ಬೆಂಗಳೂರು(www.thenewzmirror.com): ದೇಶದಲ್ಲಿ ಜನಗಣತಿ ಮತ್ತು ಜಾತಿಗಣತಿ ಮಾಡುವ ಕುರಿತು ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯವನ್ನು ರಾಜ್ಯ ಬಿಜೆಪಿ ಸ್ವಾಗತಿಸಿದೆ.
ಈ ಕುರಿತು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ರಾಜ್ಯ ಸರಕಾರಕ್ಕೆ ಜಾತಿ ಗಣತಿ ಮಾಡಲು ಅಧಿಕಾರ ಇಲ್ಲದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೇ ಅಡಿಯಲ್ಲಿ ಜಾತಿ ಗಣತಿ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಈ ವಿಷಯದಲ್ಲಿ ಗೊಂದಲವಾಗಿತ್ತು. ಇದು ಸರಿಯಾಗಿ ಮಾಡಿಲ್ಲ; ಕಾನೂನುಬದ್ಧವಾಗಿ ಇಲ್ಲ; ಪ್ರತಿ ಮನೆಗೆ ಹೋಗಿಲ್ಲ ಹಾಗೂ ಎಲ್ಲ ಜಾತಿಯ ಗಣತಿ ಸರಿಯಾಗಿ ನಡೆದಿಲ್ಲ ಎಂಬ ಕೂಗು ಕೇಳಿಸಿತ್ತು ಎಂದು ಗಮನ ಸೆಳೆದರು.
ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಿತ್ತು. ಸಮಾಜದಲ್ಲಿ ಗೊಂದಲ, ಜಾತಿಗಳ ನಡುವೆ ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆಲ್ಲ ಅಂತ್ಯ ಕಾಣಿಸಲು ಮತ್ತು ತೆರೆ ಎಳೆಯಲು ಕೇಂದ್ರ ಸರಕಾರ ಸ್ಪಷ್ಟ, ವೈಜ್ಞಾನಿಕ ಹಾಗೂ ಕಾನೂನುಬದ್ಧ, ಅಧಿಕಾರದ ಭಾಗವಾಗಿ ಜಾತಿ ಗಣತಿಯನ್ನು ಮಾಡಲಿದೆ. ವ್ಯವಸ್ಥಿತವಾಗಿ ಇದು ನಡೆಯಲಿದೆ.
ಸಮಾಜದ ಎಲ್ಲರ ಸ್ಥಿತಿಗತಿ ಗೊತ್ತಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೇಂದ್ರದ ನಿರ್ಧಾರ ಇಡೀ ದೇಶದ ಜನರಿಗೆ ಖುಷಿ ತಂದಿದೆ: ಎನ್.ರವಿಕುಮಾರ್

ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತಿದೆ. ದೇಶದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಿರ್ಧಾರ ಮಾಡಲು ಮತ್ತು ಭವಿಷ್ಯದ ಅನೇಕ ನಿರ್ಧಾರಕ್ಕೆ ಇದು ಸಹಾಯಕ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಾತಿ ಗಣತಿ, ಜನಗಣತಿ ಕುರಿತ ಕೇಂದ್ರದ ನಿರ್ಧಾರವು ಇಡೀ ದೇಶದ ಜನರಿಗೆ ಖುಷಿ ತಂದಿದೆ. ಇದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. ವಿವಿಧ ಜಾತಿಗಳ ಪರಿಸ್ಥಿತಿ ತಿಳಿದುಕೊಳ್ಳಲು ಇದು ಸಹಾಯಕ. ಈ ನಿರ್ಧಾರವನ್ನು ಬಿಜೆಪಿ ಕರ್ನಾಟಕ ಘಟಕ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ಇವತ್ತು ಕೇಂದ್ರ ಸರಕಾರವು ಜಾತಿಗಣತಿ ಮಾಡಲು ನಿರ್ಧರಿಸಿದ್ದು ಟಿ.ವಿ.ಗಳಲ್ಲಿ ಬರುತ್ತಿದೆ. ಇದು ಕೇಂದ್ರದ ಸಂವಿಧಾನದತ್ತ ಅಧಿಕಾರ. ಹಿಂದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ಪಕ್ಷಗಳು ಜಾತಿ ಸಮೀಕ್ಷೆ ನಡೆಸಿದ್ದವು ಎಂದು ಆಕ್ಷೇಪಿಸಿದರು.ಕರ್ನಾಟಕದಲ್ಲಿ ಜಾತಿ ಗಣತಿ ನಡೆದಿರಲಿಲ್ಲ; ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ ಮಾಡಿದ್ದಾಗಿ ತಿಳಿಸಿದ್ದರು. ಅದೂ ಕೂಡ ಸರಿಯಾಗಿ ಮಾಡಿರಲಿಲ್ಲ. ಅನೇಕ ಸಮುದಾಯಗಳು ವಿರೋಧ ಮಾಡಿದ್ದವು ಎಂದು ಗಮನ ಸೆಳೆದರು. ಇನ್ನೂ ಹಲವು ಸಮುದಾಯಗಳು ತಮ್ಮ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದರೂ ಅದನ್ನು ಸರಿಯಾಗಿ ತೋರಿಸಿಲ್ಲ; ಕಡಿಮೆ ಸಂಖ್ಯೆ ತೋರಿಸಿದ್ದಾಗಿ ಹೇಳಿವೆ ಎಂದು ವಿವರಿಸಿದರು.