ಬೆಂಗಳೂರು(www.thenewzmirror.com):ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಹಾಗಾಗಿ “ಬೆಂಗಳೂರಿನಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಭೂಮಿಗಳನ್ನು ಅಭಿವೃದ್ದಿ ಮಾಡಲು ಅರಣ್ಯ ಇಲಾಖೆ ಮುಂದಾದರೆ ಪಾಲಿಕೆಯಿಂದ ಅಗತ್ಯ ಧನಸಹಾಯ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಅರಣ್ಯ ಇಲಾಖೆಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು,
“ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ”.“ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎನ್ನುವುದನ್ನು ಯಾರೊಬ್ಬರು ಮರೆಯಬಾರದು. ಪ್ರಕೃತಿ ಉಚಿತವಾಗಿ ಊಟ ಕೊಡುತ್ತಿದೆ ಎಂದು ಅದನ್ನು ಕಂಠಪೂರ್ತಿ ತಿನ್ನಬಾರದು. ಭವಿಷ್ಯಕ್ಕೂ ಉಳಿಸಬೇಕು” ಎಂದು ತಿಳಿಸಿದರು.
“ಸುತ್ತಲಿನ ಪ್ರಕೃತಿ, ಮಣ್ಣು, ನೀರನ್ನು ಉಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಹಸಿರು ಮತ್ತು ಉಸಿರನ್ನು ರಕ್ಷಿಸುವ ಗ್ಯಾರಂಟಿಯನ್ನು ನಮ್ಮ ಸರ್ಕಾರ ನೀಡಲಿದೆ. ಪ್ರಕೃತಿಯಿಂದ ನಾವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿಗೆ ಅದಕ್ಕೆ ವಾಪಸ್ ಕೊಡಬೇಕು. ಈ ಭೂಮಿ ಉಳಿದರೆ ಮಾತ್ರ ನಾವು ಉಳಿಯುತ್ತೇವೆ” ಎಂದರು.
“ನಾವುಗಳು ನಮ್ಮ ಜೀವಿತಾವಧಿಯಲ್ಲಿ ಒಂದೊಂದು ಮರವನ್ನು ಬೆಳೆಸುವಂತಹ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ನಗರದ ಶಾಲೆಗಳ ವಿದ್ಯಾರ್ಥಿಗಳು ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ಯೋಜನೆ ರೂಪಿಸಿದೆವು. ಕಳೆದ ವರ್ಷ ಸುಮಾರು 50 ಸಾವಿರ ಸಸಿಗಳನ್ನು ನೆಡಲಾಗಿದೆ. ಇವುಗಳನ್ನು ವಿದ್ಯಾರ್ಥಿಗಳೇ ಪೋಷಿಸುತ್ತಿದ್ದಾರೆ” ಎಂದು ಹೇಳಿದರು.
“ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ʼಕ್ಲೈಮೆಟ್ ಆಕ್ಷನ್ ಕ್ಲಬ್ʼ ರಚನೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಬೆಂಗಳೂರಲ್ಲಿ 1.20 ಕೋಟಿಗೆ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ನಾವು ಆಲೋಚನೆ ಮಾಡಬೇಕಿದೆ” ಎಂದು ಹೇಳಿದರು.
“ನನ್ನ ಹುಟ್ಟುಹಬ್ಬದ ದಿನ ಕಬಿನಿ ಹಿನ್ನೀರಿನ ಅರಣ್ಯಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಸಂಪತ್ ಭರಿತವಾದ ಪ್ರಾಣಿ ಸಂಕುಲವನ್ನು ನಾನು ನೋಡಿದೆ. ಆಗ ವಿದೇಶದಲ್ಲಿರುವಂತೆ ನನಗೆ ಭಾಸವಾಯಿತು” ಎಂದು ಹೇಳಿದರು.