ಮಂಡ್ಯ(www.thenewzmirror.com):ಬಸವಣ್ಣನವರು 12ನೇ ಶತಮಾನದಲ್ಲೇ ಮಾನವೀಯತೆಯನ್ನು ಆಧರಿಸಿದ ಧರ್ಮ ಮತ್ತು ಸಿದ್ಧಾಂತವನ್ನು ಸ್ಥಾಪಿಸಿದ ಮಹಾಪುರುಷರಾಗಿದ್ದಾರೆ. ಅವರು ಜಾತ್ಯತೀತ ಮತ್ತು ಸಮಾನತೆಯನ್ನು ಮುನ್ನೆಲೆಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಮತ್ತು ಬಸವ ಸಮಿತಿಯ ಘಟಕಗಳು ಶನಿವಾರ ಇಲ್ಲಿ ಏರ್ಪಡಿಸಿದ್ದ 892ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕರ್ನಾಟಕದಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡ 17ರಷ್ಟಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕೂಡ 20 ಲಕ್ಷ ಲಿಂಗಾಯತರಿದ್ದಾರೆ. ನಮ್ಮ ಮಠಗಳು ಜಾತಿಯ ತಾರತಮ್ಯ ಮಾಡದೆ ಎಲ್ಲರಿಗೂ ಆಶ್ರಯ ನೀಡಿವೆ. ಈಗ ನಮ್ಮಲ್ಲೇ ಇರುವ ಉಪಪಂಗಡಗಳ ವ್ಯತ್ಯಾಸಗಳನ್ನು ಮರೆತು ಸಂಘಟನೆ ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿ, ದಮನಿತ ಸಮುದಾಯಗಳನ್ನು ಲಿಂಗಾಯತ ಧರ್ಮಕ್ಕೆ ಸೇರಿಸಿಕೊಂಡರು. ನಾವು ಬಸವಣ್ಣನವರ ತತ್ವವನ್ನು ಸರಿಯಾಗಿ ಅನುಸರಿಸಿದ್ದರೆ ರಾಜ್ಯದ ಅರ್ಧ ಭಾಗದಲ್ಲಿ ಲಿಂಗಾಯತರೇ ಇರುತ್ತಿದ್ದರು ಎಂದು ಅವರು ಪ್ರತಿಪಾದಿಸಿದರು.
ಬಸವಣ್ಣ ಸಂಸ್ಕೃತದ ಪಾರಮ್ಯವನ್ನು ಮರೆತು, ವಚನಗಳ ಮೂಲಕ ದೇವರ ಜತೆ ಕನ್ನಡದಲ್ಲಿ ಮಾತನಾಡಲು ಆರಂಭಿಸಿದರು. ಈಗಲೂ ಬಸವ ಸಂದೇಶವು ಜಾಗತಿಕ ಮಟ್ಟದಲ್ಲಿ ಪ್ರಸಾರ ಆಗಬೇಕಾದ ಅಗತ್ಯವಿದೆ ಎಂದು ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ನಿವತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ರುದ್ರೇಶ್, ಸಚ್ಚಿದಾನಂದ, ಇಂದಿರೇಶ್ ಮುಂತಾದವರು ಉಪಸ್ಥಿತರಿದ್ದರು.