ಬೆಂಗಳೂರು, (www.thenewzmirror.com);
ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರ ಜೀವ ತೆಗೆದಿದ್ದಾರೆ. ಮಿನಿ ಸ್ವಿಝರ್ಲ್ಯಾಂಡ್ನಂತಿದ್ದ ಪ್ರದೇಶ ಉಗ್ರರ ದಾಳಿಗೆ ರಕ್ತಸಿಕ್ತವಾಗಿ ಮಾರ್ಪಟ್ಟಿದೆ. ಉಗ್ರರ ಈ ಕೃತ್ಯಕ್ಕೆ ಭಾರತ ತಕ್ಕ ಪ್ರತುತ್ತರ ನೀಡಿದ್ದು, ರಾಜತಾಂತ್ರಿಕವಾದ ರೂಪದಲ್ಲಿ ಠಕ್ಕರ್ ನೀಡಿದೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಪ್ರಮುಖ ಐದು ನಿರ್ಧಾರ ಕೈಗೊಂಡಿದ್ದು, ಇದರಲ್ಲಿ 1960 ರ ಸಿಂಧೂ ಒಪ್ಪಂದವನ್ನ ರದ್ದು ಮಾಡಿರುವುದು. ಗೃಹಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಸಭೆ ನಡೆಸಿದ ಬಳಿಕ ಪ್ರಧಾನಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.



ಸಿಂಧೂ ನದಿ ಒಪ್ಪಂದ ರದ್ದಾಗಿದ್ದರಿಂದ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಹಾಗಿದ್ರೆ ಈ ಒಪ್ಪಂದ ಪಾಕಿಸ್ತಾನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ನೋಡುವುದಾದರೆ..,
ಏನಿದು ಸಿಂಧೂ ನದಿ ಒಪ್ಪಂದ ?
- ಭಾರತ ಮತ್ತು ಪಾಕಿಸ್ತಾನದ ನಡುವೆ 1960 ರಲ್ಲಿ ನಡೆದ ಒಂದು ಒಪ್ಪಂದ
- ಸಿಂಧೂ ಜಲ ಒಪ್ಪಂದ ಏಷ್ಯಾದ 2 ದೇಶಗಳ ನಡುವಿನ ಏಕೈಕ ಗಡಿಯಾಚೆಗಿನ ನೀರು ಹಂಚಿಕೆ ಒಪ್ಪಂದ
- ಸಿಂಧೂ ನದಿ ನೀರು ಒಪ್ಪಂದವನ್ನು ಈವರೆಗೆ ವಿಶ್ವದ ಅತ್ಯಂತ ಯಶಸ್ವಿ ನೀರು ಹಂಚಿಕೆ ಪ್ರಯತ್ನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ
- ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮೊಹಮ್ಮದ್ ಆಯುಬ್ ಖಾನ್ ಸಹಿ ಹಾಕಿದ್ದರು
- ಸುದೀರ್ಘ 9 ವರ್ಷಗಳ ಕಾಲ ನಡೆದ ಮಾತುಕತೆಗಳ ಬಳಿಕ, ಉಭಯ ದೇಶಗಳು ಈ ಒಪ್ಪಂದಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದವು
- ವಿಶ್ವ ಬ್ಯಾಂಕ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು
- ಒಪ್ಪಂದದ ವೇಳೆ ಭಾರತ-ಪಾಕಿಸ್ತಾನ ದೇಶಗಳು ನದಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿತ್ತು
- ಒಪ್ಪಂದದ ಪ್ರಕಾರ, ಪೂರ್ವದ ನದಿಗಳ ನೀರನ್ನು ಭಾರತವು ಬಳಸಿಕೊಳ್ಳಬಹುದಾಗಿತ್ತು
- ಪಶ್ಚಿಮದ ನದಿಗಳ ನೀರನ್ನು ಪಾಕಿಸ್ತಾನವು ಹೆಚ್ಚಾಗಿ ಬಳಸಬಹುದು
- ಭಾರತ ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ಕೆಲ ನಿಯಮಗಳನ್ನ ಪಾಲಿಸುವ ಮೂಲಕ ನಿರ್ಮಾಣ ಮಾಡಿತ್ತು
- ಸಿಂಧು ನದಿ ಒಪ್ಪಂದದನ್ವಯ ಭಾರತಕ್ಕೆ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳ ನೀರನ್ನು ಬಳಸುವ ಹಕ್ಕಿದೆ. ಇದು ಸುಮಾರು 33 ಮಿಲಿಯನ್ ಎಕರೆ ಫೀಟ್ (MAF)ನಷ್ಟು ನೀರನ್ನು ಬಳಸಬಹುದಾಗಿದೆ.
- ಪಾಕಿಸ್ತಾನಕ್ಕೆ ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ನೀರನ್ನು ಬಳಸುವ ಹಕ್ಕಿದೆ. ಇದು ಸುಮಾರು 135 ಮಿಲಿಯನ್ ಎಕರೆ ಫೀಟ್ (MAF) ನೀರನ್ನು ಬಳಸಿಕೊಳ್ಳುತ್ತದೆ.
- 62 ವರ್ಷಗಳ ಹಿಂದೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಭಾರತವು ಸಿಂಧೂ ಮತ್ತು ಅದರ ಉಪ ನದಿಗಳಿಂದ ಶೇಕಡಾ 19.5 ರಷ್ಟು ನೀರು ಪಡೆದರೆ, ಪಾಕಿಸ್ತಾನ ಸುಮಾರು ಶೇಕಡ 80 ರಷ್ಟು ನೀರು ಪಡೆಯುತ್ತದೆ.
- ಪಾಕಿಸ್ತಾನದ ಶೇ.65ರಷ್ಟು ಭೂಪ್ರದೇಶದ ಕೃಷಿಯು ಸಿಂಧೂ ಮತ್ತು ಉಪನದಿಗಳ ಮೇಲೆ ಅವಲಂಬಿತವಾಗಿದೆ.
- ಪಾಕಿಸ್ತಾನದಲ್ಲಿ ಬೇಡಿಕೆಯ ಶೇ.90ರಷ್ಟು ಆಹಾರ ಪದಾರ್ಥ ಬೆಳೆಯುವುದು ಸಿಂಧೂ ನದಿ ನೀರಿನಿಂದ.
- ಪಾಕಿಸ್ತಾನದ ಶೇ.68ರಷ್ಟು ಗ್ರಾಮೀಣ ಜನಸಂಖ್ಯೆ ಸಿಂಧು ನದಿ ನೀರಿನ ಮೇಲೆ ಅವಲಂಬಿತ.
- 1965, 1971 ಮತ್ತು 1999ರ ಯುದ್ಧದಂತಹ ಸಂದರ್ಭದಲ್ಲೂ ಈ ಒಪ್ಪಂದಕ್ಕೆ ಧಕ್ಕೆಯಾಗಿರಲಿಲ್ಲ.
ಸಿಂಧೂ ನದಿ ಒಪ್ಪಂದ ರದ್ದಾಗಿದ್ದರಿಂದ ಪಾಕ್ ಏನು ಮಾಡಬಹುದು?
- ಅಂತರರಾಷ್ಟ್ರೀಯ ನ್ಯಾಯಾಲಯ ಅಥವಾ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ ಸಂಪರ್ಕಿಸಬಹುದು
- ರಾಜತಾಂತ್ರಿಕ ಆಯ್ಕೆಗಳಲ್ಲಿ ವಿಶ್ವಬ್ಯಾಂಕ್ ಹಸ್ತಕ್ಷೇಪವನ್ನು ಕೋರಬಹುದು
- ಚೀನಾ ಮತ್ತು OIC ನಂತಹ ಮಿತ್ರರಾಷ್ಟ್ರಗಳಿಂದ ಬೆಂಬಲವನ್ನು ಪಡೆಯಬಹುದು
ಪಾಕಿಸ್ತಾನದಲ್ಲಿ ಏನಾಗಬಹುದು?
- ಪಾಕಿಸ್ತಾನದ ಸುಮಾರು 80% ನೀರಾವರಿ ಭೂಮಿ ಸಿಂಧೂ ನದಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ
- ಗೋಧಿ, ಅಕ್ಕಿ ಮತ್ತು ಹತ್ತಿಯಂತಹ ಪ್ರಮುಖ ಬೆಳೆಗಳ ಇಳುವರಿಯನ್ನು ಕಡಿಮೆ ಮಾಡಬಹುದು
- ದೇಶದ GDP ಮತ್ತು ಆಹಾರದ ಕೊರತೆಗೆ ಕಾರಣವಾಗಬಹುದು
- ಅಂತರ್ಜಲ ಸಮಸ್ಯೆ ಕಾಡಬಹುದು
- ಭೂಮಿಯ ಲವಣಾಂಶ ಕಡಿಮೆ ಆಗುವ ಸಾಧ್ಯತೆಯಿದೆ
- ಕಡಿಮೆ ನೀರಾವರಿಯು ಲವಣಾಂಶದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು
- ಶೇಕಡಾ 43 ರಷ್ಟು ಕೃಷಿಯೋಗ್ಯ ಭೂಮಿಯ ಮೇಲೆ ಪರಿಣಾಮ ಬೀರಬಹುದು
- 30% ರಷ್ಟು ವಿದ್ಯುತ್ ಪೂರೈಸುವ ತರ್ಬೆಲಾ ಮತ್ತು ಮಂಗ್ಲಾ ಅಣೆಕಟ್ಟುಗಳಿಂದ ಜಲವಿದ್ಯುತ್ ಉತ್ಪಾದನೆಯು ಕಡಿಮೆಯಾಗಬಹುದು
- ಗ್ರಾಮೀಣ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು
- ಲಾಹೋರ್ ಮತ್ತು ಕರಾಚಿಯಂತಹ ನಗರಗಳಲ್ಲಿ ನಗರ ವಲಸೆ ಒತ್ತಡ ಹೆಚ್ಚಾಗಬಹುದು
- ಬಾಸ್ಮತಿ ಅಕ್ಕಿ ಮತ್ತು ಜವಳಿಗಳಂತಹ ಕೃಷಿ ರಫ್ತುಗಳು ಕುಗ್ಗಬಹುದು
- ವಿದೇಶಿ ವಿನಿಮಯ ಸಂಗ್ರಹದ ಮೇಲೆ ಪರಿಣಾಮ ಬೀರಬಹುದು
- ರೂಪಾಯಿ ಮೌಲ್ಯ ದುರ್ಬಲವಾಗಬಹುದು
- ಪಾಕಿಸ್ತಾನವು ರಾಗಿಯಂತಹ ನೀರು ಕಡಿಮೆ ಬೇಕಾಗುವ ಸಮರ್ಥ ಬೆಳೆಗಳನ್ನು ಅಳವಡಿಸಿಕೊಳ್ಳಬೇಕಾಗಬಹುದು
ಪಹಲ್ಗಾಮ್ ಭಯೋತ್ಪಾದಕ ದಾಳಿ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದೆ. ಇದೀಗ ಸಿಂಧೂ ನದಿ ಒಪ್ಪಂದ ರದ್ದಾಗಿದ್ದರಿಂದ ಪಾಕಿಸ್ತಾನಕ್ಕೆ ನೀರಿನ ಸಮಸ್ಯೆ ಜೊತೆ ಪಾಕ್ನ ಆಹಾರ ಭದ್ರತೆಗೂ ಭಾರಿ ಹೊಡೆತ ಬೀಳಲಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಉಂಟಾಗಲಿದೆ. 2016 ರ ಉರಿ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿತು. ಪ್ರಧಾನಿ ನರೇಂದ್ರ ಮೋದಿ ಅವರು “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿದ್ದರು. ಆದರೆ ಇಲ್ಲಿಯವರೆಗೆ, ಅಂತಹ ಬೆದರಿಕೆಗಳು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಈಗ ಪಹಲ್ಗಾಮ್ ದಾಳಿ ಬಳಿಕ ಕಾರ್ಯರೂಪಕ್ಕೆ ಬಂದಿದ್ದು, ಇದೀಗ ಪಾಕಿಸ್ತಾನ ಯಾವ ರೀತಿ ನಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.