ಬೆಂಗಳೂರು(www.thenewzmirror.com):ಆರ್ ಎಸ್ ಎಸ್ ನಲ್ಲಿ ಕಪಟತನವಿದೆ. ದೇಶ ಕಟ್ಟೋಕೆ ಬಂದಿದ್ದೇವೆ ಅಂತಾ ಹೇಳ್ತಾರೆ. ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ? ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಘದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ ಎಸ್ ಎಸ್ ರಿಜಿಸ್ಟರ್ ಆಗಿಲ್ಲ. ಹಾಗಾದ್ರೆ ಏನು ಅದು? ಅದಕ್ಕೆ ಕೇಂದ್ರ ಕಚೇರಿ ಇದೆ, ಸದಸ್ಯರು ಪದಾಧಿಕಾರಿಗಳು ಇದ್ದಾರೆ. ಬಿಜೆಪಿ ನಾಯಕರು ಸದಸ್ಯರಾಗಿದ್ದೇವೆ ಅಂತಾ ಹೇಳುತ್ತಾರೆ. ಸಂಸ್ಥೆಯೇ ರಿಜಿಸ್ಟರ್ ಆಗದೆ ಇದ್ರೆ ಇದೆಲ್ಲ ಹೇಗೆ? ಏನು? ಅರ್ಥವೇ ಆಗುವುದಿಲ್ಲ. ಸಣ್ಣ, ಪುಟ್ಟ ಸಂಸ್ಥೆಗಳೂ ರಿಜಿಷ್ಟರ್ ಆಗಿರುತ್ತದೆ ಎಂದು ಟೀಕಿಸಿದರು.
ಆರ್ ಎಸ್ ಎಸ್ ಆಸ್ತಿ ಇದೆ ಅಂತಾರೆ. ಸಾರ್ವಜನಿಕರು, ಸದಸ್ಯರು ದೇಣಿಗೆ ನೀಡುತ್ತಾರೆ ಎಂದು ಹೇಳುತ್ತಾರೆ, ಸರಿ. ಯಾರು ಎಷ್ಟು ಕೊಟ್ಟರು?ಏನು ಕೊಟ್ಟರು ಲೆಕ್ಕ ಬೇಕಲ್ಲ. ಶಾಲೆಗಳು, ಯುನಿವರ್ಸಿಟಿ ಮಾಡಿದ್ದೇವೆ ಎನ್ನುತ್ತಾರೆ. ಅಷ್ಟೊಂದು ದೇಣಿಗೆ ಕೊಟ್ಟವರಾರು. ನೋಂದಣಿಯೇ ಆಗದ ಸಂಸ್ಥೆಗೆ ಇಷ್ಟೊಂದು ದೇಣಿಗೆ ಬರುತ್ತದಾ? ಬರಲಿ ನಮಗೆ ಅಸೂಯೆ ಇಲ್ಲ. ಆದರೆ ಅದಕ್ಕೊಂದು ಲೆಕ್ಕ ಬೇಕಲ್ಲ. ಅದನ್ನು ಕೇಳಿದರೆ ದೇಶದ್ರೋಹಿಗಳು ಅಂತಾರೆ ಎಂದರು.
ಆರ್ ಎಸ್ ಎಸ್ ಗೂ ಹಿಂದುಗಳಿಗೂ ಏನು ಸಂಬಂಧ. ನಾನು ಆರ್ ಎಸ್ ಎಸ್ ಅಲ್ಲ. ನಾನು ಹಿಂದೂ. ಇವರು, ಸಮಾಜದಲ್ಲಿ ಆರ್ ಎಸ್ ಎಸ್ ನವರು ಮಾತ್ರ ಹಿಂದುಗಳು, ದೇಶಪ್ರೇಮಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಆರ್ ಎಸ್ ಎಸ್ ನಲ್ಲಿದ್ರೆ ಮಾತ್ರ ಹಿಂದೂಗಳಾ? ಇದ್ಯಾವ ನೀತಿ.
ಭಾಗವತ್ ಅವರು ಗೋಲ್ವಾಕರ್ ಬಗ್ಗೆ ಮಾತನಾಡಬೇಕಿತ್ತು. ಅವರ ಬಗ್ಗೆ ಮಾತನಾಡದೆ ರವಿಂದ್ರನಾಥ್ ಟ್ಯಾಗೋರ್, ನೇತಾಜಿ, ಸರ್ದಾರ್ ಪಟೇಲ್ ಅವರುಗಳ ಬಗ್ಗೆ ಮಾತನಾಡಿದ್ದಾರೆ. ಅವರಿಗೂ ಆರ್ ಎಸ್ ಎಸ್ ಗೂ ಸಂಬಂಧ ಇದ್ಯಾ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ನಲ್ಲಿ ಕಪಟತನವಿದೆ. ದೇಶಕಟ್ಟೋಕೆ ಬಂದಿದ್ದೇವೆ ಅಂತಾ ಹೇಳ್ತಾರೆ. ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಅಷ್ಟೇ. ದೇಶದ ಜನರ ನಡುವೆಯೇ ಇವರು ಜಗಳ ತಂದಿಡುತ್ತಿದ್ದಾರೆ. ಮಹಾತ್ಮ ಗಾಂಧಿ ಕೊಂದವರು ಯಾರು? ಯಾವ ಹಿನ್ನೆಲೆಯಿಂದ ಬಂದವರು, ನೆನಪು ಮಾಡಿಕೊಳ್ಳಲಿ ಎಂದರು.
ವಿಧಾನಸೌಧದಲ್ಲೇ ಭಯೋತ್ಪಾದಕರು ಇದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ಉತ್ತರಿಸಿದ ಸಚಿವರು,ಕುಮಾರಸ್ವಾಮಿ ಕೇಂದ್ರದಲ್ಲಿ ದೊಡ್ಡ ಸಚಿವರು, ಅವರಿಗೆ ಮಾಹಿತಿ ಇರಬಹುದು. ಕೇಂದ್ರದ ಸಂಸ್ಥೆಗಳಿಂದ ತನಿಖೆ ಮಾಡಿಸಲಿ. ಇವರೆಲ್ಲ ಹೀಗೆ ಸುಮ್ಮನೆ ಮಾತಾಡ್ತಾರೆ ಅಷ್ಟೇ. ಹೆಚ್ಡಿಕೆ ಕೊಡುಗೆ ಕರ್ನಾಟಕಕ್ಕೆ ಶೂನ್ಯ ಎಂದು ಟೀಕಿಸಿದರು.







