ಬೆಂಗಳೂರು, (www.thenewzmirror.com);
ಏಪ್ರಿಲ್ 2ನೇ ತಾರೀಖಿನಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವೆ ಐಪಿಎಲ್ ಲೀಗ್ ಪಂದ್ಯ ನಡೆದಿತ್ತು. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಅಂದ್ರೆ ಕೇಳ್ಬೇಕಾ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿದ್ರು.
ಹೀಗೆ ಜನಸಂದಣಿ ನಡುವೆ ಬಂದಿದ್ದ ಇಬ್ಬರು ಮೊಬೈಲ್ ಕಳ್ಳರು ಮೊಬೈಲ್ ಕದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳನ್ನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ಮೊಬೈಲ್ ಕಳ್ಳರು ಕ್ರಿಕೆಟ್ ವೀಕ್ಷಣೆಗೆ ಬಂದಿದ್ದ ಇಬ್ಬರ ಮೊಬೈಲ್ ಅನ್ನ ಎಗರಿಸಿದ್ರು. ಈ ವಿಚಾರ ಭದ್ರತಾ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ತಡರಾತ್ರಿ ಕದ್ದ ಮೊಬೈಲ್ ಫೋನ್ಗಳೊಂದಿಗೆ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಆ ಸಮಯದಲ್ಲಿ ಹುಡುಗರ ಬಳಿ ಏಳು ಮೊಬೈಲ್ ಫೋನ್ಗಳಿದ್ದು, ಅವುಗಳನ್ನು ಅವರು ಅಭಿಮಾನಿಗಳಿಂದ ಕದ್ದಿರೋದು ತಿಳಿದು ಬಂತು. ಬಂಧಿತ ಖತರ್ನಾಕ್ ಕಳ್ಳರನ್ನ ಜಾರ್ಖಂಡ್ ಮೂಲದ ಆಯುಷ್ (12), ಸಂಜಿತ್ (23) ಎಂದು ಗುರ್ತಿಸಲಾಗಿದ್ದು, ಭದ್ರತಾ ಸಿಬ್ಬಂದಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.