ಬೆಂಗಳೂರು(www.thenewzmirror.com):ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು ದಲಿತ ವಿರೋಧಿ ನೀತಿ ಅನುಸರಿಸಿದೆ ಎಂಬ ವಿಷಯವು ಸತ್ಯಕ್ಕೆ ದೂರವಾಗಿದ್ದು ಎಂದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘಕ್ಕೆ ವಿಶ್ವವಿದ್ಯಾಲಯದ ವತಿಯಿಂದ ಪತ್ರದ ಮೂಲಕ ಸ್ಪಷ್ಟನೆ ನೀಡಲಾಗಿದೆ.
“ಶಾಸನಬದ್ದ ಹುದ್ದೆಗಳ ನೇಮಕಾತಿಯಲ್ಲಿ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ, ಸರ್ಕಾರದ ಮೀಸಲಾತಿ ನಿಯಮಗಳ ಉಲ್ಲಂಘನೆ ಮತ್ತು ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ” ಕುರಿತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘ ಬರೆದಿದ್ದ ಪತ್ರಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪತ್ರದ ಮೂಲಕ ಉತ್ತರಿಸಿದೆ.
ಕುಲಪತಿ, ಕುಲಸಚಿವರು, ವಿತ್ತಾಧಿಕಾರಿಗಳು ಮತ್ತು ಕುಲಸಚಿವರು (ಮೌಲ್ಯಮಾಪನ) ಶಾಸನಬದ್ದ ಹುದ್ದೆಗಳಿಗೆ ಸರ್ಕಾರವೇ ನೇರವಾಗಿ ನೇಮಕಾತಿ ಮಾಡುತ್ತಾ ಬಂದಿರುವುದರಿಂದ ಈ ನೇಮಕಾತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಥವಾ ಕುಲಪತಿಗಳ ಪಾತ್ರವೇನೂ ಇರುವುದಿಲ್ಲ ಹಾಗಿದ್ದಾಗಿಯೂ ತಾರತಮ್ಯ ನೀತಿ ಎಂದು ತಿಳಿಸಿರುವುದು ವಿಷಾಧನೀಯ ಎಂದಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಹುದ್ದೆಗಳಾದ ನಿರ್ದೇಶಕರು,ಸಂಯೋಜಕರು,ವಿಶೇಷಾಧಿಕಾರಿ ಮತ್ತು ನೋಡಲ್ ಅಧಿಕಾರಿಗಳ 30 ಹುದ್ದೆಗಳ ಪೈಕಿ 22 ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರನ್ನೇ ನೇಮಿಸಲಾಗಿದೆ ಉಳಿದ 08 ಹುದ್ದೆಗಳಿಗೆ ಇತರ ವರ್ಗದ ಶಿಕ್ಷಕರನ್ನು ನೇಮಿಸಲಾಗಿದೆ.ವಿಶ್ವವಿದ್ಯಾಲಯ ಹಂತದಲ್ಲೇ ನೇಮಕಾತಿ ಮಾಡಬಹುದಾದ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೇರಿದ ಪ್ರಾಧ್ಯಾಪಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನೇಮಕ ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇನ್ನೂ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಯೊಂದಿಗೆ ನಾಲ್ಕು ಶಿಕ್ಷಕರನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಯಂ ಶಿಕ್ಷಕರ ಕೊರತೆಯಿಂದ ಮತ್ತು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಅಂತರ್ ವಿಶ್ವವಿದ್ಯಾಲಯ ವರ್ಗಾವಣೆ ಮಾಡಿದೆ ಆದ್ದರಿಂದ ದಲಿತ ವಿರೋಧ ನೀತಿ ಅನುಸರಿಸಿದೆ ಎಂಬ ವಿಷಯವು ಸತ್ಯಕ್ಕೆ ದೂರವಾದುದ್ದು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 126 ಶಿಕ್ಷಕರ ಪೈಕಿ 80 ಜನ ಶಿಕ್ಷಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಶಿಕ್ಷಕರಾಗಿರುತ್ತಾರೆ.ಅಂದರೆ ಶೇಕಡಾ 63.5% ರಷ್ಟು ಶಿಕ್ಷಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ.
ಬೆಂಗಳೂರು ವಿಶ್ವವಿದ್ಯಾಲಯ ಹೊರತುಪಡಿಸಿ ರಾಜ್ಯದ ಯಾವುದೇ ಇತರೇ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಿರುವುದಿಲ್ಲ. *ಸಮಾಜ ಕಲ್ಯಾಣ ಇಲಾಖೆ ಗುರುತಿಸಿದ್ದ 55 ಬ್ಯಾಕ್ಲಾಗ್ ಹುದ್ದೆಗಳಲ್ಲಿ 35 ಬ್ಯಾಕ್ ಲಾಗ್ ಹುದ್ದೆಗಳನ್ನು ಈಗಾಗಲೇ ತುಂಬಲಾಗಿರುತ್ತದೆ. ಉಳಿದ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
2024-25 ಸಾಲಿನಲ್ಲಿ ಸುಮಾರು 44 ಪ್ರಾಧ್ಯಾಪಕರಿಗೆ ಹಿರಿಯ ಪ್ರಾಧ್ಯಾಪಕರಾಗಿ ಮುಂಬಡ್ತಿ ನೀಡಲಾಗಿದ್ದು ಇವರ ಪೈಕಿ 29 ಪ್ರಾಧ್ಯಪಕರುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವಾಗಿರುತ್ತಾರೆ. ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


