ಶಿವಮೊಗ್ಗ(www.thenewzmirror.com):ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದ್ದು,ಮೈದುಂಬಿದ ತುಂಗೆಗೆ ಸಂಸದ ಬಿವೈ ರಾಘವೇಂದ್ರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.
ತುಂಗಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದರು, ಶಾಸಕರಾದ ಅರಗ ಜ್ಞಾನೇಂದ್ರ, ಚನ್ನಬಸಪ್ಪ,ಎಂಎಲ್ಸಿ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಅವರು, ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ರಾಜ್ಯ ಪ್ರಕೋಷ್ಟಗಳ ಸಂಯೋಜಕ ದತ್ತಾತ್ರಿ ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಭರ್ತಿಯಾದ ತುಂಗೆಗೆ ಬಾಗಿನ ಅರ್ಪಿಸಿದರು.
ಈ ಕುರಿತು ಮಾತನಾಡಿದ ರಾಘವೇಂದ್ರ, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಮತ್ತು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ರೈತರ ಜೀವನಾಡಿ ತನ್ನ ಜೀವಕಳೆ ಮರಳಿ ಪಡೆದುಕೊಂಡು ಮೈದುಂಬಿ ಹರಿಯುತ್ತಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಭೇಟಿ ಕೊಟ್ಟು ಬಾಗಿನ ಸಮರ್ಪಿಸಿದ್ದಾಗಿ ತಿಳಿಸಿದರು.
ಈ ವರ್ಷವೂ ಮಳೆರಾಯನ ಕೃಪೆಯಿಂದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಧುಮ್ಮಿಕ್ಕಿದ ಪರಿಣಾಮ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡು ಉಳುವ ಯೋಗಿಯ ಮೊಗದಲ್ಲಿ ಭಯದ ಕಾರ್ಮೋಡ ದೂರವಾಗಿ ಭರವಸೆಯ ಮಂದಹಾಸ ಮೂಡಿಸಿದ್ದು, ಈ ಸಾಲಿನಲ್ಲಿ ಭತ್ತ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ ಎಂದರು..