ಬೆಂಗಳೂರು(www.thenewzmirror.com): ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕ್ಯಾಲಸನಹಳ್ಳಿಯಲ್ಲಿ NIMHANS ಸ್ನಾತಕೋತ್ತರ ಮತ್ತು 300 ಹಾಸಿಗೆಗಳ ಪಾಲಿಟ್ರೌಮಾ ಕೇಂದ್ರದ ನಿರ್ಮಾಣಕ್ಕೆ ₹498 ಕೋಟಿ ವೆಚ್ಚದಲ್ಲಿ ತಾತ್ವಿಕ ಅನುಮೋದನೆ ನೀಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ NIMHANS ನ 300 ಹಾಸಿಗೆಗಳ ಪಾಲಿಟ್ರೌಮಾ ಘಟಕಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದು, ಬೆಂಗಳೂರು ಸುತ್ತಮುತ್ತಲಿನ ಅಪಘಾತಕ್ಕೀಡಾದವರಿಗೆ ಜೀವ ಉಳಿಸುವ ಮತ್ತು ತುರ್ತು ಆರೈಕೆಯನ್ನು ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಸೂರ್ಯ, ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು. ಈ ವರ್ಷದ ಆರಂಭದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರೊಂದಿಗೆ ಸೂರ್ಯ ಅವರು ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ದರು. 2022 ರಲ್ಲಿಯೂ ಸೂರ್ಯ ಅವರು ಅಂದಿನ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಈ ಯೋಜನೆಗೆ ಅನುಮೋದನೆ ಪಡೆಯಲು ನಿರಂತರ ಪ್ರಯತ್ನ ಮಾಡಿದ್ದು, ಈ ಯೋಜನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಬಾಕಿ ಇತ್ತು, ಇದು ಅಂತಿಮವಾಗಿ ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆಯೊಂದಿಗೆ ದೊರೆತಿರುವುದು ವಿಶೇಷ.
ಇದೊಂದು ಸ್ವಾಗತಾರ್ಹ ಕ್ರಮ ಎಂದು ಕರೆದಿರುವ ಸಂಸದ ಸೂರ್ಯ, “ವಿಮಾನ ನಿಲ್ದಾಣದ ಸಮೀಪ ಪಾಲಿಟ್ರೌಮಾ ಕೇಂದ್ರದ ಸ್ಥಾಪನೆಯು ಅಪಘಾತಕ್ಕೀಡಾದವರಿಗೆ ತುರ್ತು ಪರಿಹಾರ ನೀಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಈ ಪ್ರದೇಶದಲ್ಲಿ ಅಂತಹ ಆಘಾತ ಪ್ರಕರಣಗಳಿಗೆ ಸ್ಪಂದಿಸುವ ಯಾವುದೇ ಸಾರ್ವಜನಿಕ ಸೌಲಭ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಪಾಲಿಟ್ರೌಮಾ ಕೇಂದ್ರವನ್ನು ₹498 ಕೋಟಿ ವೆಚ್ಚದಲ್ಲಿ ಈ ಮಂಜೂರು ಮಾಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ”ಎಂದಿದ್ದಾರೆ.
“ಅಪಘಾತಕ್ಕೀಡಾದವರಿಗೆ ‘ನಿರ್ಣಾಯಕ’ ಸಮಯದಲ್ಲಿ ಆರೈಕೆ ದೊರೆಯುವುದು ಅತ್ಯಗತ್ಯ. NIMHANS ನ ಪಾಲಿಟ್ರೌಮಾ ಕೇಂದ್ರವು ಈ ತುರ್ತು ಆರೈಕೆಯನ್ನು ಒದಗಿಸುವುದರ ಜೊತೆಗೆ, ಎತ್ತರದಿಂದ ಬಿದ್ದ, ಹಲ್ಲೆಗೊಳಗಾದ ಅಥವಾ ಯಾವುದೇ ಗಂಭೀರ ಗಾಯದಿಂದ , ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೂ ಸೇವೆ ಸಲ್ಲಿಸಲಿದೆ. ಇದು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಸಾವಿರಾರು ರೋಗಿಗಳ ಜೀವಗಳನ್ನು ಉಳಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ.” ಎಂದು ತಿಳಿಸಿದರು.
ರಸ್ತೆ ಸಂಚಾರ ಅಪಘಾತಗಳು ಪಾಲಿಟ್ರೌಮಾಗೆ ಸಾಮಾನ್ಯ ಕಾರಣಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಸ್ತೆ ಸಂಚಾರ ಅಪಘಾತಗಳು 2030 ರ ವೇಳೆಗೆ ಸಾವಿಗೆ ಐದನೇ ಪ್ರಮುಖ ಕಾರಣವಾಗುವ ಸಾಧ್ಯತೆಯಿದೆ. ಭಾರತದಲ್ಲಿ, 2022 ರಲ್ಲಿ 4,61,312 ರಸ್ತೆ ಅಪಘಾತಗಳ ಘಟನೆಗಳು ಸಂಭವಿಸಿದ್ದು, 1,68,491 ಜೀವಗಳನ್ನು ಬಲಿತೆಗೆದುಕೊಂಡಿವೆ ಮತ್ತು 4,43,366 ಜನರಿಗೆ ಗಾಯಗಳಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪಘಾತಗಳಲ್ಲಿ 11.9% ಮತ್ತು ಸಾವುಗಳಲ್ಲಿ 9.4% ಹೆಚ್ಚಳವನ್ನು ಪ್ರತಿನಿಧಿಸುತ್ತದೆ ಎಂದರು.
ಪಾಲಿಟ್ರೌಮಾ ಕೇಂದ್ರವು ಕಾರ್ಯಾರಂಭ ಮಾಡಿದ ನಂತರ, ರೋಗಿಗಳಿಗೆ ಬಹು ಆಯಾಮದ ತುರ್ತು ಆರೈಕೆ ನೀಡಲು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.. ಅದಲ್ಲದೆ, ರಾಷ್ಟ್ರೀಯ ಹೆದ್ದಾರಿ ಮತ್ತು ಕೆಐಎ (KIA) ಗೆ ಹತ್ತಿರವಿರುವುದರಿಂದ, ಇತರ ನಗರಗಳಿಂದಲೂ ರೋಗಿಗಳು ಈ ಕೇಂದ್ರವನ್ನು ಉತ್ತಮವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದರು.
ಕ್ಯಾಲಸನಹಳ್ಳಿಯಲ್ಲಿನ 39 ಎಕರೆ ಜಾಗವನ್ನು 2012-13 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ NIMHANS ಗೆ ಹಂಚಿಕೆ ಮಾಡಲಾಗಿತ್ತು. ನಂತರ ಸಂಸ್ಥೆಯು ₹498 ಕೋಟಿ ಯೋಜನಾ ವೆಚ್ಚದಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಪಾಲಿಟ್ರೌಮಾ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತು. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯಿಂದ ತಾತ್ವಿಕ ಅನುಮೋದನೆ ದೊರೆತಿದ್ದು, ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಂತಿಮ ಅನುಮೋದನೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದರು.