ಬೆಂಗಳೂರು, (www.thenewzmirror.com);
ಇನ್ಫೋಸಿಸ್ ಸಹ- ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರ ವಿರುದ್ಧ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅಟ್ರಾಸಿಟಿ ತಡೆ) ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ಈ ದೂರನ್ನು “ಕಾನೂನಿನ ಪ್ರಕ್ರಿಯೆಯ ದುರ್ಬಳಕೆ” ಎಂದು ಕರೆದಿದ್ದು, ದೂರುದಾರರ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಅವಕಾಶ ಒದಗಿಸಿದೆ.
ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಏಪ್ರಿಲ್ 16 ರಂದು ಈ ಆದೇಶವನ್ನು ನೀಡಿದ್ದು, ಈ ಕಂಪ್ಲೇಂಟ್ “ಅರ್ಜಿದಾರರಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಪ್ರಯತ್ನ” ಎಂದು ತಿಳಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಯ ಮಾಜಿ ಸಿಬ್ಬಂದಿ ಡಿ. ಸಣ್ಣ ದುರ್ಗಪ್ಪ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಈ ಎಫ್ಐಆರ್ ದಾಖಲಾಗಿತ್ತು. 2014ರಲ್ಲಿ ಲೈಂಗಿಕ ಕಿರುಕುಳ ಆರೋಪಗಳ ಕುರಿತಾದ ಆಂತರಿಕ ತನಿಖೆಯ ಬಳಿಕ ಸಣ್ಣ ದುರ್ಗಪ್ಪ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಕೋರ್ಟ್ ಗಮನಿಸಿದಂತೆ, ಈ ಪ್ರಕರಣವು 2015ರಲ್ಲಿ ಹೈಕೋರ್ಟ್ ನಲ್ಲಿ ಮುಂದೆ ಬಂದ ಬಳಿಕ ಕೆಲಸದಿಂದ ತೆಗೆದುಹಾಕಿರುವುದನ್ನು ರಾಜೀನಾಮೆಯಾಗಿ ಪರಿವರ್ತಿಸಲಾಯಿತು. ಆಗಿನ ಒಪ್ಪಂದದ ಭಾಗವಾಗಿ ಸಣ್ಣ ದುರ್ಗಪ್ಪ ಅವರು ಸಂಸ್ಥೆ ಮತ್ತು ಅದರ ಪ್ರತಿನಿಧಿಗಳ ವಿರುದ್ಧದ ಎಲ್ಲಾ ದೂರುಗಳು ಮತ್ತು ಕಾನೂನು ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರು.
ಹಾಗಿದ್ದರೂ ಅವರು ಎರಡು ಹೆಚ್ಚುವರಿ ಎಫ್ಐಆರ್ ಗಳನ್ನು ದಾಖಲಿಸಿದ್ದರು. ಈ ಎರಡೂ ಎಫ್ಐಆರ್ ಗಳನ್ನು 2022 ಮತ್ತು 2023 ರಲ್ಲಿ ರದ್ದುಗೊಳಿಸಲಾಯಿತು. ಪ್ರಸ್ತುತ ಎಫ್ಐಆರ್ ನಲ್ಲಿ ಸಮಾನ ಆರೋಪಗಳಿದ್ದು, ಇದು ನ್ಯಾಯಾಲಯ ಪ್ರಕ್ರಿಯೆಯ ದುರ್ಬಳಕೆ ಎಂದು ಕೋರ್ಟ್ ತಿಳಿಸಿದೆ.

ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಕ್ರಿಸ್ ಗೋಪಾಲಕೃಷ್ಣನ್, “ನಮ್ಮ ನ್ಯಾಯಾಲಯಗಳು ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಈ ತೀರ್ಪು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕಾನೂನಿನ ದುರ್ಬಳಕೆಗೆ ಅವಕಾಶವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಗೌರವಾನ್ವಿತ ಹೈಕೋರ್ಟ್ ಸುಳ್ಳುಗಳನ್ನು ಗುರುತಿಸಿ ಸತ್ಯವನ್ನು ಎತ್ತಿಹಿಡಿದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ,” ಎಂದು ಹೇಳಿದರು.
ಕೋರ್ಟ್ ನ ಹೇಳಿಕೆ ಪ್ರಕಾರ, ಆರೋಪಗಳು ಮೂಲತಃ ಸಿವಿಲ್ ಸ್ವರೂಪದ್ದಾಗಿದ್ದು, ತಪ್ಪಾಗಿ ಕ್ರಿಮಿನಲ್ ರೂಪವನ್ನು ನೀಡಲಾಗಿದೆ. ಈ ಆರೋಪಗಳು ಎಸ್ ಸಿ/ ಎಸ್ ಟಿ (ಅಟ್ರಾಸಿಟಿ ತಡೆ) ಕಾಯ್ದೆಯಡಿ ಬರುವುದಿಲ್ಲ ಎಂಬ ವಿಷಯವನ್ನು ತಿಳಿಸಿತು.
ಹೈಕೋರ್ಟ್ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ ಅರ್ಜಿದಾರರಿಗೆ ದುರ್ಗಪ್ಪ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಲು ಅಡ್ವೊಕೇಟ್ ಜನರಲ್ ರಿಂದ ಅನುಮತಿ ಪಡೆಯಲು ಅವಕಾಶ ನೀಡಿದೆ.