ಮೈಸೂರು(www.thenewzmirror.com): ಜನರ ಆರೋಗ್ಯ ಚನ್ನಾಗಿದ್ದರೆ ಸಮಾಜದ ಆರೋಗ್ಯ ಸಹ ಚೆನ್ನಾಗಿರುತ್ತದೆ. ಅದಕ್ಕಾಗಿ ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡುವುದನ್ನು ದಿನಚರಿಯಲ್ಲಿ ರೂಢಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಮತ್ತು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ವತಿಯಿಂದ ಮೈಸೂರಿನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸ್ವಾಸ್ಥ್ಯ ಮೈಸೂರು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗದ ರಾಜಧಾನಿ ಮೈಸೂರಿನಲ್ಲಿ ಸ್ವಾಸ್ಥ್ಯ ಮೈಸೂರು ಕಾರ್ಯಕ್ರಮ ನಡೆಯುತ್ತಿದೆ. ಮೈಸೂರು ಪರಿಸರ ರಕ್ಷಣೆಗೆ ಮಾದರಿಯಾದ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ. ಸ್ವಚ್ಚತೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ದೇಶದ ಅಭಿವೃದ್ಧಿಯ ಸಂಕೇತ. ಒಂದು ದೇಶ ಜಿಡಿಪಿ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿರುತ್ತದೆಯೋ ಅಂತಹ ಕಡೆ ಅಸಾಂಕ್ರಮಿಕ ರೋಗಗಳು ಹೆಚ್ಚಳವಾಗುತ್ತಿದೆ. ಅದರಲ್ಲಿ ಭಾರತವೂ ಹೊರತಾಗಿಲ್ಲ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡಿನಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಇದಕ್ಕೆಲ್ಲ ಪ್ರಮುಖ ಕಾರಣ ಪ್ಯಾಕೆಟ್ ಆಹಾರ ಸೇವನೆ, ಫಾಸ್ಟ್ ಪುಡ್, ಬೀದಿ ಬದಿಯ ಆಹಾರ, ಕರಿದ ಪದಾರ್ಥಗಳು, ತಂಪು ಪಾನಿಯಾಗಳ ಸೇವನೆ ಹಾಗೂ ಒತ್ತಡದ ಜೀವನಶೈಲಿ. ಹಾಗಾಗಿ ಮದ್ಯಪಾನ, ಧೂಮಪಾನಗಳಂತಹ ಇತರೆ ದುಶ್ಚಟಗಳಿಂದ ದೂರ ಇರಬೇಕು.
ಆರೋಗ್ಯ ಇಲಾಖೆ, ಗೃಹ ಆರೋಗ್ಯ ಕಾರ್ಯಕ್ರಮದಡಿಯಲ್ಲಿ, ಕರ್ನಾಟಕದಾದ್ಯಂತ ಇದುವರೆಗೂ ಒಂದು ಕೋಟಿಗೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಇದರಿಂದ ಆರಂಭಿಕ ಹಂತದಲ್ಲೇ ರೋಗಪತ್ತೆಗೆ ಅನುಕೂಲವಾಗಲಿದ್ದು, ಉಚಿತ ಚಿಕಿತ್ಸೆ ಮತ್ತು ಅಗತ್ಯ ಔಷಧಗಳನ್ನು ವಿತರಿಸುತ್ತಿದ್ದೇವೆ ಎಂದರು.
ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ. ಸೋಶಿಯಲ್ ಮೀಡಿಯಾ, ಮೋಬೈಲ್ ಲಭ್ಯತೆ ಇವುಗಳಿಂದಾಗಿ ಮಕ್ಕಳಿಗೆ ಅವರ ವಯಸ್ಸಿಗಿಂತಲೂ ಹೆಚ್ಚಿನ ಮಾಹಿತಿ ಲಭಿಸುತ್ತದೆ. ಸರಿಯಾಗಿ ಗಮನಿಸಿ ನೋಡಿ, 12-13 ವರ್ಷ ವಯಸ್ಸಿನ ಮಕ್ಕಳು 20 ರ ತರುಣರಂತೆ ವ್ಯವಹರಿಸುತ್ತಾರೆ. ಇದರಿಂದ ಮಕ್ಕಳ ಬಾಲ್ಯ ಹಾಳಾಗುತ್ತಿದೆ. ಒತ್ತಡದಿಂದ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾದಂತ ದೇಶಗಳು ಆಯ್ದ ಪ್ರದೇಶಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋ಼ಶಿಯಲ್ ಮೀಡಿಯಾ ಬ್ಯಾನ್ ಮಾಡಿ ಅಧ್ಯಯನ ನಡೆಸುತ್ತಿದೆ ಎಂದರು.
ಆರೋಗ್ಯ ಸೇವೆಗಳನ್ನು ಸರ್ಕಾರ ಆದ್ಯತೆಯಿಂದ ನಿರ್ವಹಣೆ ಮಾಡುತ್ತದೆ. ಜೊತೆಜೊತೆಗೆ ಸಾರ್ವಜನಿಕ ಸಹಭಾಗಿತ್ವ, ಎನ್ ಜಿಒಗಳು ಸೇರಿದರೆ ಜನರಲ್ಲಿ ಅರಿವಿನ ಪ್ರಮಾಣ ಹೆಚ್ಚುತ್ತದೆ. ಜನರ ಆರೋಗ್ಯ ಚನ್ನಾಗಿದ್ದರೆ ಸಮಾಜದ ಆರೋಗ್ಯ ಸಹ ಚೆನ್ನಾಗಿರುತ್ತದೆ. ಅದಕ್ಕಾಗಿ ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡುವುದನ್ನು ದಿನಚರಿಯಲ್ಲಿ ರೂಢಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ. ರೋಗ ಪತ್ತೆಯಾದಾಗ ಚಿಕಿತ್ಸೆ ಪಡೆಯುವ ಬದಲು, ಕಾಯಿಲೆ ಬಾರದಂತೆ ಜಾಗ್ರತೆ ವಹಿಸುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ನಡುವೆ ಆರೋಗ್ಯ ಕಾರ್ಯಕ್ರಮಗಳ ಜಾರಿ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಯಿತು. ರಾಜ ವಂಶಸ್ಥೆ ಪ್ರಮೋದಾ ದೇವಿ, ಪದ್ಮಶ್ರೀ ಡಾ.ಖಾದರ್ ವಾಲಿ, ಡಾ.ನಳಿನಿ ಸಾಲಿಗ್ರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.






