ಚಿಕ್ಕಮಗಳೂರು(www.thenewzmirror.com): ದಯೆಯೇ ಧರ್ಮದ ಮೂಲ ಎಂದು ಸಾರಿದವರು ವೀರಶೈವ- ಲಿಂಗಾಯತರು , ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಚಿಕ್ಕಮಗಳೂರಿನ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ವಿಶ್ವ ಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಮಾಜದ ಮಗಳಾಗಿ ಕಾರ್ಯಕ್ರಮಕ್ಕೆ ಬಂದಿರುವೆ. ಬೇರೆ ಸಮಾಜದವರ ಜೊತೆಗೆ ಹಂಚಿಕೊಂಡು ತಿನ್ನುವ ಸಮಾಜ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದರು.
ಕರ್ನಾಟಕದ ಮೂಲೆ ಮೂಲೆಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಇದ್ದಾರೆ. ಸಮಾಜದ ಸೇವೆಯನ್ನು ಮಗಳಾಗಿ ಮಾಡುವೆ. ಇಡೀ ಕರ್ನಾಟಕ ರಾಜ್ಯಾದ್ಯಂತ ಸಮಾಜಕ್ಕೆ ಸೇವೆ ಮಾಡುವೆ ಎಂದು ಸಚಿವರು ಹೇಳಿದರು.
ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೆ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು, ಇವರ ತತ್ವ ಆದರ್ಶಗಳು ನಮಗೆ ಮಾದರಿಯಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ವೈಯುಕ್ತಿಕವಾಗಿ 10 ಲಕ್ಷ ದೇಣಿಗೆ:
ಲಿಂಗಾಯತ ಭವನದ ನಿರ್ಮಾಣಕ್ಕಾಗಿ ಹತ್ತು ಲಕ್ಷ ರೂ ವೈಯಕ್ತಿಕ ದೇಣಿಗೆ ನೀಡುವುದಾಗಿ ಸಚಿವರು ಘೋಷಿಸಿದರು.
ಜೊತೆಗೆ ಸರ್ಕಾರದಿಂದ ಹೆಚ್ಚಿನ ದೇಣಿಗೆ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು.
ಚಿಕ್ಕಮಗಳೂರು ನಿಸರ್ಗದತ್ತವಾದ ಜಿಲ್ಲೆ:
ಚಿಕ್ಕಮಗಳೂರು ರಾಜ್ಯದ ಅತ್ಯಂತ ಸುಂದರ ಜಿಲ್ಲೆ. ಪ್ರಕೃತಿ ಸೌಂದರ್ಯದ ಜೊತೆಗೆ ಹೃದಯ ಶ್ರೀಮಂತರನ್ನು ಹೊಂದಿರುವ ನಾಡು ಇದು. ನನಗೆ ಅದ್ದೂರಿ ಸ್ವಾಗತ ನೀಡಿ ಜನರು ಬರಮಾಡಿಕೊಂಡರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಬಿ.ಎ.ಶಿವಶಂಕರ, ಶಾಸಕರಾದ ಎಚ್.ಡಿ.ತಮ್ಮಯ್ಯ, ಎಚ್.ಎಂ.ಲೋಕೇಶ್, ಎ.ಬಿ.ಸುದರ್ಶನ್, ಬಿ.ಎಂ.ರವಿ ಲಶಂಕರ್, ಎಂ.ಎಸ್.ನಿರಂಜನ್, ಸಿ.ಬಿ.ನಂದೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.