ಕೋಲಾರ(www.thenewzmirror.com): ಪೆಹಲ್ಗಾಂ ದುರ್ಘಟನೆ ಮೂಲಕ 26 ಜನರ ಸಾವಿಗೆ ಕಾರಣರಾದ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಮೋದಿ ಮತ್ತು ಭಾರತೀಯ ಯೋಧರ ಜೊತೆ ನಿಲ್ಲುವ ಸಂಕಲ್ಪವನ್ನು ಭಾರತದ ಜನರು ಮತ್ತು ಬಿಜೆಪಿ ಮಾಡಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ ಸಂಬಂಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಬಿಜೆಪಿ ಕಾರ್ಯಕರ್ತರು ಮತ್ತು ಎಲ್ಲ ಜನರು ಇವತ್ತು ಮತ್ತು ನಾಳೆ ನಮ್ಮ ಊರಿನ ದೇವಸ್ಥಾನಕ್ಕೆ ತೆರಳಿ ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದರು. ಈ ಮೂಲಕ ನಮ್ಮ ಯೋಧರಿಗೆ ಶಕ್ತಿ ಕೊಡಲಿ. ಮೋದಿ ಅವರಿಗೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಇನ್ನಷ್ಟು ಶಕ್ತಿ ತುಂಬಲಿ ಎಂದು ಆಶಿಸಿದರು. ಉಗ್ರರು, ಅವರ ಅಡಗುತಾಣಗಳನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದರು.
ಜನವಿರೋಧಿ, ರೈತ ವಿರೋಧಿ, ಬಡವರ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇವತ್ತಿನಿಂದ ನಾಡಿದ್ದಿನವರೆಗೆ ಹೋರಾಟ ನಡೆಯಬೇಕಿತ್ತು. ಆದರೆ, ಇಡೀ ದೇಶ, ಪ್ರತಿಯೊಬ್ಬ ಭಾರತೀಯರು ನಾವೆಲ್ಲ ಒಂದಾಗಿದ್ದೇವೆ; ಒಗ್ಗೂಡಿದ್ದೇವೆ ಎಂದು ಯೋಧರಿಗೆ ಬೆಂಬಲ ನೀಡಬೇಕಿದೆ. ಕಾಂಗ್ರೆಸ್ ಸೇರಿ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಇರುವ ಸಂದೇಶವನ್ನು ಜಗತ್ತಿಗೆ ಕೊಡಬೇಕಿದೆ ಎಂದು ತಿಳಿಸಿದರು.
ಪಾಕಿಸ್ತಾನ ಮುಂದಿನ ದಿನಗಳಲ್ಲಿ ಭಾರತದ ಕಡೆ ತಿರುಗಿ ನೋಡಬಾರದು; ಅಲ್ಲಿನ ಉಗ್ರರು ಮತ್ತೆ ಉಸಿರೆತ್ತಬಾರದು; ಆ ನಿಟ್ಟಿನಲ್ಲಿ ನಮ್ಮ ಬೆಂಬಲ ಕೊಡಬೇಕಾಗಿದೆ ಎಂದು ತಿಳಿಸಿದರು. ಬಿಜೆಪಿಗೆ ದೇಶ ಮೊದಲು ಎಂದು ಅವರು ಹೇಳಿದರು. ಯೋಧರಿಗೆ ನೈತಿಕ ಸ್ಥೈರ್ಯ ತುಂಬುವಂತೆ ಮನವಿ ಮಾಡಿದರು.
ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ಯಾಮಪ್ರಸಾದ ಮುಖರ್ಜಿ ಅವರು, ಏಕ್ ದೇಶ್ ಮೇ ದೋ ನಿಶಾನ್, ದೋ ಪ್ರಧಾನ್ ನಹಿ ಚಲೇಗಾ ಎನ್ನುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಬೇಕೆಂಬುದು ಅವರ ಪ್ರಬಲ ಆಕಾಂಕ್ಷೆಯಾಗಿತ್ತು. ಅದೇ ಆಶಯ ಹೊತ್ತಿದ್ದ ಅವರು ದೇಶಕ್ಕಾಗಿ ಬಲಿದಾನ ಮಾಡಿದ್ದರು. ಇವತ್ತು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಶಪಥ ಮಾಡಿದ್ದಾರೆ. ಇಂಥ ಉಗ್ರರ ಚಟುವಟಿಕೆಗಳಿಗೆ ಅಂತ್ಯ ಹಾಡಲು ಅವರು ಮುಂದಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.