ಬೆಂಗಳೂರು(www.thenewzmirror.com): 2047ಕ್ಕೆ ಭಾರತವು ವಿಕಸಿತ ದೇಶವಾಗಲು, ಕೃಷಿಯ ಬೆಳವಣಿಗೆಯ ಜೊತೆಗೇ ಎಂಎಸ್ಎಂಇ ಬೆಳವಣಿಗೆ ಮತ್ತು ಉದ್ಯೋಗ ಕೊಡುವ ಕಾರ್ಯ ಆಗಬೇಕೆಂಬುದು ನಮ್ಮ ಸರಕಾರದ ದೂರದೃಷ್ಟಿಯ ಇಚ್ಛೆ ಎಂದು ಕೇಂದ್ರದ ಎಂಎಸ್ಎಂಇ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.
ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ದೇಶದ ಸೂಕ್ಷ್ಮ, ಲಘು ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) 26 ಕೋಟಿ ಜನರಿಗೆ ಉದ್ಯೋಗ ನೀಡಿವೆ ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇವೆರಡೂ ಇಲಾಖೆಗಳು ದೊಡ್ಡ ಪ್ರಮಾಣದ ಪ್ರಗತಿಯನ್ನು ಸಾಧಿಸಿವೆ.ನಮ್ಮ ದೇಶದಲ್ಲಿ ಕೃಷಿ ಇಲಾಖೆ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಹಿಂದಿನ ಸರಕಾರದಲ್ಲಿ ನಾನು ಕೃಷಿ ಇಲಾಖೆ ಮತ್ತು ಆಹಾರ ಸಂಸ್ಕರಣೆ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದೆ. ದೇಶದಲ್ಲಿ ಕೃಷಿಯು ಸುಮಾರು 45- 50 ಕೋಟಿ ಜನರಿಗೆ ಉದ್ಯೋಗ ಕೊಡುತ್ತಿದೆ ಎಂದು ವಿವರಿಸಿದರು.
ನಮ್ಮ ದೇಶದಲ್ಲಿ ಎಷ್ಟು ಕೈಗಾರಿಕೆಗಳಿವೆ ಎಂಬ ವಿವರಗಳು ಹಿಂದೆ ನಮ್ಮ ಬಳಿ ಇರಲಿಲ್ಲ. ಇವತ್ತಿಗೂ ಶೇ 100ರಷ್ಟು ವಿವರ ಇಲ್ಲ; ಆದರೂ, ನಮ್ಮ ಸರಕಾರ ಉದ್ಯಮ್ ಪೋರ್ಟಲ್ ಮೂಲಕ ಒಂದು ಪ್ರಯತ್ನ ಮಾಡಿತ್ತು. ಇದರಲ್ಲಿ ಎಂಎಸ್ಎಂಇಗಳು ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಲಾಗಿತ್ತು. ಇವತ್ತಿನ ತನಕ 6.36 ಕೋಟಿ ಎಂಎಸ್ಎಂಇಗಳು ಉದ್ಯಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಿವೆ ಎಂದು ವಿವರಿಸಿದರು.
ಇನ್ನೂ ಇಂಥ ಕೈಗಾರಿಕೆಗಳು ಮಾಹಿತಿ ಇಲ್ಲದೆ, ನೋಂದಣಿಗೆ ಬಾಕಿ ಇವೆ ಎಂಬ ಮಾಹಿತಿ ಇದೆ. ಸುಮಾರು 7 ಕೋಟಿ ಎಂಎಸ್ಎಂಇಗಳು ಇರಬಹುದು. ಕೃಷಿ ಇಲಾಖೆ ಹೆಚ್ಚು ಜನರಿಗೆ ಉದ್ಯೋಗ ಕೊಡುತ್ತಿದ್ದರೂ, ಆಹಾರ ನೀಡುತ್ತಿದ್ದರೂ, ರಫ್ತು ಮಾಡಿದರೂ ನಮ್ಮ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಅದರ ಕೊಡುಗೆ ಅಂದಾಜು ಶೇ 18- 19ರಷ್ಟು ಇದೆ. ಅದು ಒಂದು ವರ್ಷ ಸುಮಾರು ಶೇ 22- 23ರಷ್ಟಾಗಿತ್ತು ಎಂದು ವಿವರಿಸಿದರು.
26 ಕೋಟಿ ಜನರಿಗೆ ಉದ್ಯೋಗ ಕೊಡುವ ಎಂಎಸ್ಎಂಇ, ಜಿಡಿಪಿಗೆ ಶೇ 30ರಷ್ಟು ಕೊಡುಗೆ ಕೊಡುತ್ತಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ 45 ರಷ್ಟು ಎಂಎಸ್ಎಂಇಗಳದು. ಎಂಎಸ್ಎಂಇಗಳು ಒಟ್ಟು ರಫ್ತಿಗೆ ಶೇ 40ರಷ್ಟು ಕೊಡುಗೆ ಕೊಡುತ್ತವೆ ಎಂದು ಹೇಳಿದರು.
ಎಂಎಸ್ಎಂಇಗಳು ನಮ್ಮ ದೇಶದ ಕೊಡುಗೆಯ ಪಾಲುದಾರರು ಎಂದು ಪ್ರಧಾನಿಯವರು ಹೇಳುತ್ತಾರೆ. ಎಂಎಸ್ಎಂಇಗಳಿಲ್ಲದೆ ಇದ್ದಲ್ಲಿ ಹಲವಾರು ದೊಡ್ಡದೊಡ್ಡ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಯ ಸಮಸ್ಯೆ ಆಗಲಿದೆ. ಎಚ್ಎಎಲ್, ಬಿಇಎಲ್, ಬಿಎಚ್ಇಎಲ್, ರಕ್ಷಣಾ ಕ್ಷೇತ್ರಗಳ ಕೈಗಾರಿಕೆಗಳಿಗೆ ಎಂಎಸ್ಎಂಇಗಳು ಕಚ್ಚಾ ಸಾಮಗ್ರಿ ನೀಡುತ್ತವೆ. ಆಹಾರ ಸಂಸ್ಕರಣೆಯಿಂದ ಚಂದ್ರಯಾನ ತನಕ ಎಂಎಸ್ಎಂಇಗಳ ವ್ಯಾಪ್ತಿ ಇದೆ ಎಂದರು.
ಎಂಎಸ್ಎಂಇಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು. ಇವುಗಳಿಗೆ ಆದ್ಯತೆ ಕೊಡಬೇಕು. 2047ಕ್ಕೆ ಭಾರತವು ವಿಕಸಿತ ದೇಶವಾಗಲು, ಕೃಷಿಯ ಬೆಳವಣಿಗೆಯ ಜೊತೆಗೇ ಎಂಎಸ್ಎಂಇ ಬೆಳವಣಿಗೆ ಮತ್ತು ಉದ್ಯೋಗ ಕೊಡುವ ಕಾರ್ಯ ಆಗಬೇಕೆಂಬುದು ನಮ್ಮ ಸರಕಾರದ ದೂರದೃಷ್ಟಿಯ ಇಚ್ಛೆ ಎಂದು ತಿಳಿಸಿದರು.