ಬೆಂಗಳೂರು(thenewzmirror.com): ಪ್ರವಾಸಿಗರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು
ನಿಯಮ 330ರಡಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಅವರು ಗಂಗಾವತಿಯ ಸಣಾಪೂರ ಕೆರೆ ಸಮೀಪ ನಡೆದ ವಿದೇಶಿ ಮಹಿಳೆ ಹಾಗೂ ರೆಸಾರ್ಟ್ ಒಡತಿಯ ಮೇಲಿನ ಅತ್ಯಾಚಾರ, ವಿದೇಶಿ ಪ್ರಜೆಗಳ ಮೇಲಿನ ಹಲ್ಲೆ ಪ್ರಕರಣ ಕುರಿತ ಪ್ರಸ್ತಾಪಕ್ಕೆ ಉತ್ತರಿಸಿದ ಗೃಹ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಕ್ರಿಮಿನಲ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಆನೆಗುಂದಿ, ಸಣಾಪೂರ, ಬಸಾಪೂರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೆಸಾರ್ಟ್ ಹಾಗೂ ಹೋಮ್ ಸ್ಟೇ ಮಾಲೀಕರೊಂದಿಗೆ ಗಂಗಾವತಿ ಡಿಎಸ್ಪಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಪ್ರವಾಸಿಗರ ಮಾಹಿತಿಯನ್ನು ಕಡ್ಡಾಯವಾಗಿ ದಾಖಲು ಮಾಡುವುದು, ಸೂಕ್ತ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಸೇರಿದಂತೆ ವಿದೇಶಿ ಪ್ರವಾಸಿಗರ ಆಗಮನದ ಮಾಹಿತಿಯನ್ನು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಹೆಚ್ಚುವರಿಯಾಗಿ ಹೆದ್ದಾರಿ ಗಸ್ತು ವಾಹನ ನಿಯೋಜಿಸಿದ್ದು, ಇನ್ಸ್ ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಮೇಲುಸ್ತುವಾರಿಗಾಗಿ ನೇಮಿಸಲಾಗಿದೆ ಎಂದವರು ತಿಳಿಸಿದರು.
ಮಾದಕವಸ್ತು ಕಾರ್ಯಪ್ರವೃತ್ತಿಗೆ ವಿಧಾನಸಭೆಯಲ್ಲಿ ಶ್ಲಾಘನೆ:
ಸುಮಾರು 75 ಕೋಟಿ ಮೊತ್ತದ ಡ್ರಗ್ಸ್ ಮಾಫಿಯಾವನ್ನು ಮಂಗಳೂರಿನ ಪೆÇಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪ್ರಕರಣವನ್ನು ಮಂಗಳೂರಿನ ಪೊಲೀಸರು ಬಯಲಿಗೆಳೆದಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿಯೇ ಬಯಲಾದ ದೊಡ್ಡ ಡ್ರಗ್ಸ್ ಜಾಲ. ರಾಜ್ಯ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಅವರಿಂದ ಸುಮಾರು 75 ಕೋಟಿ ರೂ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹಸಚವ ಡಾ:ಜಿ ಪರಮೇಶ್ವರ್ ತಿಳಿಸಿ ಮಂಗಳೂರಿನ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.
ಸಭಾಪತಿ ಯು.ಟಿ ಖಾದರ್ ಇದೇ ಸಂದರ್ಭದಲ್ಲಿ ಡ್ರಗ್ಸ್ ಮಾಫಿಯಾ ಬೇಧಿಸಿದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿ ಇದರ ಮೂಲಕ ಕಂಡು ಹಿಡಿದು ಈ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕ್ರಮ ವಹಿಸುವುದು ಸೂಕ್ತ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಸಭೆಯ ಸದಸ್ಯರಾದ ವಿಜಯೇಂದ್ರ ಅವರು ಮಂಗಳೂರಿನ ಪೋಲೀಸರು ಜೀವದ ಹಂಗು ತೊರೆದು ಡ್ರಗ್ಸ್ ಮಾಫಿಯಾ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿ ಯುವಜನಾಂಗ ಡ್ರಗ್ಸ್ ಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೇ ತಾಲ್ಲೂಕು ಮಟ್ಟಕ್ಕೆ ಸಹ ಈ ಮಾಫಿಯಾ ಹರಡಿದೆ. ಸೀಜ್ ಆಗಿರುವ ಡ್ರಗ್ಸ್ ವಿಲೇವಾರಿ ಬಗ್ಗೆ ಸಹ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ವಿಧಾನ ಸಭೆಯ ಹಲವು ಸದಸ್ಯರು ಡ್ರಗ್ಸ್ ಜಾಲ ಭೇಧಿಸಿದ ಪೋಲೀಸರಿಗೆ ಅಭಿನಂದನೆಗಳನ್ನು ತಿಳಿಸಿದರು
ವಿಧಾನಸಭೆಯ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ವಹಿಸಲಾಗುವುದು ಎಂದು ಡಾ: ಪರಮೇಶ್ವರ್ ತಿಳಿಸಿದರು.