ದೇಶದ ನಾಲ್ಕು ಮಹಾನಗರಗಳಲ್ಲೇ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಿದೆ: ಆತಂಕ ಮೂಡಿಸುತ್ತಿದೆ NCRB ಬಿಡುಗಡೆ ಮಾಡಿದ ವರದಿ..!!
ಬೆಂಗಳೂರು, (www.thenewzmirror.com) ;
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸಣ್ಣಪುಟ್ಟ ತೊಂದರೆ ಆದರೂ ಆತ್ಮಹತ್ಯೆಯಂಥಹ ನಿರ್ಧಾರ ಕೈಗೊಂಡು ತಮ್ಮ ಅಮೂಲ್ಯವಾದ ಜೀವನವನ್ನ ಹಾಳು ಮಾಡಿಕೊಳ್ತಿದ್ದಾರೆ. ವಿದ್ಯಾರ್ಥಿಗಳ ಮನಸ್ಥಿತಿ ಬದಲಿಸುವ ನಿಟ್ಟಿನಲ್ಲಿ ಮಲ್ಲೇಶ್ವರಂ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಸದಾಶಿವ ನಗರದ ಬಾಷ್ಯಂ ಸರ್ಕಲ್ ಸಿಗ್ನಲ್ ನಲ್ಲಿ ಜಾಗೃತಿ ಮೂಡಿಸಲಾಯಿತು.
ದೇಶದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಸಾಮಾಜಿಕ ಕಾರ್ಯಕರ್ತೆ ಸಪ್ನಾ ಸಿಂಗ್ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಸಪ್ನಾ ಸಿಂಗ್, ಎನ್ ಸಿ ಆರ್ ಬಿ 2023 ರಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ದೇಶದಲ್ಲಿ 2022 ಕ್ಕೆ ಹೋಲಿಸಿದರೆ 2023 ರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಿದೆ ಎಂದು ಉಲ್ಲೇಖವಾಗಿದೆ ಅಂತ ಆತಂಕ ವ್ಯಕ್ತಪಡಿಸಿದರು.
2022ರಲ್ಲಿ ಸುಮಾರು 6000 ಪ್ರಕರಣಗಳಿದ್ದರೆ 2023ರಲ್ಲಿ ಇದು ದುಪ್ಪಟ್ಟಾಗಿದೆ. ಇದು ಕೇವಲ ವಿದ್ಯಾರ್ಥಿಗಳ ಆತ್ಮಹತ್ಯೆ ಅಂಕಿಅಂಶ. ಕಳೆದ ದಶಕದಲ್ಲಿ, 0-24 ವಯೋಮಾನದ ಜನಸಂಖ್ಯೆ 582 ದಶಲಕ್ಷದಿಂದ 581 ದಶಲಕ್ಷಕ್ಕೆ ಇಳಿದಿದ್ದರೂ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 6,654 ರಿಂದ 13,044ಕ್ಕೆ ತೀವ್ರವಾಗಿ ಏರಿಕೆಯಾಗಿದೆ ಎಂದರು.
ದೇಶದ ನಾಲ್ಕು ಮಹಾನಗರಗಳ ಅಂಕಿ ಅಂಶಗಳನ್ನು ಗಮನಿಸಿದರೆ ದೆಹಲಿ ನಗರವು (2,760) ಅತ್ಯಧಿಕ ಆತ್ಮಹತ್ಯೆಗಳ ಸಂಖ್ಯೆಯನ್ನು ದಾಖಲಿಸಿದೆ. ದೆಹಲಿಯ ನಂತರ ಚೆನ್ನೈ (2,699), ಬೆಂಗಳೂರು (2,292) ಮತ್ತು ಮುಂಬೈ (1,436) ಸ್ಥಾನದಲ್ಲಿವೆ. ಈ ನಾಲ್ಕು ನಗರಗಳು ಒಟ್ಟು ಗೂಡಿ 53 ಮಹಾನಗರಗಳಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ 35.5% ರಷ್ಟು ಪ್ರಮಾಣವನ್ನು ದಾಖಲಾಗಿರುವುದು ದುರಾದೃಷ್ಟ ಎಂದು ವಿಷಾದ ವ್ಯಕ್ತಪಡಿಸಿದರು.
2022ರಲ್ಲಿ, ಆತ್ಮಹತ್ಯೆಗಳ ಪ್ರಮಾಣವು 2021ರಿಗಿಂತ 4.2% ಹೆಚ್ಚಾಗಿದೆ, 100,000 ಜನಸಂಖ್ಯೆಗೆ 12 ರಿಂದ 12.4ಕ್ಕೆ (1,64,033 ರಿಂದ 1,70,924) ಏರಿಕೆಯಾಗಿದೆ. ಇದು 56 ವರ್ಷಗಳಲ್ಲಿ ದಾಖಲಾಗಿರುವ ಅತೀ ಹೆಚ್ಚಿನ ಪ್ರಮಾಣವಾಗಿದೆ
15 ರಿಂದ 24 ವರ್ಷದ ವಯೋಮಾನದ ಪ್ರತೀ ಏಳರಲ್ಲಿ ಒಬ್ಬರು ದೀರ್ಘಕಾಲದ ಮನೋವೈಕಲ್ಯವನ್ನು ಎದುರಿಸುತ್ತಿದ್ದು, ಇದರಲ್ಲಿ 41%ದಷ್ಟು ಜನ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದು ಇನ್ನುಳಿದ ಈ ವರ್ಗ ಆತ್ಮಹತ್ಯೆಗೆ ಹೆಚ್ಚು ಬಲಿಯಾಗುತ್ತಿದೆ. ಹೀಗಾಗಿ ಆತ್ಮಹತ್ಯೆ ನಿಮ್ಮ ಸಮಸ್ಯೆಗೆ ಪರಿಹಾರವಲ್ಲ. ಅತ್ಯಮೂಲ್ಯವಾದ ನಿಮ್ಮ ಜೀವನವನ್ನ ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಯಿತು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.