ಬೆಂಗಳೂರು(www.thenewzmirror.com): ಉತ್ತರ ಕರ್ನಾಟಕ ಹುಲಿ, ಹಿಂದುತ್ವದ ಫೈರ್ ಬ್ರಾಂಡ್ ಎಂದು ಕರೆಸಿಕೊಳ್ಳುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಾಥಮಿಕ ಸದಸತ್ವ ದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವದನ್ನು ಖಂಡಿಸಿ ಇಂದು ಹಿಂದೂಪರ ಸಂಘಟನೆಗಳ ಮುಖಂಡರು ತುರ್ತು ಸುದ್ದಿಗೋಷ್ಠಿ ನಡೆಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಹಿರಿಯ ಮುಖಂಡರಾದ ಬಸವರಾಜ್ ದಿಂಡೂರು, ಮಲ್ಲನಗೌಡ ಪಾಟೀಲ್ ( ಕೋರವಾರ) ಶಿವಕುಮಾರ್ ಮೇಟಿ, ಆನಂದ್ ಬಿರಾದಾರ್ ಸೇರಿದಂತೆ ಹಲವು ಮುಖಂಡರು ಸಭೆ ಸೇರಿ ಯತ್ನಾಳ್ ಅವರನ್ನು ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಮುಖಂಡರು, ನೇರ ನಿಷ್ಟುರವಾದ ಮಾತುಗಳಿಂದ, ಮತ್ತು ಈ ದೇಶದಲ್ಲಿ ಹಿಂದುತ್ವದ ಬಗ್ಗೆ ಉಗ್ರವಾಗಿ ಪ್ರತಿಪಾದಿಸುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿರವುದು ನೋವಿನ ಸಂಗತಿ. ಕೂಡಲೇ ಪಕ್ಷ ಹಾಗೂ ಹೈಕಮಾಂಡ್ ನಾಯಕರು ತಮ್ಮ ಕ್ರಮವನ್ನು ಮರುಪರಿಶೀಲನೆ ಮಾಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಒಕ್ಕೊರೊಲಿನಿಂದ ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಎಲ್ಲ ಮುಖಂಡರು ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕರು, ಯಾವುದೇ ಭ್ರಷ್ಟಾಚಾರ ಮಾಡದೇ ಶುದ್ಧಹಸ್ತ ರಾಜಕಾರಣ ಮಾಡಿಕೊಂಡು, ಜೊತೆಗೆ ದೇಶಕ್ಕೆ ರಾಜ್ಯಕ್ಕೆ ಹಿಂದುತ್ವದ ವಿಚಾರದಲ್ಲಿ ಧಕ್ಕೆ ಬಂದಾಗ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡು ಹಲವು ಹೋರಾಟಗಳಲ್ಲಿ ಪಾಲ್ಗೊಂಡು ಅತೀ ದೊಡ್ಡ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರ ಏಳ್ಗೆ ಕಂಡು ಕೆಲವರಿಗೆ ಅಸಮಾಧಾನ, ಹೊಟ್ಟೆಕಿಚ್ಚು ಬಂದಿದ್ದು, ಹೈಕಮಾಂಡ್ ನಾಯಕರಿಗೆ ಇಲ್ಲಸಲ್ಲದ ಹೇಳಿಕೆ ನೀಡಿ ಅವರನ್ನು ಇಂದು ಉಚ್ಚಾಟನೆ ಮಾಡಿಸಿದ್ದಾರೆ. ಇಂದು ಕರ್ನಾಟಕದಲ್ಲಿ ವಕ್ಫ್ ಹೋರಾಟದಲ್ಲಿ ತಾವೇ ಮುಂದೆ ನಿಂತು ಉಪವಾಸ ಸತ್ಯಾಗ್ರಹ ಮಾಡಿ ಅದ್ರಲ್ಲಿ ಮುಂದಾಳತ್ವ ವಹಿಸಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಶ್ರಮಿಸಿದ್ದಾರೆ. ಇಷ್ಟೆಲ್ಲ ಮಾಡಿದರು ಬಿಜೆಪಿ ಹೈಕಮಾಂಡ್ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಡೆಸಿಕೊಂಡು ರೀತಿ ಎಲ್ಲ ಹಿಂದೂಪರ ಸಂಘಟನೆ ಹಾಗೂ ಮುಖಂಡರಿಗೆ ವಿಶೇಷ ವಾಗಿ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಮುಂಬೈ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ, ಬಸನಗೌಡ ಅವರನ್ನು ಬೆಂಬಲಿಸಿ ರಾಜ್ಯದ ಎಲ್ಲ ಕಡೆ ಈಗಾಗಲೇ ಪ್ರತಿಭಟನೆ, ಬಂದ್ ನಡೆಯುತ್ತಿದೆ, ಕೂಡಲೇ ಇದನ್ನು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ಹಿರಿಯ ಮುಖಂಡರು ಮತ್ತು ಹಿಂದುತ್ವದ ನಾಯಕರು ಗಮನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ನೂರಾರು ಮುಖಂಡರು ಪಾಲ್ಗೊಂಡು ಮುಂದಿನ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಬಿಜೆಪಿ ಹೈಕಮಾಂಡ್ ಹಾಗೂ ಪಕ್ಷದ ನಾಯಕರ ವಿರುದ್ಧ ಬಹುದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಆನಂದ್ ಬಿರಾದಾರ್ ಮಾಧ್ಯಮಕ್ಕೆ ತಿಳಿಸಿದರು.