ಬೆಂಗಳೂರು(www.thenewzmirror.com): ನಗರದಾದ್ಯಂತ ನೀರಿನ ಸೋರಿಕೆ ತಡೆಯಲು ಮತ್ತು ಅನಧಿಕೃತ ನೀರು ಹಾಗೂ ಒಳಚರಂಡಿ (ಸೀವೇಜ್) ಸಂಪರ್ಕಗಳನ್ನು ಪತ್ತೆ ಹಚ್ಚಲು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂ ಎಸ್ಎಸ್ ಬಿ) ಒಂದು ಮಹತ್ವದ ಮತ್ತು ವಿನೂತನ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಬಿಡಬ್ಲ್ಯೂ ಎಸ್ ಎಸ್ ಬಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಡಬ್ಲ್ಯೂ ಎಸ್ ಎಸ್ ಬಿಯ ಅಧ್ಯಕ್ಷ ವಿ.ರಾಮ್ ಪ್ರಸಾತ್ ಮನೋಹರ್ , “ಈ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ‘ಬ್ಲೂ ಫೋರ್ಸ್’ ವಿಶೇಷ ದಳದ ಪ್ರಾರಂಭ ಬಿಡಬ್ಲ್ಯೂ ಎಸ್ ಎಸ್ ಬಿಯು ತನ್ನ ಪ್ರತಿಯೊಂದು ಉಪವಿಭಾಗಕ್ಕೆ ಒಂದು ವಿಶೇಷ ‘ಬ್ಲೂ ಫೋರ್ಸ್’ ತಂಡವನ್ನು (ಒಟ್ಟು 16 ಮೂವರು ಸದಸ್ಯರು) ರಚಿಸಿದೆ. ಈ ವಿಶೇಷ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ” ಎಂದು ತಿಳಿಸಿದ್ದಾರೆ.
ಕಾರ್ಯ ಹೇಗೆ?: “ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚುವುದು, ಅನಧಿಕೃತವಾಗಿ ನೀರು ಸೋರುವಿಕೆ ಮತ್ತು ಬೈಪಾಸ್ ಸಂಪರ್ಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನೀರಿನ ಸೋರಿಕೆಯಿಂದ ಮಂಡಳಿಗೆ ಆಗುತ್ತಿರುವ ಭಾರಿ ಆರ್ಥಿಕ ನಷ್ಟವನ್ನು ತಡೆಗಟ್ಟುವುದು ಮತ್ತು ನೀರಿನ ನ್ಯಾಯಯುತ ವಿತರಣೆ ಖಚಿತಪಡಿಸುವುದು ಈ ವಿಶೇಷ ದಳದ ಉದ್ದೇಶವಾಗಿದೆ” ಎಂದು ವಿವರಿಸಿದ್ದಾರೆ.
“ರೋಬೋಟಿಕ್ ಮತ್ತು ಎಐ ತಂತ್ರಜ್ಞಾನದ ಅಳವಡಿಕೆ
ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅನಗತ್ಯ ರಸ್ತೆ ತೋಡುವಿಕೆಗೆ ಕಡಿವಾಣ ಹಾಕಲು ಮಂಡಳಿಯು ಪ್ರಮುಖ ರೋಬೋಟಿಕ್ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಈ ರೋಬೋಟ್ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ ಎಂಬುದು ಈ ಯೋಜನೆಯ ಪ್ರಮುಖ ಅಂಶವಾಗಿದೆ. ರೋಬೋ ಪರೀಕ್ಷೆಯಿಂದ ನಿಖರವಾದ ದೋಷದ ಸ್ಥಳ ಪತ್ತೆಯಾಗುವುದರಿಂದ, ರಸ್ತೆ ತೋಡುವಿಕೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ದೂರು ಪರಿಹಾರ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಅಕ್ರಮ ಸಂಪರ್ಕಗಳಿಂದ ಮಂಡಳಿಗೆ ಭಾರಿ ನಷ್ಟ ಉಂಟಾಗುತ್ತದೆ. ತಂತ್ರಜ್ಞಾನ ಮತ್ತು ಕಾನೂನು ಜಾರಿಗೊಂಡು ಎಲ್ಲ ಉಲ್ಲಂಘನೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಈ ವಿನೂತನ ಉಪಕ್ರಮದಿಂದ ಸುಮಾರು ಶೇಕಡ. 28ರಷ್ಟಿರುವ ನೀರಿನ ನಷ್ಟವನ್ನು ಗಣನೀಯವಾಗಿ ಕಡಿತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ,” ಎಂದು ತಿಳಿಸಿದ್ದಾರೆ.
* ತಂತ್ರಜ್ಞಾನದ ಉಪಯೋಗಗಳೇನು.?
* ಪೈಪ್ಲೈನ್ಗಳ ಒಳಭಾಗದ ನಿಖರ ಪರಿಶೀಲನೆ.
* ಎಐ ನಿಖರವಾದ ಲೀಕೇಜ್ ಸ್ಥಳ ಪತ್ತೆ
* ಆಧಾರಿತ ದೋಷ ಪತ್ತೆಹಚ್ಚುವಿಕೆ ಮತ್ತು ಸಂಪೂರ್ಣ ಪೈಪ್ಲೈನ್ ಜಾಲದ ಡಿಜಿಟಲ್ ಮ್ಯಾಪಿಂಗ್.






