ಬೆಂಗಳೂರು(www.thenewzmirror.com): ಸಾವರ್ಕರ್ ಅವರೇ ತಮ್ಮ ಸೋಲಿಗೆ ಕಾರಣ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಮಲಕಾಂತ್ ಎನ್ನುವವರಿಗೆ ಬರೆದಿರುವ ಕೈಬರಹದ ಪತ್ರ ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರ ಸವಾಲಿಗೆ ತಿರುಗೇಟು ನೀಡಿದರಲ್ಲದೆ, ಮಾಡಿರುವ ಸವಾಲಿನಂತೆ ನಾರಾಯಣಸ್ವಾಮಿ ಅವರು ತಮ್ಮ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು “ಬಿಜೆಪಿ ಪಕ್ಷಕ್ಕೆ ವಿಧಾನ ಪರಿಷತ್ನ ವಿಪಕ್ಷ ನಾಯಕರ ಆಯ್ಕೆ ಮಾಡಬೇಕಾದ ಸನ್ನಿವೇಶ ಉದ್ಭವಿಸಿದೆ, ನಾರಾಯಣಸ್ವಾಮಿ ಅವರು ಹಲವಾರು ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಂದಿದ್ದಾರೆ, ಸದನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದವರ ಬಗ್ಗೆ ಚರ್ಚೆ ಆದ ಸಂದರ್ಭದಲ್ಲಿ ಬಾಬಾ ಸಾಹೇಬರ ಸೋಲಿಗೆ ಸಾವರ್ಕರ್ ಕಾರಣ ಅಂತ ಹೇಳಿದ್ದೆ. ನಾನು ಸದನದಲ್ಲಿ ಆ ಪತ್ರ ಓದಿದ್ದೇನೆ ಎಂದು ಹೇಳಿದರೆ ಯಾರೂ ನಂಬ್ತಿಲ್ಲ. ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸಾವರ್ಕರ್ ಸೋಲಿಸಿಲ್ಲ ಎಂದು ನಾರಾಯಣಸ್ವಾಮಿ ಚಾಲೆಂಜ್ ಮಾಡಿದ್ದರು” ಎಂದು ಹೇಳಿದರು.
ಈಗ ಪುನಃ ಮತ್ತೊಮ್ಮೆ ಛಲವಾದಿ ನಾರಾಯಣಸ್ವಾಮಿಯವರು ಇದೇ ಪ್ರಶ್ನೆಯನ್ನು ಎತ್ತಿರುವ ಕಾರಣ, ಕೇಂದ್ರ ಸರ್ಕಾರದ ಆರ್ಕೇವ್ಸ್ನಲ್ಲಿ ಲಭ್ಯವಿರುವ ದಾಖಲೆಗಳನ್ನು ಹೆಕ್ಕಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಮಲಕಾಂತ್ ಎನ್ನುವವರಿಗೆ ಬರೆದಿರುವ ಕೈಬರಹದ ಪತ್ರವನ್ನು ಪಡೆದಿದ್ದೇವೆ. ಸಾಕ್ಷಿ ನಿಮ್ಮ ಮುಂದೆ ಇದೆ, ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ. ಛಲವಾದಿಯವರೇ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕ್ಷಮೆ ಕೇಳಿ ರಾಜೀನಾಮೆ ಕೊಡಿ. ಈ ಎರಡು ಕೆಲಸ 24 ಗಂಟೆಯೊಳಗೆ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಚುನಾವಣಾ ಸೋಲಿಗೆ ಸಾವರ್ಕರ್ ಕಾರಣ ಎಂದು ಹೇಳಿದ ಪತ್ರ ಈಗಾಗಲೇ ಜಗಜ್ಜಾಹೀರಾಗಿದೆ. ಬಿಜೆಪಿ ನಾಯಕರು ಸಾಧ್ಯವಾದರೆ ದೆಹಲಿ ಪ್ರವಾಸ ಕೈಗೊಂಡು, ಡಾ. ಅಂಬೇಡ್ಕರ್ ಅವರ ಪತ್ರಗಳ ಸಂಗ್ರಹವಿರುವ ನ್ಯಾಷನಲ್ ಆರ್ಖೈವ್ಸ್ ಆಫ್ ಇಂಡಿಯಾ ಸಂಸ್ಥೆಗೆ ಭೇಟಿ ನೀಡಲಿ. ಅವರ ಪ್ರವಾಸದ ಖರ್ಚು ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ.ಬಿಜೆಪಿ ನಾಯಕರಿಗೆ ಅಲ್ಲಿ ಇರುವ 313 ಪೇಪರ್ಗಳನ್ನು ಓದಲು ಬರುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಿಮಗೆ ಇತಿಹಾಸ ತಿಳಿಯುವ ಆಸಕ್ತಿ ಇಲ್ಲ, ಯೋಗ್ಯತೆಯೂ ಇಲ್ಲ. ಬಾಬಾ ಸಾಹೇಬರ ಸ್ವಂತ ಕೈಬರಹದಲ್ಲಿ ಇರುವ ಪತ್ರದಲ್ಲಿ ಡಾಂಗೆ ಮತ್ತು ಸಾವರ್ಕರ್ ಸೇರಿ ತಮ್ಮ ಸೋಲಿಗೆ ಸಂಚು ನಡೆಸಿದ್ದರ ಬಗ್ಗೆ ನೇರವಾಗಿ ವಿವರಿಸಿದ್ದಾರೆ. ಸಾಕ್ಷಿ ಕೇಳುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಾಕ್ಷಿ ನೀಡಿದ್ದೇನೆ. ಅವರು ತಮ್ಮ ಮಾತಿಗೆ ಬದ್ಧರಾಗಿ ನಡೆದುಕೊಳ್ಳುತ್ತಾರೆಯೇ? ಎಂದರು.
ಕಾಂಗ್ರೆಸ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಡುವೆ ರಾಜಕೀಯ ವ್ಯತ್ಯಾಸಗಳಿದ್ದವು. ಅದು ಇತಿಹಾಸ. ಆದರೆ ಕಾಂಗ್ರೆಸ್ ಕುರಿತಂತೆ ಅವರಲ್ಲಿ ಅಪಾರ ಪ್ರೀತಿ, ವಿಶ್ವಾಸವಿತ್ತು. ವಂಚಿತ ಸಮುದಾಯಕ್ಕಾಗಿ ಕಾಂಗ್ರೆಸ್ ಏನೆಲ್ಲ ಮಾಡಿದೆ ಎಂಬ ಪುಸ್ತಕವನ್ನೇ ಅವರು ಬರೆದಿದ್ದಾರೆ. ದೇಶ ಕಟ್ಟಬೇಕಾದ ಸಂವಿಧಾನ ಕರಡು ಸಮಿತಿಯಲ್ಲಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇದನ್ನು ನಾನು ಹೇಳುತ್ತಿಲ್ಲ, ಇತಿಹಾಸದ ಪುಟಗಳನ್ನು ತೆರೆದುನೋಡಿ. ಬಿಜೆಪಿಗರೇ, ಬಾಬಾ ಸಾಹೇಬರ ಕೊನೆಯ ಭಾಷಣವನ್ನು ಆಲಿಸಿ. ದೇಶದ್ರೋಹಿ ಎಂದು ಯಾರಿಗೆ ಹೇಳಬೇಕು ಎಂಬುದನ್ನು ಅದರಲ್ಲಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇರಲಿಲ್ಲ ಎಂದಿದ್ದರೆ ಸಂಸತ್ನಲ್ಲಿ ಸಾಕಷ್ಟು ಕೋಲಾಹಲ ನಡೆಯುತ್ತಿತ್ತು. ಯಾವುದೇ ವಿಧಿ, ತಿದ್ದುಪಡಿ ಮನಸ್ಸಿಗೆ ಬಂದಂತೆ ನಡೆಯುತ್ತಿತ್ತು. ಕಾಂಗ್ರೆಸ್ ಪಕ್ಷ ತಂದಿರುವ ಶಿಸ್ತಿನಿಂದ, ಕಾಂಗ್ರೆಸ್ ಪಕ್ಷದಿಂದ ಇಂದು ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ ಎಂದು ಬಾಬಾ ಸಾಹೇಬರು ಸಂಸತ್ನಲ್ಲಿನ ತಮ್ಮ ಕೊನೆಯ ಭಾಷಣದಲ್ಲಿ ಹೇಳಿದ್ದರು. ಆದರೆ ಇತಿಹಾಸದ ಕುರಿತು ಕಿಂಚಿತ್ತೂ ತಿಳಿವಳಿಕೆ ಇಲ್ಲದ ಬಿಜೆಪಿಗರು ಬಾಬಾ ಸಾಹೇಬರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಸಲ್ಲದ ಅಪಪ್ರಚಾರಗಳನ್ನು ನಡೆಸುವ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಾಗಲಿ, ಜನಬೆಂಬಲವಾಗಲಿ ಇಲ್ಲ. ಬಿಜೆಪಿಯವರು ಅವರನ್ನು ಎಂಎಲ್ಸಿಯನ್ನಾಗಿ, ವಿಪಕ್ಷ ನಾಯಕರನ್ನಾಗಿ ಮಾಡಿರುವುದು ನಾಲ್ಕು ಜನರನ್ನು ಬಯ್ಯುವ ಸಲುವಾಗಿಯಷ್ಟೇ. ಅದರ ಹೊರತಾಗಿ ಶೂನ್ಯ ವೇಳೆಯಲ್ಲಿ ಮಾತನಾಡುವ ಅಧಿಕಾರವಿಲ್ಲ, ಅವರಿಗೆ ಸಾಮರ್ಥ್ಯವೂ ಇಲ್ಲ.
ಆದರೆ ಈ ‘ಜವಾಬ್ದಾರಿ’ ನೀಡುವುದಕ್ಕೂ ಮುನ್ನ ಛಲವಾದಿ ಅವರಿಗೆ ಒಂದು ಪರೀಕ್ಷೆಯನ್ನು ನೀಡಿದ್ದರು. ಅದು ಶಿವಮೊಗ್ಗದಲ್ಲಿ ಖಾಕಿ ಚಡ್ಡಿ ಸುಟ್ಟಿದ್ದಕ್ಕೆ ಪ್ರತಿಯಾಗಿ ಚಡ್ಡಿ ಸಂಗ್ರಹಣಾ ಅಭಿಯಾನ ನಡೆಸುವುದು. ವಿಪರ್ಯಾಸವೆಂದರೆ ಈ ಅಭಿಯಾನದಲ್ಲಿ ಬಿಜೆಪಿಯ ಯಾವೊಬ್ಬ ನಾಯಕನೂ ಭಾಗಿಯಾಗಲಿಲ್ಲ. ಆಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಚಡ್ಡಿ ಹೊರುವುದು ಇರಲಿ, ಖಾಲಿ ಬುಟ್ಟಿಯನ್ನೂ ಹೊರಲಿಲ್ಲ. ಆದರೆ ಛಲವಾದಿ ನಾರಾಯಣಸ್ವಾಮಿ ಅವರು ಹಳ್ಳಿ ಹಳ್ಳಿಗೆ ಹೋಗಿ ಯಾರೋ ಹಾಕಿ ಬಿಟ್ಟ ಚಡ್ಡಿಗಳನ್ನೆಲ್ಲ ತಲೆಯ ಮೇಲೆ ಹೊತ್ತುಕೊಂಡರು. ಅದು ಆರೆಸ್ಸೆಸ್ನವರ ಚಡ್ಡಿಯೋ ಅಥವಾ ಯಾರದ್ದೋ ಗೊತ್ತಿಲ್ಲ. ಅದನ್ನು ಹೊತ್ತುಕೊಳ್ಳುವ ಸ್ಥಿತಿ ಎದುರಾಗಿದ್ದು ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಅದರ ಅಧ್ಯಕ್ಷರಿಗೆ ಮಾತ್ರ. ಆಗ ಅವರಲ್ಲಿ ಸ್ವಾಭಿಮಾನ ಎಲ್ಲಿ ಹೋಗಿತ್ತು? ಅವರನ್ನು ನಮ್ಮ ಸಮುದಾಯದ ನಾಯಕ, ನಮ್ಮವರಲ್ಲಿ ಒಬ್ಬರು ಎಂದೇ ಪರಿಗಣಿಸಿದ್ದೆವು. ಆದರೆ ಅವರ ಈ ದಯನೀಯ ಸ್ಥಿತಿ ಬೇಸರ ಮೂಡಿಸಿದೆ ಎಂದು ವ್ಯಂಗ್ಯವಾಡಿದರು.