ಬೆಂಗಳೂರು/ನವದೆಹಲಿ (www.thenewzmirror.com): ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ಬ್ರಾಡ್ ಗೇಜ್ ರೈಲ್ವೆ ಮಾರ್ಗದಲ್ಲಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯವರೆಗೆ ರೂ 498 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಂದ ಏರ್ಪಟ್ಟಿದ್ದು, ಶಿರಾ ಸೇರಿದಂತೆ ನಾಲ್ಕು ಕಡೆಗಳಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಶಿರಾ ಕ್ಷೇತ್ರದ ಶಾಸಕ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ವಿ.ಜಯಚಂದ್ರ ಬುಧವಾರ ಹೇಳಿದ್ದಾರೆ.
ಒಟ್ಟು 41 ಕಿ.ಮೀ. ಉದ್ದದ ಈ ಕಾಮಗಾರಿಗೆ ಫರೀದಾಬಾದ್ ನ ಮೆಸರ್ಸ್ ಕೆ.ಆರ್.ಸಿ.ಆಲ್ಟಿಸ್ ಜಾಯಿಂಟ್ ವೆಂಚರ್ ಎಂಬ ಏಜೆನ್ಸಿಯೊಂದಿಗೆ ಒಪ್ಪಂದವಾಗಿದ್ದು, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ ಮತ್ತು ತಾವರೆಕೆರೆಯಲ್ಲಿ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಒಟ್ಟು 11 ದೊಡ್ಡ ಸೇತುವೆಗಳು, 55 ಕಿರುಸೇತುವೆ-ಕಲ್ವರ್ಟ್ ಗಳು, 35 ಓವರ್ ಬ್ರಿಜ್ ಹಾಗೂ 35 ಅಂಡರ್ ಬ್ರಿಜ್ ಗಳು ಕಾಮಗಾರಿಯ ಭಾಗವಾಗಿರುತ್ತವೆ ಎಂದು ಜಯಚಂದ್ರ ವಿವರಿಸಿದ್ದಾರೆ.
ಈ ರೈಲು ಮಾರ್ಗವು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೀಬಿಯಿಂದ ಆರಂಭವಾಗಿ ಧರ್ಮಪುರದ ಮೂಲಕ 41 ಕಿ.ಮೀ. ಉದ್ದಕ್ಕೆ ಹಾದುಹೋಗುತ್ತದೆ. ಇದರಿಂದ ಶಿರಾ ತಾಲ್ಲೂಕಿನಲ್ಲಿ ಶೇಂಗಾ, ತೆಂಗಿನಕಾಯಿ, ಅಡಿಕೆ, ಹುಣಸೆಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ, ಈ ಭಾಗದ ಜನಸಾಮಾನ್ಯರಿಗೆ ದಾವಣಗೆರೆ ಮತ್ತು ಬೆಂಗಳೂರಿಗೆ ಹೋಗುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಜಯಚಂದ್ರ ಹೇಳಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಶಿರಾದಲ್ಲಿ ತಾವು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಶಿರಾ ಆಸುಪಾಸಿನಲ್ಲಿ ಈಗ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು, ಜೊತೆಗೆ ಈ ರೈಲ್ವೆ ಮಾರ್ಗವೂ ಬಳಕೆಗೆ ಸಿದ್ಧಗೊಂಡರೆ ಅತ್ಯುತ್ತಮ ಉತ್ತಮ ಸಂಪರ್ಕ ವ್ಯವಸ್ಥೆ ದೊರೆಯುತ್ತದೆ ಎಂದಿದ್ದಾರೆ.