ಕೇಂದ್ರದಲ್ಲಿ ಸ್ಕೀಂ ಸರ್ಕಾರ, ರಾಜ್ಯದಲ್ಲಿ ಸ್ಕ್ಯಾಂ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಆರೋಪ

RELATED POSTS

ಚಿತ್ರದುರ್ಗ(www.thenewzmirror.com): “ಕೇಂದ್ರ ಸರ್ಕಾರ ಸ್ಕೀಂ (ಅಭಿವೃದ್ಧಿ ಯೋಜನೆಗಳ) ಸರ್ಕಾರವಾದರೆ ರಾಜ್ಯ ಸರ್ಕಾರ ಸ್ಕ್ಯಾಂ (ಹಗರಣಗಳ) ಸರ್ಕಾರ” ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆಯಿಂದ ಸಂಜೆವರೆಗೂ ಯಾವ ಭ್ರಷ್ಟಾಚಾರ ಮಾಡಬೇಕು, ಎಲ್ಲೆಲ್ಲಿ ಎಷ್ಟು ಹಣ ಹೊಡೆಯಬೇಕು ಎಂದು ಯೋಚಿಸುವುದೇ ಇವರ ಆಡಳಿತ ಎಂದು ಟೀಕಿಸಿದರು. “ಈ ದೇಶ ಮೊದಲು ಎನ್ನುವ ಪಕ್ಷ” ಬಿಜೆಪಿ. ಆದರೆ, ಕಾಂಗ್ರೆಸ್ ಪಕ್ಷ ಬ್ರಿಟಿಷರು ಕಟ್ಟಿದ ಪಕ್ಷ. ಬ್ರಿಟಿಷರು ಕಟ್ಟಿದ ಪಕ್ಷವನ್ನೇ ಕಾಂಗ್ರೆಸ್ಸಿನವರು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದಲೇ  ಅವರಂತೆ ಲೂಟಿ ಹೊಡೆಯುತ್ತಿದ್ದಾರೆ ಎಂದರು. 

ರಾಷ್ಟ್ರ ರಾಜಕಾರಣದಲ್ಲಿ  ಬಿಜೆಪಿ,  ತನ್ನದೇ ಆದ ರೀತಿಯಲ್ಲಿ ರಾಷ್ಟ್ರ ಕಟ್ಟುವ ಕೆಲಸದಲ್ಲಿ ನಿರತವಾಗಿದೆ,  ವಿಶೇಷವಾಗಿ ಮಾನ್ಯ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ 11 ವರ್ಷಗಳ ಕಾಲ ಸಮರ್ಥ ಆಡಳಿತ ನಡೆಸಿದೆ. ಇದಕ್ಕೂ ಮೊದಲು 14 ವರ್ಷಗಳ ಕಾಲ ಗುಜರಾತ್‍ನ ಮುಖ್ಯಮಂತ್ರಿಗಳಾಗಿ ನಿಷ್ಕಳಂಕ ಆಡಳಿತ ಕೊಟ್ಟಿದ್ದಾರೆ. ಪ್ರಧಾನಮಂತ್ರಿಗಳು ನಿಷ್ಕಳಂಕ ಹಾಗೂ ಭ್ರಷ್ಟಾಚಾರರಹಿತ ಆಡಳಿತ ಕೊಟ್ಟಿರುವುದು ನಮ್ಮ ಹೆಮ್ಮೆ ಎಂದರು.

ಈ ಹಿಂದೆ ಆಡಳಿತ ನಡೆಸಿದವರ ಮೇಲೆ ಅನೇಕ ಭ್ರಷ್ಟಾಚಾರದ ಆರೋಪಗಳಿದ್ದವು. ಆದರೆ ಮಾನ್ಯ ನರೇಂದ್ರ ಮೋದಿಯವರದು ಹುಡುಕಿದರೂ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲದ ಆಡಳಿತ, ಇಂದು ವಿರೋಧ ಪಕ್ಷಗಳಲ್ಲಿರುವ ಅನೇಕ ನಾಯಕರು ಸಹ ಹೊಗಳುವಂತಹ ಆಡಳಿತ ನಡೆಸುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇಂದು ಜಗತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲೇ ಆರ್ಥಿಕವಾಗಿ ನಾವು ಜಗತ್ತಿನ 3ನೇ ಸ್ಥಾನಕ್ಕೆ ಬರುತ್ತೇವೆ, ಆದರೆ ಸತ್ಯವನ್ನು ಮರೆಮಾಚಿ ಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ದೇಶದ ಸರ್ವತೋಮುಖ ಅಭಿವೃದ್ಧಿಯತ್ತ  ನಮ್ಮ ದೇಶ ಮುನ್ನಡೆಯುತ್ತಿದೆ. ಇಡೀ ಜಗತ್ತು ಭಾರತದತ್ತ ತಿರುಗಿನೋಡುವಂತೆ ನಮ್ಮ  ಪ್ರಧಾನಿಯವರು ಆಡಳಿತ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಮುಡಾದಲ್ಲಿ, ವಾಲ್ಮೀಕಿ  ನಿಗಮದಲ್ಲಿ ಭ್ರಷ್ಟಾಚಾರ ಮಾಡಿದ್ದು, ಭ್ರಷ್ಟಾಚಾರವನ್ನು ಶಾಸನ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ, ಆದರೆ ರಾಜೀನಾಮೆ ನೀಡದೇ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.

ಜೂನ್ 4 ರಂದು ಆರ್ ಸಿ ಬಿ ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಜನರು ಮೃತಪಟ್ಟರು, ಕ್ರಿಕೆಟ್ ಕ್ರೀಡಾಪಟುಗಳನ್ನು ಸನ್ಮಾನಿಸುವ ಆತುರವೇನಿತ್ತು ಅಥವಾ ಅವಶ್ಯಕತೆಯೇನಾದರೂ ಇತ್ತೇ? ಇದೊಂದು ಖಾಸಗಿ ಕಂಪನಿಯ ಮಾಲೀಕತ್ವದ ಟೀಮ್ ಆಗಿದ್ದು ಸರ್ಕಾರ ಸನ್ಮಾನಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ವಿಧಾನಸೌಧದ ಮುಂದೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನಿಸಿ ಸಂಭ್ರಮಾಚರಣೆ ಮಾಡುವುದಾಗಿ ಮಾಧ್ಯಮಗಳ ಮುಂದೆ ಎಲ್ಲರಿಗೂ ಉಚಿತ ಪ್ರವೇಶವೆಂದು ತಿಳಿಸಿ ಆಹ್ವಾನಿಸಿದರು.  ಜನರನ್ನು ಕರೆದು ಸರಿಯಾದ ಭದ್ರತೆ ನೀಡದೇ ಅವರ ಪ್ರಾಣ ತೆಗೆದಿದ್ದೀರಿ, ಇದರ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು; ಇಲ್ಲವೆಂದರೆ ವಿರೋಧ ಪಕ್ಷವಾಗಿ ತಾವು ಬಿಡುವ ಪ್ರಶ್ನೆಯೇ ಇಲ್ಲವೆಂದರು.

2013 ರಲ್ಲಿ ಮುಖ್ಯಮಂತ್ರಿಯವರು ಸ್ವಕ್ಷೇತ್ರದಲ್ಲಿ ಸೋತರು, ಇಲ್ಲಿ ಸೋಲುವ ಭೀತಿ ಎದುರಾದಾಗ ಬಾದಾಮಿ ಕ್ಷೇತ್ರದಲ್ಲಿ ನಿಂತು ಚುನಾವಣೆಗೆ ನಿಂತು ಅಲ್ಲಿ ಗೆದ್ದರು ಎಂದರೆ ಅವರ  ಜನಪ್ರಿಯತೆ ಎಷ್ಟು ಎಂದು ಪ್ರಶ್ನಿಸಿದರು. ಕ್ರಿಕೆಟ್ ಘಟನೆಯಲ್ಲಿ ಯಾರದೂ ತಪ್ಪಿಲ್ಲವಾದರೂ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ನೀವು ಅಧಿಕಾರವನ್ನು ಉಳಿಸಿಕೊಳ್ಳಲು ಪೆÇಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದೀರಿ. ಇಡೀ ಕರ್ನಾಟಕ ಜನತೆ ಇದನ್ನು ಗಮನಿಸಿದೆ; ಇದಕ್ಕೆ ತಕ್ಕ ಪಾಠ ಕಲಿಸುತ್ತದೆ ಎಂದರು.

ವಿರೋಧಿಗಳೂ ಹೊಗಳುವಂತಹ ಅಭಿವೃದ್ಧಿ ಕಾರ್ಯ:

ದೇಶದ ಸುಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ಸಿನವರ ಅಸಂಬದ್ಧ ಹೇಳಿಕೆಗಳನ್ನು ಖಂಡಿಸಿದರು, ಜಮ್ಮು ಕಾಶ್ಮೀರದಲ್ಲಿ ಅತಿ ಎತ್ತರದ ರೈಲ್ವೆ ಸಂಪರ್ಕ ಸೇತುವೆಯನ್ನು ಕಟ್ಟಿ ಭಾರತದ ಎಲ್ಲಾ ಕಡೆಗೂ ರೈಲು ಸಂಪರ್ಕ ಕಲ್ಪಿಸಿದ್ದಾರೆ, ಸ್ವ್ವಾತಂತ್ರ್ಯದ ನಂತರದಲ್ಲಿ ಯಾರೂ ಮಾಡದ ಕೆಲಸವನ್ನು ಮಾನ್ಯ ಮೋದಿಯವರು ಮಾಡಿ ತೋರಿಸಿದ್ದಾರೆ, ಸ್ವತಃ ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾರವರು ಈ ಮಾತನ್ನು ತಮ್ಮ ಬಾಯಿಂದಲೇ ಹೇಳಿದ್ದಾರೆ, ತಮ್ಮ 8 ನೇ ವಯಸ್ಸಿನಲ್ಲಿ ಈ ಯೋಜನೆಗೆ ಬ್ರಿಟೀಷರು ಅಡಿಗಲ್ಲಿಟ್ಟರು, ಇಲ್ಲಿಯವರೆಗೆ ಯಾರೂ ಈ ಕಾರ್ಯವನ್ನು ಮಾಡಿರಲಿಲ್ಲವೆಂದು ತಿಳಿಸಿದ್ದಾರೆ.  ಈಗ ತಮ್ಮ ಮಗ ಪದವಿ ಓದುವಷ್ಟು ದೊಡ್ಡವನಾಗಿದ್ದಾನೆ, ಮಾನ್ಯ ಪ್ರಧಾನಿಯವರು ಬಂದ ಮೇಲೆ ಸದರಿ ರೈಲು ಸಂಪರ್ಕವನ್ನು ನಿರ್ಮಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಗಮನ ಸೆಳೆದರು. ವಿರೋಧಿಗಳೂ ಹೊಗಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಪ್ರಧಾನಿಗಳನ್ನು ದೇಶ ಮತ್ತು ಇಡೀ ಜಗತ್ತು ಮೆಚ್ಚಿದೆ ಎಂದರು.

ಉಪಾಯ ಸೂಚಿಸಿದ ಕಾಂಗ್ರೆಸ್ ಹೈಕಮಾಂಡ್:

ಕ್ರಿಕೆಟ್ ಅಭಿಮಾನಿಗಳು ಸತ್ತ ಪ್ರಕರಣವನ್ನು ಇಡೀ ರಾಜ್ಯ ಖಂಡಿಸಿತು. ಸಾರ್ವಜನಿಕರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಜನರು ವಿರೋಧಿಸಿದರು, ಇದನ್ನು ಕಂಡ ಕಾಂಗ್ರೆಸ್ ಹೈಕಮಾಂಡ್‍ನವರು ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸಿ ಇಬ್ಬರನ್ನೂ ರಾಜೀನಾಮೆ ಕೊಡುವಂತೆ ಹೇಳುತ್ತಾರೆ ಎಂದುಕೊಂಡರೆ, ಕೇಂದ್ರದಲ್ಲಿರುವ ಕಾಂಗ್ರೆಸ್ ನಾಯಕರು ಉಪಾಯ ಹೇಳಿಕೊಟ್ಟು ಕಳುಹಿಸಿದ್ದಾರೆ ಎಂದು ಟೀಕಿಸಿದರು.

ದಾರಿ ತಪ್ಪಿಸುವ ಉಪಾಯ ಕೊಟ್ಟ ಕಾಂಗ್ರೆಸ್ ಹೈ ಕಮಾಂಡ್ “ಡೆಡ್ ವುಡ್” ಎಂದು ಜರಿದರು, ಅಲ್ಲಿ ಯೋಗ್ಯರೇ ಕುಳಿತಿಲ್ಲ. ಪುನಃ ಜಾತಿಗಣತಿಯನ್ನು ಮುನ್ನೆಲೆಗೆ ತಂದು ಇನ್ನೊಮ್ಮೆ ಜಾತಿಗಣತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸ ಮಾಡಿರುವುದು ಅಕ್ಷಮ್ಯ ಎಂದರು.  ಈಗಾಗಲೇ ಸುಮಾರು 250 ಕೋಟಿ ಖರ್ಚು ಮಾಡಿರುವ ಜಾತಿಗಣತಿಯ  ಹಣ ಯಾರದ್ದು? ಸಾರ್ವಜನಿಕರ ಹಣವನ್ನು ಪುನಃ ಪೋಲು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು  ಬಿಜೆಪಿ  ಖಂಡಿಸುತ್ತದೆ  ಮತ್ತು  ಕ್ರಿಕೆಟ್  ಸಾವಿನ ಘಟನೆಯನ್ನು ಮರೆಯುವ ಪ್ರಶ್ನೆಯೇ ಇಲ್ಲ ಇಬ್ಬರೂ ರಾಜೀನಾಮೆ ಕೊಡುವ ತನಕ ಪ್ರತಿಭಟಿಸುತ್ತೇವೆ ಎಂದು ತಿಳಿಸಿರು.

ನಿಂದಿಸುವ ಕೆಲಸ ನಿಲ್ಲಿಸಲು ಆಗ್ರಹ:

ಮೋದಿಯವರನ್ನು ನಿಂದಿಸುವ ಕೆಲಸವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರಧಾನಮಂತ್ರಿಗಳು ಕಳೆದ 25 ವರ್ಷಗಳಿಂದ ಸತತವಾಗಿ ಗೆದ್ದು ಬಂದಿದ್ದಾರೆ.  ಮುಖ್ಯಮಂತ್ರಿಗಳು ತಮ್ಮ ಸ್ವಕ್ಷೇತ್ರದಲ್ಲೇ ಸೋತರು. ಮುಂದಿನ ಬಾರಿ ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದಾರೆ. ಆದರೆ ಇದೇ ರೀತಿ 4 ಬಾರಿ ಚುನಾವಣೆಗಳಲ್ಲಿ ಹೇಳಿ ಅನುಕಂಪ ಗಿಟ್ಟಿಸಿಕೊಂಡು ಗೆದ್ದಿದ್ದಾರೆ. ಮುಂದಿನ ಬಾರಿಯೂ ಇವರ ಹೇಳಿಕೆ ಬದಲಾಗಬಹುದು ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist