ಬೆಂಗಳೂರು(www.thenewzmirror.com): ಕೃಷಿ ತಂತ್ರಜ್ಞರ ಸಂಸ್ಥೆಯು `ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗ ಜತೆಗೂಡಿ ‘ಕ್ರಾಪ್ಸ್4ಎಚ್ಡಿ’ ಹಾಗೂ ‘ಕೀ ಸ್ಟೋನ್’ ಸಂಸ್ಥೆ ಸಹಯೋಗದಲ್ಲಿ ಜೂನ್ 14 ಮತ್ತು 15ರಂದು ‘ದೇಸಿ ಬೀಜೋತ್ಸವ’ವನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದೆ.
ಕೃಷಿಯ ಜೀವಾಳವೇ ಬೀಜ. ಅಗಾಧ ಪ್ರಮಾಣದ ದೇಸಿ ತಳಿ ಬೀಜ ವೈವಿಧ್ಯವನ್ನು ರೈತ ಸಮುದಾಯ ನೂರಾರು ವರ್ಷಗಳಿಂದ ಉಳಿಸಿ- ಬೆಳೆಸಿಕೊಂಡು ಬರುತ್ತಿದೆ. ಇಂಥ ಅಮೂಲ್ಯ ಕೃಷಿ ಸಂಪತ್ತು ಈಗ ಅಪಾಯ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಸಿ ಬೀಜೋತ್ಸವ ಆಯೋಜಿಸಿದ್ದು, ದೇಸಿ ಬೀಜ ಸಂರಕ್ಷಣೆ ಹಾಗೂ ಜೀವ ವೈವಿಧ್ಯಕ್ಕಾಗಿ ಶ್ರಮಿಸುತ್ತಿರುವ ದೇಶದ ವಿವಿಧ ಭಾಗಗಳ ಬೀಜ ಸಂರಕ್ಷಕರು ಹಾಗೂ ರೈತ ಗುಂಪುಗಳು ಇದರಲ್ಲಿ ಪಾಲ್ಗೊಳ್ಳಲಿವೆ.
ದೇಸಿ ತಳಿಗಳ ಸಂರಕ್ಷಣೆ ಹಾಗೂ ಅವುಗಳನ್ನು ಮುಖ್ಯವಾಹಿನಿಗೆ ತರಲು ‘ಸಮುದಾಯ ಬೀಜ ಬ್ಯಾಂಕ್’ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ‘ಬೀಜ ಬ್ಯಾಂಕ್’ ಮೂಲಕ ರೈತರಿಗೆ ದೇಸಿ ತಳಿಗಳ ಬಿತ್ತನೆ ಬೀಜ ವಿತರಿಸಿ, ಅವುಗಳಿಗೆ ಮಾರುಕಟ್ಟೆ ಒದಗಿಸುವ ಚಿಂತನೆಯೂ ಇದೆ. ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ದೇಸಿ ತಳಿಗಳಲ್ಲಿ ಇದ್ದು, ಕೃಷಿ ಕ್ಷೇತ್ರವನ್ನು ಕಾಡುವ ಸಮಸ್ಯೆಗೆ ಇವುಗಳನ್ನೇ ಪರಿಹಾರವಾಗಿ ಕಂಡುಕೊಳ್ಳುವ ಯೋಚನೆಯೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಸಿ ಬೀಜಗಳ ಮಹತ್ವವನ್ನು ಹೆಚ್ಚು ರೈತರಿಗೆ ತಲುಪಿಸುವ ಉದ್ದೇಶದಿಂದ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ.
ಜೂನ್ 14ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದ ಅಧ್ಯಕ್ಷ ಡಾ.ತ್ರಿಲೋಚನ ಮಹಾಪಾತ್ರ ಬೀಜೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕದಲ್ಲಿ ಅನೇಕ ಕೃಷಿಕರು ದೇಸಿ ಬೀಜದ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದು, ಆಸಕ್ತ ರೈತರ ಜತೆಗೆ ಅದನ್ನು ಹಂಚಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಟಿ ಬೀಜಕ್ಕೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಹೈಬ್ರಿಡ್ ಬೀಜಗಳನ್ನು ಅವಲಂಬಿಸಿದ ಬೇಸಾಯಕ್ಕೆ ಹೆಚ್ಚು ವೆಚ್ಚವಾದರೆ, ದೇಸಿ ಬೀಜಗಳು ಸುಸ್ಥಿರ ಕೃಷಿಗೆ ಹೆಚ್ಚು ಹೊಂದಿಕೊಳ್ಳುತ್ತಿವೆ. ಹವಾಮಾನ ವೈಪರೀತ್ಯವನ್ನು ಎದುರಿಸಿ ಬೆಳೆಯುವ ದೇಸಿ ಬೀಜಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಈ ಅಂಶವನ್ನು ಗಮನಿಸಿ, ದೇಸಿ ತಳಿ ಬೀಜಗಳನ್ನು ಮುಖ್ಯವಾಹಿನಿಗೆ ತರುವ ಅಗತ್ಯವಿದೆ.
ಎರಡು ದಿನಗಳ ಈ ಬೀಜೋತ್ಸವದಲ್ಲಿ ಕರ್ನಾಟಕದ ಜತೆಗೆ ವಿವಿಧ ರಾಜ್ಯಗಳ ಸುಮಾರು ಮುನ್ನೂರು ಬೀಜ ಸಂರಕ್ಷಕರು ಪಾಲ್ಗೊಳ್ಳಲಿದ್ದಾರೆ. ಸಾವಿರಕ್ಕೂ ಹೆಚ್ಚು ತಳಿ ಭತ್ತ, ನೂರಾರು ತಳಿಗಳ ಸಿರಿಧಾನ್ಯ, ಬೇಳೆ ಕಾಳು, ಗಡ್ಡೆ ಗೆಣಸು, ಸೊಪ್ಪು, ತರಕಾರಿಗಳನ್ನು ಬೀಜೋತ್ಸವದ ಸುಮಾರು 50 ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು. ಹತ್ತಾರು ಪೀಳಿಗೆಯಿಂದ ಸಂರಕ್ಷಣೆ ಮಾಡಿಕೊಂಡು ಬಂದಿರುವ ಕಾಡಿನ ಸಸ್ಯ ಸಂಪತ್ತನ್ನು ಆದಿವಾಸಿ ರೈತರ ಗುಂಪುಗಳು ಉತ್ಸವಕ್ಕೆ ತರಲಿವೆ. ಹೀಗಾಗಿ, ಒಟ್ಟಾರೆ 1,500ಕ್ಕೂ ಹೆಚ್ಚಿನ ದೇಸಿ ತಳಿ ಬೀಜಗಳ ಪ್ರದರ್ಶನ ಇಲ್ಲಿ ಇರಲಿದೆ.
ಬೀಜೋತ್ಸವದ ಅಂಗವಾಗಿ ಚರ್ಚೆ, ಅನುಭವ ಹಂಚಿಕೆ, ಸಂವಾದ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮ ಏರ್ಪಾಡಾಗಿದೆ. ಸಾಧಕ ಬೀಜ ಸಂರಕ್ಷಕರನ್ನು ಸನ್ಮಾನ ಮಾಡುವ ಜತೆಗೆ, ತಳಿ ಸಂರಕ್ಷರ ವಿವರಗಳ ಕೈಪಿಡಿ ಬಿಡುಗಡೆ ಮಾಡಲಾಗುವುದು.
ದೇಸಿ ಬೀಜ ಸಂರಕ್ಷಣೆ ಪ್ರಾಮುಖ್ಯ- ಸವಾಲುಗಳು, ಬೀಜ ಸಂರಕ್ಷಕರ ಅನುಭವ ಹಂಚಿಕೆ, ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ- ನಿರ್ವಹಣೆ, ಸಾವಯವ ಬೀಜೋತ್ಪಾದನೆ ಮತ್ತು ಮಾರಾಟ ಸೇರಿದಂತೆ ಹಲವು ವಿಷಯಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿದೆ.