ಬೆಂಗಳೂರು(www.thenewzmirror.com):ಆರ್.ಸಿ.ಬಿ ವಿಜಯೋತ್ಸವ ಸಮಾರಂಭದ ವೇಳೆ ನಡೆದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಘಟನೆ ಸಂಬಂಧ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಬಿಜೆಪಿ ನಿಯೋಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
ಬಿಜೆಪಿ ನಿಯೋಗವು ಇಂದು ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಸಿಎಂ,ಡಿಸಿಎಂ ವಿರುದ್ಧ ದೂರು ಸಲ್ಲಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ವಿರುದ್ಧ ಎಫ್ಐಆರ್ ಮಾಡಲು ಕೋರಿರುವುದಾಗಿ ತಿಳಿಸಿದರು.
ಏನೂ ತಪ್ಪು ಮಾಡದ ಪೊಲೀಸರ ಬಲಿ ತೆಗೆದುಕೊಳ್ಳುತ್ತೀರಾ ಎಂದು ಅವರು ಪ್ರಶ್ನಿಸಿದರು. ಪೊಲೀಸ್ ಇಲಾಖೆ, ಕಮೀಷನರ್ ದಯಾನಂದ್ ಅವರು ಕಾರ್ಯಕ್ರಮ ಬೇಡ ಎಂದಿದ್ದರು. 3-4 ದಿನ ಬಿಟ್ಟು ಮಾಡುವಂತೆ ಹೇಳಿದರೂ ಕೇಳಿಲ್ಲ ಎಂದು ಆಕ್ಷೇಪಿಸಿದರು.
ಒತ್ತಡ ಹಾಕಿ ಕಾರ್ಯಕ್ರಮ ನಡೆಸಿದ್ದಾರೆ ಎಂದು ಟೀಕಿಸಿದರು. ಎಲ್ಲ ಅವ್ಯವಸ್ಥೆ, 11 ಜನರ ಬಲಿ, 50-60 ಜನರು ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬಂದಿರುವುದಕ್ಕೆ ಈ ಸರಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಕಾರಣ ಎಂದು ಆರೋಪಿಸಿದರು.
ಮೂರು ತನಿಖೆ ಸಾಧ್ಯವೇ: ಯಾವ ಸರಕಾರವಾದರೂ ಮೂರು ಮೂರು ತನಿಖೆ ಮಾಡಿಸಲು ಸಾಧ್ಯವೇ? ಡಿ.ಸಿ, ಸಿಐಡಿ ಮಾತ್ರವಲ್ಲದೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ನೈತಿಕತೆ ಎನ್ನುವ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆ. ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿ ಹಿಡಿದು ಓಡಾಡುತ್ತಾರೆ. ಆ ಸಂವಿಧಾನದ ಬಗ್ಗೆ ಡಿ.ಕೆ.ಶಿವಕುಮಾರರಿಗೆ ಗೌರವ ಇದ್ದಲ್ಲಿ ಮೊದಲು ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಸರಕಾರದಿಂದ ಅಧಿಕಾರ ದುರ್ಬಳಕೆ- ಪಿ.ರಾಜೀವ್
ಬಂದೋಬಸ್ತ್ ಮಾಡಲಾಗದು ಎಂದು ಪೊಲೀಸ್ ಇಲಾಖೆ ತಿಳಿಸಿದ್ದರೂ ಕಾರ್ಯಕ್ರಮ ನಡೆಸಿದ ಸರಕಾರದಿಂದ ಅಧಿಕಾರ ದುರ್ಬಳಕೆ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದರು. ಸಾರ್ವಜನಿಕರ ತೆರಿಗೆ ಹಣವನ್ನು ಇವರ ವಿಜಯೋತ್ಸವಕ್ಕೆ ಯಾಕೆ ಖರ್ಚು ಮಾಡಿದರು ಎಂದು ಅವರು ಪ್ರಶ್ನಿಸಿದರು.
ಹೆಚ್ಚು ಜನರು ಬರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕೊಟ್ಟರೂ, ನಡೆದು ಹೋಗಲಿ ಎಂಬ ಧೋರಣೆಯಿಂದಾಗಿ ಅನುಮತಿ ನೀಡಲು ಸೂಚಿಸಿದ್ದಾರೆ. ಲಕ್ಷಾಂತರ ಜನರು ಬಂದಾಗ ಆಗಬಹುದಾದ ಅನಾಹುತ- ಅವಘಡಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಸಾವಿರಾರು ಜನ ವೈದ್ಯರನ್ನು ಕರೆಸಬೇಕಿತ್ತು. ಆಮ್ಲಜನಕ, ಆಂಬುಲೆನ್ಸ್ ಇರಬೇಕಾಗಿತ್ತು. ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕಿತ್ತು ಎಂದು ತಿಳಿಸಿದರು.
ಈ ಸರಕಾರ ಪೊಲಿಟಿಕಲ್ ಕ್ರೆಡಿಟ್ಗಾಗಿ ಅಮಾಯಕರ ಕೊಲೆ ಮಾಡಿದೆ ಎಂದು ಅವರು ದೂರಿದರು. ಈ ಮಾನವ ಹತ್ಯೆಗೆ ಆರೋಪಿ ನಂಬರ್ 1 ಸಿದ್ದರಾಮಯ್ಯನವರೇ ಆಗಿದ್ದಾರೆ. ಆರೋಪಿ ನಂಬರ್ 2 ಡಿ.ಕೆ.ಶಿವಕುಮಾರ್. ಇವು ಇವರ ರಾಜಕೀಯ ತೆವಲಿಗಾಗಿ ನಡೆದ ಸಾವುಗಳು ಎಂದು ಟೀಕಿಸಿದರು.