ಬೆಂಗಳೂರು(www.thenewzmirror.com):ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ನೀಡಲಾಗಿದೆ. ವಿಶ್ವಸಂಸ್ಥೆಯ 1373 ನಡಾವಳಿ ಪ್ರಕಾರ ಕಳೆದ ಜೂನ್ ತಿಂಗಳಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ತೋಳಕ್ಕೆ ಕುರಿಗಳ ಹಿಂಡನ್ನು ಕಾಯುವ ಕೆಲಸ ನೀಡಲಾಗಿದೆ ಇಷ್ಟಾದರೂ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಜೂನ್ ತಿಂಗಳಲ್ಲಿ ʼತಾಲಿಬಾನ್ ಸ್ಯಾಂಕ್ಷನ್ ಸಮಿತಿʼ ಯ ಅಧ್ಯಕ್ಷ ಸ್ಥಾನವನ್ನು ಪಾಕಿಸ್ಥಾನ ಅಲಂಕರಿಸಿದೆ. ದೇಶ ವಿದೇಶಗಳನ್ನು ಸುತ್ತುವ ವಿದೇಶಾಂಗ ಸಚಿವರೇ, ಮೋದಿಯವರೇ ನಿಮ್ಮ ವಿದೇಶಿ ಪ್ರವಾಸದ ಫಲ ಇದೇ ಏನು? ಪಹಲ್ಗಾಮ್ ದಾಳಿ ನಡೆದ ಹೊತ್ತಿನಲ್ಲೇ 20 ಬಿಲಿಯನ್ ಡಾಲರ್ ಹಣವನ್ನು ವಿಶ್ವ ಹಣಕಾಸು ಸಂಸ್ಥೆಯಿಂದ (ಐಎಂಎಫ್) ನೀಡಲಾಗುತ್ತದೆ. ನಮ್ಮ ಬೆಂಬಲಕ್ಕೆ ಸಣ್ಣ ರಾಷ್ಟ್ರಗಳೂ ಬರಲಿಲ್ಲ. ಶ್ರೀಲಂಕಾ, ಬಾಂಗ್ಲಾ, ನೇಪಾಳ, ಮಾಲ್ಡೀವ್ ಯಾರೂ ಸಹ ನಮ್ಮ ಪರವಾಗಿ ನಿಮ್ಮಲಿಲ್ಲ. ಶ್ರೀಲಂಕಾಕ್ಕೆ ನಾವು ಆರ್ಥಿಕ ಸಹಾಯ ಮಾಡಿದರೂ ನಮ್ಮ ಪರವಾಗಿ ಹೇಳಿಕೆ ನೀಡಲಿಲ್ಲ. ಮೋದಿ ಅವರು 8 ಸಾವಿರ ಕೋಟಿಯ ಜೆಟ್ ಅಲ್ಲಿ ಇಡೀ ಪ್ರಪಂಚ ಸುತ್ತುತ್ತಾರೆ. ಕಳೆದ 10 ವರ್ಷಗಳಲ್ಲಿ 10 ಸಾವಿರ ಕೋಟಿಯನ್ನು ವಿದೇಶಿ ಪ್ರವಾಸಕ್ಕೆ ಖರ್ಚು ಮಾಡಿದ್ದು ಯಾವ ಉದ್ಧಾರಕ್ಕೆ ಎಂದು ಪ್ರಶ್ನಿಸಿದ್ದಾರೆ.
ಚೀನಾದಲ್ಲಿ ಜೂನ್ ತಿಂಗಳಲ್ಲಿ ನಡೆದ ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್ ಸಮಿಟ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಪೆಹಲ್ಗಾಮ್ ದಾಳಿಯನ್ನು ಉಲ್ಲೇಖಿಸಲು ಸಭೆಯ ನಡಾವಳಿಯಲ್ಲಿ ತಿರಸ್ಕರಿಸಲಾಯಿತು. ಭಾರತ ಈ ಸಮುಯದಲ್ಲಿಯೂ ಮೌನವಾಗಿತ್ತು. ರಾಜನಾಥ್ ಸಿಂಗ್ ಏಕೆ ಮೌನವಾಗಿದ್ದರು. ನಮ್ಮ ಪಕ್ಷ ಪ್ರಧಾನಿ ಮೋದಿ, ರಕ್ಷಣಾ ಸಚಿವರಿಂದ ಸೂಕ್ತ ಉತ್ತರವನ್ನು ಬಯಸುತ್ತದೆ ಎಂದರು.
ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ವಿಶ್ವಮಟ್ಟದಲ್ಲಿ ಇದು ಭಾರಿ ಹಿನ್ನಡೆ ಹಾಗೂ ನಮ್ಮ ವಿದೇಶಾಂಗ ನೀತಿಗಳ ವೈಫಲ್ಯ. ದೇಶದ ಹಿತಕ್ಕೆ ಮಾರಕವಾದ ಸಂಗತಿ ಇದಾಗಿದೆ. ವಿದೇಶಾಂಗ ಸಚಿವರು ತಮ್ಮ ಪ್ರತಿಭಟನೆ ದಾಲಿಸದೆ ಎಲ್ಲಿ ಅಡಗಿದ್ದಾರೆ? ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಪಾಕಿಸ್ತಾನ ಪ್ರಣೀತ ಪಹಲ್ಗಾಮ್ ದಾಳಿಯ ಘಟನೆ ಹಸಿಯಾಗಿ ಇರುವಾಗಲೇ ಇಂತಹ ಸ್ಥಾನಮಾನ ಪಾಕಿಸ್ತಾನಕ್ಕೆ ದೊರೆತಿರುವುದು ಅವಮಾನಕರ. ವಿದೇಶಾಂಗ ಸಚಿವರಾದ ಜೈ ಶಂಕರ್ ಅವರು ಏನು ಮಾಡುತ್ತಿದ್ದಾರೆ? ಎಂದರು.
ಈಗ ವಿಶ್ವ ರಕ್ಷಣಾ ವ್ಯವಸ್ಥೆಯ ದಲ್ಲಾಳಿಯಾಗಿ ಕೆಲಸ ಮಾಡುತ್ತಿದೆ. ರಾಕ್ಷಸನೊಬ್ಬನಿಗೆ ಖುರ್ಚಿ ನೀಡಿದಂತಾಗಿದೆ. ಪಾಕಿಸ್ತಾನ ಭಾರತಕ್ಕೆ ತನ್ನ ಭಯೋತ್ಪಾದರನ್ನು ಕಳುಹಿಸುವ ಮೂಲಕ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದೆ. ಪಾಕಿಸ್ತಾನದ ಭಯೋತ್ಪಾದಕ ಉತ್ತೇಜನ ಕೃತ್ಯಗಳು ಅನೇಕ ಬಾರಿ ಬಯಲಾಗಿದೆ. ಮೃತ ಒಸಮಾ ಬಿನ್ ಲಾಡೆನ್ ಸೇರಿದಂತೆ ಭಾರತ ವಿರೋಧಿ ಕೆಲಸ ಮಾಡುತ್ತಿರುವ ಅಬ್ದುಲ್ ರೌಫ್, ಮಸೂದ್ ಅಜರ್, ಹಾಫಿ ಸಯ್ಯೀದ್, ದಾವೂದ್ ಇಬ್ರಾಹಿಂ ಇವರಿಗೆಲ್ಲಾ ಆವಾಸಸ್ಥಾನವಾಗಿದೆ. ಜೈಶ್ ಎ ಮೊಹಮದ್, ಜಮಾತ್ ಉಲ್ ದವಾ, ತೆಹ್ರಿಕ್ ಅಜಾದಿ ಜಮ್ಮು ಅಂಡ್ ಕಶ್ಮೀರ್, ಹಿಜ್ಬುಲ್ ಮುಜಾಹಿದ್ದೀನ್, ಹರ್ಕತ್ ಉಲ್ ಮುಜಾಹಿದ್ದೀನ್, ಲಷ್ಕರ್ ಎ ತೋಯ್ಬಾ, ಕಾಶ್ಮೀರ್ ಜಿಹಾದ್ ಫೋರ್ಸ್, ಜಮ್ಮು ಅಂಡ್ ಕಾಶ್ಮೀರ್ ಸ್ಟೂಡೆಂಟ್ ಲಿಬರೇಷನ್ ಪ್ರಂಟ್, ತೆಹರಿಕ್ ಎ ಹುರಿಯತ್ ಇದೆಲ್ಲವು ಸಹ ಪಾಕಿಸ್ತಾನದಿಂದಲೇ ತಮ್ಮ ಕಾರ್ಯಾಚರಣೆ ನಡೆಸುತ್ತಿವೆ. ಇಂತಹ ದೇಶ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿ ಹೊರುವುದು ಚೋದ್ಯವಲ್ಲವೇ? ಎಂದರು.
ಪಾಕಿಸ್ತಾನ ತನಗೆ ತಿಳಿದಿರುವ ಕಡೆ ಸುಮಾರು 21 ಕಡೆ ಭಯೋತ್ಪಾದಕ ಕ್ಯಾಂಪ್ ಗಳನ್ನು ಸಲಹುತ್ತಿದೆ. ಮಕ್ಸರೇ ಅಕ್ಸಾ, ಚೇಲಾ ಬಂದಿ, ಅಬ್ದುಲ್ಲಾ ಬಿನ್ ಮಸೂದ್, ಗಡಿ, ಬಾಲಾಕೋಟ್, ಗುಲ್ ಪುರ್ ಹೀಗೆ ಅನೇಕ ಕಡೆ ಇವೆ. ಇಷ್ಟೆಲ್ಲಾ ಮಾಹಿತಿ ಇದ್ದರೂ ಬಿಜೆಪಿ ಸರ್ಕಾರ, ಮೋದಿ ಅವರು ಏನು ಮಾಡುತ್ತಿದ್ದಾರೆ. ಯುಎನ್ ಭದ್ರತಾ ಸಮಿತಿ ಎದುರು ಈ ವಿಚಾರಗಳನ್ನು ಮಂಡಿಸದೇ ಭಾರತ ಸರ್ಕಾರ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.