ಬೆಂಗಳೂರು(www.thenewzmirror.com): ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ,ಬೂದಿಮುಚ್ಚಿದ ಕೆಂಡದಂತೆ ಆಗಾಗ ನಾಯಕತ್ವ ಬದಲಾವಣೆ ಹೇಳಿಕೆ ಸ್ವಪಕ್ಷೀಯರಿಂದಲೇ ಬರುತ್ತಿರುವುದು ಇದಕ್ಕೆ ನಿದರ್ಶನ,ಡಿಕೆ ಶಿವಕುಮಾರ್ ಇದರ ಹಿಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಖಚಿತವಾಗಿ ಸಿಎಂ ಬದಲಾವಣೆಯಾಗಲಿದೆ. ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲ ಶಾಸಕರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ ಭಯದಿಂದ ಸ್ವತಃ ಸಿದ್ದರಾಮಯ್ಯನವರೇ ಅದನ್ನು ಪದೇ ಪದೆ ಹೇಳುತ್ತಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿ.ಕೆ.ಶಿವಕುಮಾರ್ ಅವರೇ ಈ ರೀತಿಯ ಸಂದೇಶ ನೀಡುತ್ತಿದ್ದಾರೆ.2028 ರವರೆಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅದನ್ನು ಆರನೇ ಗ್ಯಾರಂಟಿ ಎಂದು ಅಂದುಕೊಂಡು ಸುಮ್ಮನಾಗುತ್ತೇವೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು ಸೂಕ್ತವಲ್ಲ. ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ಹೆಸರು ಬದಲಿಸುತ್ತಿದ್ದಾರೆ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು. ಬೆಂಗಳೂರನ್ನು ಈಗಾಗಲೇ ಒಡೆದುಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ. ಬೆಂಗಳೂರು ಅಭಿವೃದ್ಧಿ ಮಾಡುವುದು ಬಿಟ್ಟು, ನಾಮಫಲಕ ಬದಲಿಸುವುದರಿಂದ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ದಕ್ಷಿಣ, ಉತ್ತರ ಎಂದು ಹೆಸರು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಜಾತಿ ಗಣತಿ ವರದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ಮಾಡುವಾಗ ಇವರು ಮತ್ತೆ ಗಣತಿ ಮಾಡಿದರೆ ಅದಕ್ಕೆ ಕಿಮ್ಮತ್ತಿನ ಬೆಲೆ ಇಲ್ಲ. ಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದರು.
ಬಿಜೆಪಿ ಹೋರಾಟಕ್ಕೆ ಜಯ:
ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ನೀಡಿರುವುದರಿಂದ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಕೋರ್ಟ್ ನಮಗೆ ನಿಜವಾದ ನ್ಯಾಯ ನೀಡಿದೆ ಎಂದರು.
ಆರ್ಎಸ್ಎಸ್ ನಿಷೇಧ ಮಾಡಿದರೆ, ಮತ್ತೆ ಸಂಘಟನೆ ಪುಟಿದೇಳುತ್ತದೆ. ನಾನು, ಪ್ರಧಾನಿ ನರೇಂದ್ರ ಮೋದಿ, ಅನೇಕ ರಾಜ್ಯಗಳ ರಾಜ್ಯಪಾಲರು, ಹಲವಾರು ಸಂಸದರು, ಶಾಸಕರು ಆರ್ಎಸ್ಎಸ್ನಲ್ಲಿದ್ದಾರೆ. ಸಂಘಟನೆಯಲ್ಲಿ ಶಿಸ್ತನ್ನು ಕಲಿಸಲಾಗುತ್ತದೆ. ಆರ್ಎಸ್ಎಸ್ ಬಗ್ಗೆ ತಿಳಿದು ಮಾತನಾಡಬೇಕು. ಅದು ದೇಶಭಕ್ತ ಸಂಘಟನೆಯಾಗಿದ್ದು, ಅದರ ಬಗ್ಗೆ ಮಾತನಾಡುವಾಗ ಸ್ವಲ್ಪ ಅರಿವು ಇರಬೇಕು. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ ಪದ ಇಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಲಿ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿದೆ. ಇವೆರಡೂ ಪದಗಳು ಸಂವಿಧಾನದ ಪುಸ್ತಕಕ್ಕೆ ಸೇರ್ಪಡೆಯಾಗುವಾಗ ಕೂಡ ಸಂಸತ್ತಿನಲ್ಲಿ ಚರ್ಚೆಯಾಗಿಲ್ಲ ಎಂದರು.