ಬೆಂಗಳೂರು(www.thenewzmirror.com):ಜ್ಞಾನಭಾರತಿಯಲ್ಲಿ ಪಿಎಂ-ಉಷಾ ಯೋಜನೆಯಡಿ ಕೈಗೊಂಡಿರುವ ಶೈಕ್ಷಣಿಕ ವಿಭಾಗ ಮತ್ತು ಸಂಶೋಧನಾ ವಿಭಾಗ ನಿರ್ಮಾಣದ ಯೋಜನೆಯ ಪ್ರತಿ ಹಂತವು ಪರಿಸರ ನಿಯಮಾವಳಿಗಳು, ವೈಜ್ಞಾನಿಕ ಯೋಜನೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಂಡಿರುವುದಾಗಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರದ ಪಿಎಂ-ಉಷಾ ಯೋಜನೆಯಡಿ ಕೈಗೊಂಡಿರುವ ಶೈಕ್ಷಣಿಕ ವಿಭಾಗ ಮತ್ತು ಸಂಶೋಧನಾ ವಿಭಾಗ ನಿರ್ಮಾಣದ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದು ವಿರೋಧ ವ್ಯಕ್ತವಾಗಿದೆ. ಆದರೆ ಅದು ಸರಿಯಲ್ಲ.ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನ ಘೋಷಿಸಿದ್ದು,ಈ ಅನುದಾನದಲ್ಲಿ ಶೇ.60% ಕೇಂದ್ರ ಸರ್ಕಾರ ಮತ್ತು ಶೇ.40 % ರಷ್ಟು ರಾಜ್ಯ ಸರ್ಕಾರವು ಭರಿಸುತ್ತದೆ.ಯೋಜನೆಯಡಿಯಲ್ಲಿ ಮೂಲಸೌಕರ್ಯ ನಿರ್ಮಾಣದಡಿಯಲ್ಲಿ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನವನ್ನು ಅಂದಾಜು ವೆಚ್ಚ 58 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
ಶೈಕ್ಷಣಿಕ ಭವನವು 107376 ಚ.ಅಡಿಗಳ ವಿಸ್ತೀರ್ಣ ಹೊಂದಿದ್ದು ಮೂರು ಮಹಡಿಗಳನ್ನು ಒಳಗೊಂಡಿದೆ.ಈ ಶೈಕ್ಷಣಿಕ ಕಟ್ಟಡದಲ್ಲಿ ಡಿಜಿಟಲ್ ಶಿಕ್ಷಣ, ದೂರಶಿಕ್ಷಣ,ವಿಜ್ಞಾನ, ತಂತ್ರಜ್ಞಾನ, ಗಣಿತ ಶಾಸ್ತ್ರ ಸೇರಿದಂತೆ ಆಧುನಿಕ ವಿಷಯಗಳ ಕುರಿತು ಅಧ್ಯಯನ ನಡೆಸಲು ಬಳಸಲಾಗುತ್ತದೆ.ಇನ್ನೂ ಸಂಶೋಧನಾ ಭವನವು 16163 ಚ.ಅಡಿಗಳ ವಿಸ್ತೀರ್ಣವಿದ್ದು ಎರಡು ಮಹಡಿಗಳನ್ನು ಒಳಗೊಂಡಿದೆ.ಈ ಸಂಶೋಧನಾ ಭವನದಲ್ಲಿ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ,ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ,ಹವಾಮಾನ ಬದಲಾವಣೆ, ಮಾನವ ಬುದ್ದಿಮತ್ತೆ ಸೇರಿದಂತೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ವಿಷಯಗಳ ಕುರಿತು ಸುದೀರ್ಘ ಸಂಶೋಧನೆ ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಐಪಿಆರ್,ಪೇಟೆಂಟ್,ಸಂಶೋಧನಾ ಪ್ರಕಟಣೆಗಳಿಗೆ ಕುರಿತು ಮಾಹಿತಿ ಒದಗಿಸಲಾಗುವುದು ಎಂದಿದೆ.
ಪ್ರಸ್ತಾವಿತ ನಿರ್ಮಾಣ ಸ್ಥಳವು ವಿಶ್ವವಿದ್ಯಾಲಯದ ಜೈವಿಕ ಉದ್ಯಾನವನ ಅಥವಾ ಪರಿಸರ ಪ್ರದೇಶದಲ್ಲಿಲ್ಲ. ಈ ಪ್ರದೇಶದಲ್ಲಿ ಇರುವ 419 ಮರಗಳಲ್ಲಿ, ಹೆಚ್ಚಿನವು ನಿಲಗಿರಿ ಮತ್ತು ಅಕೇಶಿಯ ಮರಗಳು. ಇದು ಅಪರೂಪದ ಅಥವಾ ಅಳಿವಿನಂಚಿನ ಜೀವಿಗಳು ಅಲ್ಲ. ಈ ಪೈಕಿ 282 ಮರಗಳನ್ನು ಮಾತ್ರ ಕಟ್ಟಡ ನಿರ್ಮಾಣಕ್ಕಾಗಿ ಕಡಿಯಲಾಗುತ್ತಿದ್ದು, ಉಳಿದ 137 ಮರಗಳು ಬಫರ್ ಝೋನ್ನಲ್ಲಿ ಉಳಿಸಲಾಗುತ್ತವೆ. ಮತ್ತು ಸಣ್ಣ ಮರಗಳನ್ನು ಹತ್ತಿರದ ಸ್ಥಳದಲ್ಲೆ ಪುನಃ ನೆಡಲಾಗುವುದು ಎಂದು ತಿಳಿಸಿದೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976ರ ಪ್ರಕಾರ, ಒಂದು ಮರ ಕಡಿದರೆ 10 ಸಸಿ ನೆಡುವ ನಿಯಮಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯವು ಪ್ರತಿಯೊಂದು ಮರಕ್ಕು ಹತ್ತು ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದೆ. 1998ರಿಂದ ಇಲ್ಲಿಯ ತನಕ ವಿಶ್ವವಿದ್ಯಾಲಯದಲ್ಲಿ 6 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಸುಮಾರು 300 ಪ್ರಭೇದಗಳ ಕಾಣಸಿಗುತ್ತವೆ. 2017 ರಿಂದ 2022 ರವರೆಗೆ ಉಪಕುಲಪತಿಗಳ ನಿವಾಸ ಮತ್ತು ಅತಿಥಿ ಗೃಹದ ಸುತ್ತಮುತ್ತ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 1.6 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದೆ.
ಪಿಎಂ-ಉಷಾ ಯೋಜನೆಯಡಿಯಲ್ಲಿ ₹8 ಕೋಟಿ ರೂಪಾಯಿಗಳನ್ನು ಪರಿಸರ ಸಂರಕ್ಷಣಾ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ.
* ಸಂಪೂರ್ಣ ಕ್ಯಾಂಪಸ್ನಲ್ಲಿ ಎಲ್ಇಡಿ ಲೈಟಿಂಗ್
* ಪಾದಚಾರಿ ಮಾರ್ಗಗಳ ನವೀಕರಣ
* ವಿದ್ಯುತ್ ವಾಹನಗಳು ಹಾಗೂ ಬೈಸಿಕಲ್ ಗಳ ಉತ್ತೇಜನೆ
* ಜಿಯೋಪಾರ್ಕ್ ನವೀಕರಣ ಮತ್ತು ಔಷಧಿ ಸಸ್ಯ ವಲಯಗಳ ಪುನರ್ಜೀವನ (ಚಾರಕವನ, ಪಂಚವಟಿ)
* ಮಳೆನೀರು ಸಂಗ್ರಹಣಾ ವ್ಯವಸ್ಥೆಗಳ ನಿರ್ಮಾಣ
* ನೈಸರ್ಗಿಕ ವೈವಿಧ್ಯ ಕೇಂದ್ರ
ಇದಲ್ಲದೆ, ವಿಶ್ವವಿದ್ಯಾಲಯವು ಈಗಾಗಲೇ 7 ಚೆಕ್ ಡ್ಯಾಂಗಳನ್ನು ನಿರ್ಮಿಸಿ ಪರಿಸರ ಸಂರಕ್ಷಿಸಲಾಗುತ್ತಿದೆ.
ವಿಶ್ವವಿದ್ಯಾಲಯದ ಒಟ್ಟು 73 ಕಟ್ಟಡಗಳಲ್ಲಿ ಈಗಾಗಲೇ 42 ಶೈಕ್ಷಣಿಕ ವಿಭಾಗಗಳು, ವಿದ್ಯಾರ್ಥಿ ನಿಲಯಗಳು, ಪರೀಕ್ಷಾ ವಿಭಾಗಗಳು ಮತ್ತು ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದೆ. ಹಳೆಯ ಕಟ್ಟಡಗಳಲ್ಲಿ ಅಡಿಪಾಯವು 1–2 ಮಹಡಿಗಳಿಗೆ ಮಾತ್ರ ಯೋಗ್ಯವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಜ್ಞಾನಭಾರತಿ ಕ್ಯಾಂಪಸ್ 1, 200 ಎಕರೆಗಳಲ್ಲಿ ಹರಡಿದ್ದು, ಸುಮಾರು 250 ಕ್ಕೂ ಅಧಿಕ ಎಕರೆಗಳನ್ನು NAAC, CBSE, NLSIU, AMD ಮುಂತಾದ ಸರ್ಕಾರಿ ಸಂಸ್ಥೆಗಳಿಗೆ ಭೋಗ್ಯಕ್ಕೆ ನೀಡಲಾಗಿದೆ. ಉಳಿದ 832 ಎಕರೆಗಳಲ್ಲಿ ಹೆಚ್ಚಿನ ಭಾಗ ಹಸಿರಿನಿಂದ ತುಂಬಿದ್ದು, ಶೈಕ್ಷಣಿಕ ಯೋಜನೆ, ಮೂಲಭೂತ ಸೌಲಭ್ಯದ ದೃಷ್ಟಿಯಿಂದ ಪ್ರಸ್ತಾವಿತ ಸ್ಥಳವನ್ನು ಆಯ್ಕೆ ಮಾಡಲಾಗಿದೆ.
ವಿಶ್ವವಿದ್ಯಾಲಯದ ಎಲ್ಲಾ ಯೋಜನೆಗಳು ವಿದ್ಯಾರ್ಥಿ ನೆಲೆಯಲ್ಲಿ ರೂಪಗೊಂಡಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಬದ್ದವಾಗಿರುವುದನ್ನು ಪುನಃ ದೃಢಪಡಿಸುತ್ತದೆ, ವಿಶ್ವವಿದ್ಯಾಲಯವು ಪರಿಸರ ಸಂಬಂಧಿತ ಎಲ್ಲಾ ಕಾನೂನು ಹಾಗೂ ಶೈಕ್ಷಣಿಕ ಯೋಜನಾ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕೃತಿಯ ಜೊತೆಗೆ ಸಮತೋಲನ ಕಾಯ್ದುಕೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದೆ.