ಬೆಂಗಳೂರು(www.thenewzmirror.com):ಕೇಂದ್ರ ಸರಕಾರವು ಜಾತಿ ಗಣತಿ- ಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿ ಗಣತಿ ಮಾಡುತ್ತಿರುವಾಗ ರಾಜ್ಯ ಸರಕಾರವೂ ಮತ್ತೊಂದು ಜಾತಿ ಗಣತಿ ಮಾಡುವ ಅಗತ್ಯ ಇದೆಯೇ? ಎಂದು ವಿ. ಸುನೀಲ್ ಕುಮಾರ್ ಪ್ರಶ್ನಿಸಿದ್ದು,ಹಿಂದಿನ ಜಾತಿಗಣತಿಗೆ 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ?ಜಾತಿ ಗಣತಿ ವಿಷಯದಲ್ಲಿ 10 ವರ್ಷಗಳ ತಪ್ಪು ದತ್ತಾಂಶವನ್ನು ಪದೇಪದೇ ರಾಜ್ಯದ ಜನರಿಗೆ ಹೇಳುತ್ತ ಬಂದಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ವೈಫಲ್ಯ ಕಂಡವರು ನೀವು. 165 ಕೋಟಿ ದುರುಪಯೋಗವೂ ಆಗಿದೆ. ಮುಡಾ ಹಗರಣದ ವೈಫಲ್ಯ, ವಾಲ್ಮೀಕಿ ಹಗರಣ, ಕಾಲ್ತುಳಿತದ ಪ್ರಕರಣ, ಅಬಕಾರಿ ಹಗರಣ, ಈಗ ಈ ಜಾತಿ ಗಣತಿ- ಇವೆಲ್ಲವೂ ಸರಣಿ ವೈಫಲ್ಯಗಳು. ಆದ್ದರಿಂದ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಿಂದಿನ ಜಾತಿ ಸಮೀಕ್ಷೆಯನ್ನು ಕೈಬಿಟ್ಟಿದ್ದೇವೆ ಎನ್ನುತ್ತಿದ್ದು, 165 ಕೋಟಿ ಖರ್ಚು ಮಾಡಿದ್ದಕ್ಕೆ ಯಾರು ಹೊಣೆಗಾರರು? ಹಿಂದಿನ ಸರ್ವೇಗೆ ಮಾಡಿದ ಖರ್ಚಿಗೆ ಯಾರನ್ನು ಹೊಣೆಯಾಗಿ ಮಾಡುತ್ತೀರಿ? ಹೊಸ ಸಮೀಕ್ಷೆಗೆ ತಗಲುವ ವೆಚ್ಚಕ್ಕೆ ಯಾರನ್ನು ಜವಾಬ್ದಾರರನ್ನಾಗಿ ಮಾಡುವಿರಿ?.) ರಾಜ್ಯದ ತೆರಿಗೆ ಹಣವನ್ನು ನಿಮಗೆ ಬೇಕಾದಂತೆ ನೀರಿನಲ್ಲಿ ಹೋಮ ಮಾಡಲು ತಯಾರಿ ಮಾಡಿಕೊಂಡಿದ್ದೀರಾ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.
ದತ್ತಾಂಶ ಸರಿ ಇಲ್ಲದೆ ಇರುವಾಗ:
ಹಿಂದಿನ ವರದಿ ಬಗ್ಗೆ ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ದತ್ತಾಂಶದ ಬಗ್ಗೆ ಹೈಕಮಾಂಡ್ ಅನುಮಾನ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ. ದತ್ತಾಂಶವೇ ಸರಿ ಇಲ್ಲದೇ ಇರುವಾಗ ಅದನ್ನು ಆಧರಿಸಿ ಅವರು ಪ್ರವರ್ಗಗಳನ್ನು ಹೇಗೆ ನಿರ್ಮಾಣ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಮೀಸಲಾತಿ ವರ್ಗೀಕರಣಕ್ಕೆ ಅದನ್ನು ಹೇಗೆ ಬಳಸಿದ್ದಾರೆ ಎಂದು ವಿ. ಸುನೀಲ್ ಕುಮಾರ್ ಅವರು ಕೇಳಿದರು.
ಒಂದು ಮನೆಯ ಪಂಚಾಂಗವೇ ಸರಿ ಇಲ್ಲದ ಮೇಲೆ ಮನೆ ಹೇಗೆ ಕಟ್ಟಲು ಸಾಧ್ಯ? ಇವುಗಳಿಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕಿದೆ. ಬಿಜೆಪಿ ನಾಯಕರು ಇದರ ಕುರಿತು ಪ್ರಶ್ನಿಸಿದಾಗ ಅತ್ಯಂತ ಉಡಾಫೆಯಿಂದ, ‘ನಾನು ಜಾತಿಗಣತಿಗೆ ಬದ್ಧನಿದ್ದೇನೆ. ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಪದೇಪದೇ ಹೇಳುತ್ತಿದ್ದರು. ಈಗ ಉಲ್ಟಾ ಹೊಡೆದುದು ನೋಡಿದರೆ ಹಲವು ರೀತಿಯ ಅನುಮಾನಗಳು ವ್ಯಕ್ತ ಆಗುತ್ತಿವೆ ಎಂದು ತಿಳಿಸಿದರು.
ಹೊಸ ಸಮೀಕ್ಷೆಗೆ ಹಣ ಬಿಡುಗಡೆ ಮಾಡುವ ಮೊದಲು ಈ 165 ಕೋಟಿ ಖರ್ಚು ಮಾಡಿದ್ದಕ್ಕೆ ಯಾರು ಹೊಣೆ ಎಂಬುದನ್ನು ಮೊದಲು ಹೇಳಿ ಎಂದು ಆಗ್ರಹಿಸಿದರು. ತೆರಿಗೆ ಹಣವನ್ನು ವ್ಯರ್ಥ ಮಾಡಿದ್ದಕ್ಕೆ ಬಿಜೆಪಿ ವಿರೋಧವಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಜನಪರ ಕಾಳಜಿ ಇದ್ದಲ್ಲಿ, ತಾನು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಎಲ್ಲವನ್ನೂ ಮಾಡಬಹುದಿತ್ತು ಎಂದು ವಿಶ್ಲೇಷಿಸಿದರು. 10 ವರ್ಷ ಇದನ್ನು ದೊಡ್ಡ ಪ್ರಮಾಣದಲ್ಲಿ ಎಳೆಯುತ್ತ ಬಂದರು. 2024ರಲ್ಲಿ ಜಯಪ್ರಕಾಶ್ ಹೆಗ್ಡೆ, ವರದಿ ನೀಡಿದ್ದನ್ನು 14 ತಿಂಗಳ ಬಳಿಕ ಸಂಪುಟ ಸಭೆಗೆ ತಂದರು ಎಂದು ಆಕ್ಷೇಪಿಸಿದರು. ನಿಮ್ಮ ಬದ್ಧತೆ ಅಲ್ಲೇ ಗೊತ್ತಾಗಿತ್ತು. ಪದೇಪದೇ ಜನರ ದಿಕ್ಕು ತಪ್ಪಿಸುವ ಕೆಲಸ ನಡೆದಿತ್ತು ಎಂದು ಟೀಕಿಸಿದರು.
165 ಕೋಟಿ ಖರ್ಚು ಮಾಡಿದ್ದಕ್ಕೆ ಹಿಂದಿನ ಆಯೋಗದ ಅಧ್ಯಕ್ಷರು ಹೊಣೆಯೇ? ಆಯೋಗ ರಚಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟವನ್ನು ಜವಾಬ್ದಾರಿ ಎನ್ನುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮತ್ತೊಂದು ಜಾತಿ ಗಣತಿ ಬೇಕೇ?:
ಕೇಂದ್ರ ಸರಕಾರವು ಜಾತಿ ಗಣತಿ- ಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿ ಗಣತಿ ಮಾಡುತ್ತಿರುವಾಗ ರಾಜ್ಯ ಸರಕಾರವೂ ಮತ್ತೊಂದು ಜಾತಿ ಗಣತಿ ಮಾಡುವ ಅಗತ್ಯ ಇದೆಯೇ ಎಂದು ವಿ. ಸುನೀಲ್ ಕುಮಾರ್ ಅವರು ಕೇಳಿದರು.
ರಾಜ್ಯ ಸರಕಾರವು ಕೇಂದ್ರದ ಜಾತಿ ಗಣತಿ- ಜನಗಣತಿಗೆ ಸಹಕಾರ ಕೊಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಬಿಸಿಯವರನ್ನು ಬಳಸುವುದನ್ನು ಮತ್ತು ಜನರ ದಿಕ್ಕು ತಪ್ಪಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು..
ಜಾತಿ ಗಣತಿ ಮಾಡಲು 90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು; ಎಸ್ಸಿ (ಪರಿಶಿಷ್ಟ ಜಾತಿ) ಒಳಮೀಸಲಾತಿಗೆ ಸಂಬಂಧಿಸಿ ಒಂದು ತಿಂಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದರು. ಆ ಸಮೀಕ್ಷೆಯನ್ನೇ 3 ಬಾರಿ ಮುಂದೂಡಿದ್ದೀರಿ. ಈಗ 7 ಕೋಟಿ ಜನರ ಸಮೀಕ್ಷೆಗೆ 3 ತಿಂಗಳ ಗಡುವು ನೀಡಿದ್ದು, ಯಾರನ್ನು ಯಾಮಾರಿಸಲು ಹೊರಟಿದ್ದೀರಿ ಎಂದು ಕೇಳಿದರು. ಇದು ಸಾಧ್ಯವೇ? ಅಧಿಕಾರ ಬಿಟ್ಟು ಕೊಡಲು ನೀವು 90 ದಿನಗಳ ಗಡುವು ಹಾಕಿದಂತಿದೆ ಎಂದು ನನಗೆ ಅನಿಸುತ್ತದೆ ಎಂದರು.
ಹೈಕಮಾಂಡ್ ಕಾಲ್ತುಳಿತಕ್ಕೆ ಸಿಲುಕಿದ ಮುಖ್ಯಮಂತ್ರಿ:
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈ ವಿಷಯದಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಸಿದ್ದರಾಮಯ್ಯನವರು ಹೇಳುತ್ತ, ಇದೀಗ ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಕಳೆದ 10 ವರ್ಷಗಳಿಂದ ತಾವೇ ಮಾಡಿದ ಕಾಂತರಾಜು ಆಯೋಗದ ವರದಿ, ತಮಗೆ ಅಪಾಯ ಆಗಿದೆ ಎಂದು ಅನಿಸಿದಾಗಲೆಲ್ಲ ಜಾತಿ ಗಣತಿ, ಜಾತಿ ಗಣತಿ ಎಂದು ನೂರು ಬಾರಿ ಕರ್ನಾಟಕದ ಜನರಿಗೆ ಹೇಳುತ್ತಿದ್ದರು. ಇವತ್ತು ದತ್ತಾಂಶದಲ್ಲಿ ವ್ಯತ್ಯಾಸವಾಗಿದೆ ಎಂದು ಹೈಕಮಾಂಡ್ ಹೇಳಿದ ತಕ್ಷಣ ಈ ವರದಿಯನ್ನು ಕಸದ ಬುಟ್ಟಿಗೆ ಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿರುವುದು ಕರ್ನಾಟಕದ ಜನತೆಗೆ ಮಾಡಿದ ದ್ರೋಹ ಎಂದು ಆಕ್ಷೇಪಿಸಿದರು.