ಬೆಂಗಳೂರು(www.thenewzmirror.com): ರಾಜಕೀಯದಿಂದ ದೂರ ಇರುವವರೂ ಈ ಸರಕಾರದ ವಿರುದ್ಧ ಮಾತನಾಡಬಾರದೆಂದು ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಇದ್ದ ವಾತಾವರಣವನ್ನು ತರುವ ಪ್ರಯತ್ನ ಈ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಮಾತನಾಡಿದ ಅವರು, ಮೋಹನ್ದಾಸ್ ಪೈ ಅವರಂಥ ಹಿರಿಯರ ಬಗ್ಗೆ ಬೇರೆ ಬೇರೆ ಸುಳ್ಳು ಕಾರಣ ಹೇಳಿ ಎಫ್ಐಆರ್ ಹಾಕುವ ಧೈರ್ಯ ಮಾಡುತ್ತಿದ್ದಾರೆ. ರಾಜ್ಯದ ಹಿರಿಯ ಮುಖಂಡರು, ರಾಜಕೀಯದಿಂದ ದೂರ ಇರುವವರೂ ಈ ಸರಕಾರದ ವಿರುದ್ಧ ಮಾತನಾಡಬಾರದೆಂದು ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಇದ್ದ ವಾತಾವರಣವನ್ನು ತರುವ ಪ್ರಯತ್ನ ಈ ಸರಕಾರ ಮಾಡುತ್ತಿದೆ; ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಅದಕ್ಕೆ ಶಿವಕುಮಾರ್ ಅವರು ಹೆಜ್ಜೆಹೆಜ್ಜೆಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೆಲ್ಲ ಸಂಗತಿಗಳನ್ನು ರಾಜ್ಯದ ಉದ್ದಗಲಕ್ಕೆ ತೆರಳಿ ನಮ್ಮ ಕಾರ್ಯಕರ್ತರಿಗೆ ತಿಳಿಸುವೆ. ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕೆಂಬ ಬಗ್ಗೆ ಯೋಚನೆಯನ್ನು ಮಾಡುತ್ತಿದ್ದೇವೆ ಎಂದರು.
ರಾಜು ಕಾಗೆ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು ಮನೆ ಕೊಡುವ ಸಂದರ್ಭದಲ್ಲಿ ಲಂಚ ಕೊಡದೆ, ದುಡ್ಡು ಕೊಡದೆ ಏನೂ ಕೆಲಸ ಆಗುವುದಿಲ್ಲ ಎಂಬ ಗುರುತರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಬಿ.ಆರ್.ಪಾಟೀಲರನ್ನು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ ರಾಜ್ಯ ಬಿಜೆಪಿ ಕಚೇರಿಗೆ ಬರುವುದಾಗಿ ಹೇಳಿದ್ದೆ. ವಾರಕ್ಕೆ ಒಂದು ದಿನ ಒಂದೊಂದು ಜಿಲ್ಲೆಗೆ ಹೋಗುತ್ತೇನೆ. ಮುಖಂಡರು ತಿಳಿಸಿದಂತೆ ಪ್ರವಾಸ ಮಾಡುತ್ತೇನೆ. ಸರಕಾರದ ವೈಫಲ್ಯತೆ, ಭ್ರಷ್ಟಾಚಾರದ ಹಗರಣಗಳ ಕುರಿತು ಕಾರ್ಯಕರ್ತರ ಸಭೆಯಲ್ಲಿ ತಿಳಿಸಿ ಜಾಗೃತಗೊಳಿಸಲಿದ್ದೇನೆ. ಪ್ರಾರಂಭದಲ್ಲಿ ಸಾರ್ವಜನಿಕ ಸಭೆ ಮಾಡುವುದಿಲ್ಲ ಎಂದರು.