ಬೆಂಗಳೂರು(www.thenewzmirror.com):ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಇತ್ತೇ ವಿನ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಇರಲಿಲ್ಲ ಎಂಬುದನ್ನು ಸಿಎಂ ಪರೋಕ್ಷವಾಗಿ ಒತ್ತಿ ಒತ್ತಿ ಹೇಳಿದ್ದಾರೆ.ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಗಳು ಹೇಗೆ ಹೋಗಿ ಭಾಗವಹಿಸಿದರು ರಾಜ್ಯದ ಉಪಮುಖ್ಯಮಂತ್ರಿಗಳೇ ಭಾಗವಹಿಸಿದ ಮೇಲೆ ಆ ಕಾರ್ಯಕ್ರಮ ಅನಧಿಕೃತ ಎಂದು ಹೇಗೆ ಅನಿಸುತ್ತದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಬೆಂಗಳೂರಿನಲ್ಲಿ ಜೂನ್ 4 ರಂದು ಸಂಭವಿಸಿದ ದುರಂತದ ವಿದ್ಯಮಾನ ಮತ್ತು ನಂತರದ ಕ್ರಮಗಳ ಬಗ್ಗೆ ಸ್ಪಷ್ಟೀಕರಣ ಕೊಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಗಳು ವಿಧಾನಸೌಧದ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತೆಂದು ಹೇಳುವಾಗ ಮುಖ್ಯಮಂತ್ರಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆದ ದುರಂತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಾವನೆ ಜನ ಸಾಮಾನ್ಯರಿಗೆ ಬರುವುದು ಸಹಜ.ಏಕೆಂದರೆ ಸಿದ್ದರಾಮಯ್ಯನವರು ಕೇವಲ ವಿಧಾನಸೌಧದ ಆವರಣಕ್ಕೆ ಸೀಮಿತವಾದ ಮುಖ್ಯಮಂತ್ರಿಗಳೇ? ಅಥವಾ ಚಿನ್ನಸ್ವಾಮಿ ಸ್ಟೇಡಿಯಂ ಬೇರೆ ರಾಜ್ಯದಲ್ಲಿದೆಯೆ? ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ರಸ್ತೆಗಳು ನಮ್ಮ ರಾಜ್ಯದ ಬೆಂಗಳೂರಿನಲ್ಲಿಯೇ ಇವೆ ಎಂಬುದನ್ನು ಮುಖ್ಯಮಂತ್ರಿಗಳು ನೆನಪಿಟ್ಟುಕೊಳ್ಳಬೇಕು. ಮುಖ್ಯಮಂತ್ರಿಗಳ ಮಾತಿನ ಧಾಟಿ ಹೇಗಿದೆ ಎಂದರೆ ವಿಧಾನಸೌಧದ ಹೊರಗಡೆ ಆಗುವ ದುರಂತಗಳಿಗೆ ಸರ್ಕಾರ ಜವಾಬ್ದಾರಿ ಹೊರುವುದಿಲ್ಲ ಮತ್ತು ಹೊರಗಡೆಯ ಜೀವಗಳಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ ಅಲ್ಲ ಎಂಬಂತಿದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳು ಹೇಳಿದ ಮತ್ತೊಂದು ಅಂಶವೆಂದರೆ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಇತ್ತೇ ವಿನ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಇರಲಿಲ್ಲ ಎಂಬುದನ್ನು ಪರೋಕ್ಷವಾಗಿ ಒತ್ತಿ ಒತ್ತಿ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ನಡೆಯಿತು ಎಂದು ಮುಖ್ಯಮಂತ್ರಿಗಳು ಹೇಳುವಾಗ ಅವರು ಒಂದು ವಿಚಾರ ಹೇಳಲು ಮರೆತಿದ್ದಾರೆ. ಅದೆಂದರೆ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿಗಳ, ಸಚಿವರುಗಳ, ಅವರ ಕುಟುಂಬದ ಸದಸ್ಯರುಗಳ, ಮುಖ್ಯ ಕಾರ್ಯದರ್ಶಿಗಳ ಮತ್ತು ಇತರೆ ಅತೀ ಮುಖ್ಯ ವ್ಯಕ್ತಿಗಳ ರಕ್ಷಣೆಗಾಗಿ ಬಹಳ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಹಾಗಾದರೆ ಸಾಮಾನ್ಯ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಯಾರು ಹೊರಬೇಕು ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯೋಜಿಸಿದ ಕಾರ್ಯಕ್ರಮಕ್ಕೆ ಅಧಿಕೃತ ಅನುಮೋದನೆ ಅಥವಾ ಅನುಮತಿ ಇರಲಿಲ್ಲ ಎಂಬುದು ಮುಖ್ಯಮಂತ್ರಿಗಳ ಸ್ಪಷ್ಟೀಕರಣದ ಅರ್ಥವಾದರೆ ಆ ಕಾರ್ಯಕ್ರಮ ನಡೆಯಲು ಹೇಗೆ ಅವಕಾಶ ನೀಡಲಾಯಿತು? ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ತನ್ನ ಕಾರಿನಲ್ಲಿ ಆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು ಎಂಬುದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅಷ್ಟೇ ಅಲ್ಲ. ಆರ್.ಸಿ.ಬಿ ತಂಡದ ಬಾವುಟವನ್ನು ಹೆಮ್ಮೆಯಿಂದ ಬೀಸುತ್ತಾ ಹೋಗುತ್ತಿದ್ದನ್ನು ಎಲ್ಲರೂ ಗಮನಿಸಿದ್ದಾರೆ.ಹಾಗಾದರೆ ಈ ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಗಳು ಹೇಗೆ ಹೋಗಿ ಭಾಗವಹಿಸಿದರು? . ರಾಜ್ಯದ ಉಪಮುಖ್ಯಮಂತ್ರಿಗಳೇ ಭಾಗವಹಿಸಿದ ಮೇಲೆ ಆ ಕಾರ್ಯಕ್ರಮ ಅನಧಿಕೃತ ಎಂದು ಹೇಗೆ ಅನಿಸುತ್ತದೆ ಎಂದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು, ವಿಶೇಷ ಪೊಲೀಸ ಆಯುಕ್ತರು, ಪೋಲಿಸ್ ಉಪ ಆಯುಕ್ತರು ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರನ್ನು ಅಮಾನತುಗೊಳಿಸಲು ಮುಖ್ಯಮಂತ್ರಿಗಳು ತಮ್ಮ ಕಣ್ಣಿಗೆ ಬಿದ್ದಿರುವ ಮೇಲ್ನೋಟದ ಕಾರಣಗಳನ್ನು ತಿಳಿಸಿದ್ದಾರೆ.
ಹಾಗೆಯೇ ಇನ್ನೋರ್ವ ಪೋಲಿಸ್ ಅಧಿಕಾರಿಯನ್ನು (ಗೂಡಾಚಾರ ವಿಭಾಗದ ಮುಖ್ಯಸ್ಥರು) ವರ್ಗಾವಣೆ ಮಾಡಲಾಗಿದೆ ಹಾಗಾದರೆ ನಿಮ್ಮ ರಾಜಕೀಯದ ಕಾರ್ಯದರ್ಶಿಯಾಗಿದ್ದ ಕೆ.ಗೋವಿಂದರಾಜುರವರನ್ನು ಅವರ ಸ್ಥಾನದಿಂದ ಗೇಟ್ ಪಾಸ್ ಕೊಟ್ಟದ್ದು ಯಾವ ಕಾರಣಕ್ಕಾಗಿ? ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಹಠಾತ್ತಾಗಿ ತೆಗೆದಿರುವ ಬಗ್ಗೆ ಇದುವರೆಗೂ ತಾವು ಸ್ಪಷ್ಟೀಕರಣ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಾವು ನಿನ್ನೆ ಮೈಸೂರಿನಲ್ಲಿ ಹೇಳಿದಿರಿ, ಕಾಲ್ತುಳಿತದ ಕಾರಣ ಸಂಭವಿಸಿದ ಮೊದಲನೇ ಸಾವಿನ ಮಾಹಿತಿ ತಮಗೆ ದೊರಕಿದ್ದು ಸಂಜೆ 5:45ರ ವೇಳೆಗೆ ಆದರೆ ಆಸ್ಪತ್ರೆಯವರು ಈ ಸಾವಿನ ಸುದ್ದಿಯನ್ನು ಪ್ರಕಟಿಸಿದ್ದು ಮಧ್ಯಾಹ್ನ 3: 5೦ರ ವೇಳೆಗೆ, ವಿಧಾನಸೌಧದಿಂದ ಬೌರಿಂಗ್ ಆಸ್ಪತ್ರೆ ಇರುವುದು ಕೇವಲ ಸುಮಾರು 2 km ಗಳ ಅಂತರದಲ್ಲಿ.ಮೊಬೈಲ್ ಫೋನ್ ಗಳ, ವಾಟ್ಸಪ್ ಕರೆಗಳ, ಪೊಲೀಸ್ ವಾಕಿಗಳ ಈ ಕಾಲದಲ್ಲಿ ಮುಖ್ಯಮಂತ್ರಿಗಳಿಗೆ ಈ ದುರಂತದ ಮೊದಲ ಸಾವಿನ ಸುದ್ದಿ ಇಷ್ಟು ತಡವಾಗಿ ತಲುಪಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆಡಳಿತದ ಮೇಲೆ ತಮ್ಮ ಹಿಡಿತ ಕಳೆದುಕೊಂಡಿದ್ದಾರೆ ಎಂದುಕೊಳ್ಳಬಹುದಾ? ಅಥವಾ ಮುಖ್ಯಮಂತ್ರಿಗಳಿಗೆ ಈ ಮಹತ್ವದ ಹಾಗೂ ತುರ್ತಾದ ಮಾಹಿತಿ ತಡವಾಗಿ ತಲುಪಿಸುವುದರಲ್ಲಿ ರಾಜಕೀಯ ಪಿತೂರಿ ಏನಾದರೂ ಇದೆಯೇ? ಮುಖ್ಯಮಂತ್ರಿಗಳು ರಾಜ್ಯದ ಜನತೆಯಲ್ಲಿ ಉದ್ಭವಿಸಿರುವ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಆಗ್ರಹಿಸುತ್ತಿರುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.