಸ ಕೊಡಿಸಿ ಎಂದು ಕಾಟನ್ ಪೇಟೆಯ ಮಹಮದ್ ಯೂನಸ್ ಮನವಿ ನೀಡಿದಾಗ ಸರ್ಕಾರಿ ಕೆಲಸ ಕೊಡಲು ಆಗುವುದಿಲ್ಲ. ಸರ್ಕಾರಿ ಕೆಲಸ ಬೇಕೆಂದರೆ ಅರ್ಜಿ ಕರೆದಾಗ ಹಾಕಬೇಕು. ಸರ್ಕಾರದಿಂದ ಉದ್ಯೋಗ ಮೇಳ ಮಾಡುತ್ತೇವೆ, ಆಗ ಏನಾದರೂ ಸಹಾಯ ಮಾಡಬಹುದು ಎಂದು ಡಿಸಿಎಂ ಯುವಕನಿಗೆ ತಿಳಿಸಿದರು.
ಬಿಡಿಎ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕೆ ದುಡ್ಡು ಕಟ್ಟಿದ್ದರೂ ನಮಗೆ ನಿವೇಶನ ನೀಡಿಲ್ಲ ಎಂದು ಅಬ್ಬಿಗೆರೆಯ ಗಾಯತ್ರಿ ಬಾಯಿ ಅವರು ಕಣ್ಣೀರಾದರು.
‘ಅಳಬೇಡಮ್ಮ…’ ಎಂದ ಡಿಸಿಎಂ ಅವರು ಬಿಡಿಎ ಆಯುಕ್ತರಾದ ಜಯರಾಂ ಅವರಿಗೆ “ಇಲ್ಲೇ ಈ ಸಮಸ್ಯೆ ಬಗೆಹರಿಸಿ” ಎಂದು ಸೂಚನೆ ನೀಡಿದರು.