ಮೈಸೂರು(www.thenewzmirror.com): ಪ್ರಾಣದ ಹಂಗು ತೊರೆದು ಮನೆಯೊಳಗೆ ನುಗ್ಗಿದ್ದ ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಮೈಸೂರಿನ ಸಿದ್ಧಾರ್ಥನಗರದ ಸುಜಾತ ಅವರ ಧೈರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸುಜಾತ ಅವರ ಈ ಸಾಹಸ ಕಾರ್ಯವನ್ನು ಗುರುತಿಸಿ ಮುಂದಿನ ವರ್ಷದ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆಯು ಮಂಚದ ಅಡಿಯಲ್ಲಿ ಅವಿತು ಕುಳಿತಿತ್ತು. ಈ ಆತಂಕದ ಸಮಯದಲ್ಲಿ ಸುಜಾತ ಅವರು ಎದೆಗುಂದದೆ, ತಕ್ಷಣವೇ ಕೊಠಡಿಯೊಳಗೆ ನುಗ್ಗಿ ವಯೋವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದರು. ಸಾವಿನ ದವಡೆಯಿಂದ ಅತ್ತೆಯನ್ನು ಪಾರು ಮಾಡಿದ ಸುಜಾತ ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಈಗ ರಾಜ್ಯಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಸುಜಾತ ಅವರ ಸಾಹಸವು ಮಹಿಳೆಯರ ಅಪ್ರತಿಮ ಶಕ್ತಿಗೆ ಸಾಕ್ಷಿಯಾಗಿದೆ. ಅತ್ತೆ-ಸೊಸೆಯ ಬಾಂಧವ್ಯದ ಬಗ್ಗೆ ಸಮಾಜದಲ್ಲಿರುವ ನಕಾರಾತ್ಮಕ ಕಲ್ಪನೆಗಳನ್ನು ತೊಡೆದುಹಾಕುವಲ್ಲಿ ಈ ಘಟನೆ ಮಾದರಿಯಾಗಿದೆ. ಇಂತಹ ಧೈರ್ಯವಂತ ಮಹಿಳೆಯರೇ ನಾಡಿನ ಶಕ್ತಿ,” ಎಂದು ಬಣ್ಣಿಸಿದ್ದಾರೆ.
ಪ್ರಶಸ್ತಿ ಘೋಷಣೆ:
ಸುಜಾತ ಅವರ ಶೌರ್ಯವನ್ನು ಗೌರವಿಸುವ ದೃಷ್ಟಿಯಿಂದ, ಅವರಿಗೆ ಮುಂದಿನ ಸಾಲಿನ ‘ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ’ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.






