ಶಿವಮೊಗ್ಗ(www.thenewzmirror.com):ರಾಜಕೀಯವಾಗಿ ಉತ್ತರ ದಕ್ಷಿಣ ದ್ರುವದಂತಾಗಿರುವ ಒಂದು ಕಾಲದ ಆಪ್ತ ಸ್ನೇಹಿತರಾದ ರಾಜ್ಯ ರಾಜಕೀಯದ ಹಿರಿಯ ರಾಜಕಾರಣಿಗಳಾಗಿರುವ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಹೆಗಲ ಮೇಲೆ ಕೈಹಾಕಿದ ಹಳೆಯ ಗೆಳೆಯರು ಗಮನ ಸೆಳೆದರು.
ಇಂದು ಶಿಕಾರಿಪುರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಮೊಮ್ಮಗ,ಸಂಸದ ಬಿ.ವೈ.ರಾಘವೇಂದ್ರ ಅವರ ಮಗ ಸುಭಾಷ್ ಮತ್ತು ಶ್ರವಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.
ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಇಂದು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಂತರ ಯಡಿಯೂರಪ್ಪ ಈಶ್ವರಪ್ಪ ನಡುವೆ ಕಂದಕ ಸೃಷ್ಟಿಯಾಯಿತು. ಚುನಾವಣೆ ನಂತರವೂ ಸಾಕಷ್ಟು ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೂ ಉಭಯ ನಾಯಕರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಿರಲಿಲ್ಲ ಅಷ್ಟರ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದರು.
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಾಗಿ ದುಡಿದ ಅಪರೂಪದ ಜೋಡಿ ಯಡಿಯೂರಪ್ಪ ಮತ್ತು ಈಶ್ವರಪ್ಪರದ್ದು, ಇವರ ನಡುವಿನ ರಾಜಕೀಯ ವಿರಸ ಸಾಕಷ್ಟು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ, ಇದರ ನಡುವೆ ಯಡಿಯೂರಪ್ಪ ಕುಟುಂಬದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಗವಹಿಸಿರುವುದು ಕಾರ್ತಕರ್ತರಲ್ಲಿ ಖುಷಿ ತರಿಸಿದೆ.
ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಬಂದ ಈಶ್ವರಪ್ಪ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯಡಿಯೂರಪ್ಪ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸುತ್ತಾ ಹೆಗಲ ಮೇಲೆ ಕೈಹಾಕಿ ಹಳೆಯ ಸ್ನೇಹವನ್ನು ಪ್ರತಿಬಿಂಬಿಸಿದರು. ಕೆಲ ಕ್ಷಣಕ್ಕಾದರೂ ಉಭಯ ನಾಯಕರು ನಗುನಗುತ್ತಾ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಚರ್ಚೆಗಳು ನಡೆಯುತ್ತಿರುವಾಗಲೇ ಈ ಘಟನೆ ನಡೆದಿರುವುದು ಈಶ್ವರಪ್ಪ ಬಿಜೆಪಿಗೆ ಮರಳುವ ಚರ್ಚೆಗೆ ಪುಷ್ಟಿ ನೀಡಿದಂತಾಗಿದೆ.