ಬೆಂಗಳೂರು(www.thenewzmirror.com): ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೋಯ ವಿಶ್ವವಿದ್ಯಾಲಯ, ಮಂಗಳೂರು ಇವರ ಸಹಯೋಗದೊಂದಿಗೆ 2025ನೇ ಜೂನ್ 04 ರಿಂದ 06 ವರೆಗೆ ಮಂಗಳೂರಿನ ಯೆಂಡುರನ್ಸ್ ಜೋನ್, ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ ಅಂತರರಾಷ್ಟ್ರೀಯ ಯುವ ಶೃಂಗ ಸಭೆ -2025″ (Global Youth Summit: 2025) ನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 04 ರ ಸಂಜೆ 05.30 ಗಂಟೆಗೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಲಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿರುವರು.
ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ಹಾಗೂ 17 ವಿವಿಧ ರಾಷ್ಟ್ರಗಳಿಂದ ಒಟ್ಟು 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಹಾಗೂ 5 ರಾಷ್ಟ್ರಗಳಿಂದ ಭಾಷಣಕಾರರು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮವು ಸಮಾಜದ ಮೇಲೆ ಗಮನಾರ್ಹ ಉತ್ತಮ ಪರಿಣಾಮ ಬೀರುವ ವಿಷಯಗಳ ಕುರಿತು ವಿಚಾರ-ವಿನಿಮಯ ಮಾಡಿಕೊಳ್ಳಲು, ಒಂದು ಮಹತ್ತರವಾದ ವೇದಿಕೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.