ಬೆಂಗಳೂರು, (www.thenewzmirror.com);
ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿರುವ ರಮೇಶ್ ಬಾಬು ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ. ಜಾರಿ ನಿರ್ದೇಶನಾಲಯದ ಜತೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವ್ರಿಗೂ ಸಾಮಾಜಿಕ ಹೋರಾಟಗಾರ ತೇಜಸ್ ಗೌಡ ದಾಖಲೆಗಳ ಸಮೇತ ಲಿಖಿತ ದೂರು ದಾಖಲು ಮಾಡಿದ್ದಾರೆ.
ಸುಮಾರು 108 ಪುಟಗಳ ಸಂಪೂರ್ಣ ಮಾಹಿತಿ ಸಮೇತ ದೂರು ನೀಡಿದ್ದು, ಯಾವುದೇ ಕಾರಣಕ್ಕೂ ರಮೇಶ್ ಬಾಬು ಅವರನ್ನ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡದಂತೆ ತೇಜಸ್ ಗೌಡ ಮನವಿ ಮಾಡಿದ್ದಾರೆ. ರಮೇಶ್ ಬಾಬು ಕ್ರಿಮಿನಲ್ ಹಿನ್ನಲೆ ಉಳ್ಳವರು. ಇಂಥ ವ್ಯಕ್ತಿಗೆ ಪರಿಷತ್ ಸ್ಥಾನ ನೀಡಿದರೆ ಪರಿಷತ್ ನ ಗೌರವಕ್ಕೆ ಧಕ್ಕೆ ಬರಲಿದೆ ಎಂದೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.





ದೂರಿನಲ್ಲಿ ಏನಿದೆ?
ಸಾಮಾಜಿಕ ಹೋರಾಟಗಾರ ತೇಜಸ್ ಗೌಡ ನೀಡಿರುವ ಲಿಖಿತ ದೂರಿನಲ್ಲಿ ಭಾರತದ ಸಂವಿಧಾನದ ವಿಧಿ 171(5) ರ ಅಡಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಚಳುವಳಿ ಅಥವಾ ಸಾಮಾಜಿಕ ಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗುತ್ತದೆ. ಆದರೆ ರಮೇಶ್ ಬಾಬು ಇದಕ್ಕೆ ಹೊರತಾಗಿದ್ದಾರೆ.
ಅವ್ರು ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಯಾಗಿದ್ದಾರೆ. ಉತ್ತರಹಳ್ಳಿಯ ಉತ್ತರಿ ಎಂಬ ಗ್ರಾಮದಲ್ಲಿ ಭೂಕಬಳಿಕೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗೆ ಸದಸ್ಯ ಸ್ಥಾನ ಕೊಟ್ಟರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರ ದುರುಪಯೋಗವಾಗುವ ಸಾಧ್ಯತೆಯಿದೆ. ಹೀಗಾಗಿ ಅವರನ್ನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡದಂತೆ ಮನವಿ ಮಾಡಿದ್ದಾರೆ.