ಬೆಂಗಳೂರು(www.thenewzmirror.com): ಕಾಂಗ್ರೆಸ್ಸಿಗರು ಅಧಿಕಾರ ಇದೆ ಎಂದು ದರ್ಪದಿಂದ ಮೆರೆದರೆ, ಅದಕ್ಕೆ ಉತ್ತರ ಕೊಡುವ ದಿನಗಳು ಹತ್ತಿರ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ಇವತ್ತು ಇರುತ್ತದೆ; ನಾಳೆ ಹೋಗುತ್ತದೆ. ಅಧಿಕಾರ ಶಾಶ್ವತವಲ್ಲ. ವಿಪಕ್ಷದವರಿಗೆ ಅವರದೇ ಆದ ಗೌರವ ಇದೆ. ಆ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಆಡಳಿತ ಪಕ್ಷದವರ ಕರ್ತವ್ಯ. ಸರಕಾರ ಈಗಲಾದರೂ ಎಚ್ಚತ್ತುಕೊಳ್ಳಲಿ. ವಿಪಕ್ಷ ನಾಯಕರನ್ನು ಹೆದರಿಸುವುದು, ನಮ್ಮ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವುದನ್ನು ಕೈಬಿಡಿ ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಪ್ರಮುಖರ ಸಭೆ ನಡೆಸಿದ್ದರು. ಅವರು ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡುವ ವಿಷಯ ತಿಳಿದು ಒಂದು ಕೋಮಿನ ಮುಖಂಡರು ಬಂದು ಗೃಹ ಸಚಿವರನ್ನು ಮುತ್ತಿಗೆ ಹಾಕಿದ್ದ ಮಾಹಿತಿ ಇದೆ. ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡದಂತೆ ಬೆದರಿಕೆ ಹಾಕಿದ್ದರು. ಸಚಿವರು ಹೆದರಿ ವಾಪಸ್ ಬಂದಿದ್ದಾರೆಂದರೆ ಯಾವ ಸೌಹಾರ್ದದ ಬಗ್ಗೆ ನೀವು ಚರ್ಚೆ ಮಾಡುತ್ತೀರಿ?ಸಿದ್ದರಾಮಯ್ಯನವರ ಈ ಸರಕಾರ ಅಲ್ಪಸಂಖ್ಯಾತರ ಓಲೈಕೆ ಮತ್ತು ಅವರನ್ನು ಖುಷಿ ಪಡಿಸಲು ಇದೆಯೇ ಹೊರತು ಕಾನೂನು- ಸುವ್ಯವಸ್ಥೆ ಚೆನ್ನಾಗಿರಬೇಕು; ರಾಜ್ಯದಲ್ಲಿ ಶಾಂತಿಯುತ ವಾತಾವರಣ ಇರಬೇಕೆಂಬ ಕಿಂಚಿತ್ತೂ ಕಾಳಜಿ ಅವರಿಗೆ ಇಲ್ಲ ಎಂದರು.
ರಾಜ್ಯ ರಾಜಕಾರಣದ ಮಹತ್ತರ ತಿರುವು:
ರಾಜ್ಯ ರಾಜಕಾರಣವು ಮುಂದಿನ ದಿನಗಳಲ್ಲಿ ಮಹತ್ತರ ತಿರುವು ಪಡೆದುಕೊಳ್ಳಲಿದೆ.ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಸ್ವತಃ ಸಿದ್ದರಾಮಯ್ಯನವರು ಬಿ.ಕೆ.ಹರಿಪ್ರಸಾದ್ ಅವರ ಮನೆಗೆ ಹೋಗಿದ್ದಾರೆ. ಮುಂದಿನ ದಿನಗಳ ಘಟನೆಗಳನ್ನು ಕಾದು ನೋಡಿ ಎಂದು ಹೇಳಿದರು.
ಕಮಲಹಾಸನ್ ಭಾಷಾ ವಿಷಬೀಜ ಬಿತ್ತಬಾರದು:
ನಟ ಕಮಲಹಾಸನ್ ಅವರಿಗೆ ತಮಿಳಿನ ಕುರಿತ ಪ್ರೀತಿ, ಕಾಳಜಿ ನನಗೆ ಅರ್ಥವಾಗುತ್ತದೆ. ಅವರಿಗೆ ತಮಿಳು ಭಾಷೆ ಬಗ್ಗೆ ಪ್ರೇಮ ಇದೆಯೆಂದು ಕನ್ನಡ ಭಾಷೆ ಬಗ್ಗೆ ಇಂಥ ಹೇಳಿಕೆ ಕೊಡುವುದು ಖಂಡಿತ ಸರಿಯಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕನ್ನಡ ಮತ್ತು ತಮಿಳು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕಮಲಹಾಸನ್ ಅವರ ಹೇಳಿಕೆಯಿಂದ ಕನ್ನಡಿಗರಿಗೆ ನೋವುಂಟಾಗಿದೆ. ಅನೇಕ ಪ್ರತಿಕ್ರಿಯೆಗಳ ಬಳಿಕ ಕೂಡ ಕ್ಷಮೆ ಕೇಳುವುದಿಲ್ಲ ಎಂದಿರುವುದು ದುರಹಂಕಾರದ ನಡೆ ಎಂದು ಖಂಡಿಸಿದರು. ಕಮಲಹಾಸನ್ ಅವರು ಈ ರೀತಿ ವಿಷಬೀಜ ಬಿತ್ತಬಾರದು ಎಂದು ತಿಳಿಸಿದರು.
ಬಿಜೆಪಿ ಮುಖಂಡರ ಬೆದರಿಕೆ, ಬ್ಲ್ಯಾಕ್ಮೇಲ್ಗೆ ಹೆದರೆವು:
ಹೋರಾಟದ ಸಂದರ್ಭದಲ್ಲಿ ನಮ್ಮ ಹಿರಿಯರು, ವಿಧಾನಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರು ಭಾಷಣದಲ್ಲಿ, ಅಲ್ಲಿನ ಜಿಲ್ಲಾಧಿಕಾರಿಗಳ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದರು. ಬಳಿಕ ರವಿಕುಮಾರ್ ಅವರು ತಮ್ಮ ಮಾತಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೂ, ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ದೂರು ಪಡೆದು ಎಫ್ಐಆರ್ ಮಾಡಿದ್ದಾರೆ. ರವಿಕುಮಾರ್ ಅವರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ; ಅಲ್ಲದೆ ಬೆದರಿಸುವ ಕೆಲಸ ಈ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರಕಾರಕ್ಕೆ ಪ್ರಾಮಾಣಿಕತೆ ಇದ್ದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಗೂಂಡಾ ವರ್ತನೆ ತೋರಿದವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕಿತ್ತು. ಅಧಿಕಾರಿಗಳು ಕಣ್ಮುಚ್ಚಿ ಕೂತ ಬಗ್ಗೆ ತನಿಖೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಹಿಂದುಳಿದ, ದಲಿತ ನಾಯಕರನ್ನು ಗುರಿಯನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರನ್ನು ಬೆದರಿಸುವುದು, ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇವ್ಯಾವುದಕ್ಕೂ ಬಿಜೆಪಿ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.