ಶಿವಮೊಗ್ಗ(www.thenewzmirror.com):ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ಜಲಾಶಯದ ಎಲ್ಲಾ ಗೇಟ್ ಗಳನ್ನು ತೆರೆದು ನದಿಗೆ ನೀರನ್ನು ಬಿಡಲಾಗುತ್ತದೆ, ನದಿಪಾತ್ರದ ಜನರ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಮೊದಲ ಮಳೆಗೆ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ತೀರ್ಥಹಳ್ಳಿ ಸೇರಿದಂತೆ
ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಜಲಾಶಯಕ್ಕೆ 31 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, ಮುಂಜಾಗ್ರತಾ ಕ್ರಮವಾಗಿ 27 ಸಾವಿರ ಕ್ಯೂಸೆಕ್ ನೀರನ್ನು ತುಂಗಾ ಜಲಾಶಯದ ಎಲ್ಲ ಗೇಟುಗಳನ್ನು ತೆರೆದು ನದಿಗೆ ಬಿಡಲಾಗುತ್ತಿದೆ.
ಡ್ಯಾಂ ಗೇಟ್ ತೆರೆದಿರುವುದರಿಂದಾಗಿ ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಶಿವಮೊಗ್ಗ ನಗರದಲ್ಲಿರುವ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮುಳುಗಡೆಯಾಗಿದೆ. ಜನರು ತುಂಗಾ ನದಿ ಸೇತುವೆ ಮೇಲೆ ನಿಂತು ಮಂಟಪ ಮುಳುಗಡೆ ಮತ್ತು ತುಂಗಾ ನದಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇನ್ನು ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಲಿರುವ ಹಿನ್ನಲೆಯಲ್ಲಿ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು, ಜಾನುವಾರುಗಳನ್ನು ನದಿ ಪಾತ್ರಕ್ಕೆ ನಿಡಬಾರದು, ಜನರೂ ನದಿಪಾತ್ರಕ್ಕೆ ತೆರಳಬಾರದು ಎಂದು ನದಿಪಾತ್ರದ ಜನತೆಗೆ ಸೂಚನೆ ನೀಡಲಾಗಿದೆ.