ಕೇಸಿನಿಂದ ಬಾಯಿ ಮುಚ್ಚಿಸಲಾಗಲ್ಲ,ಮಾನನಷ್ಟ ಮೊಕದ್ದಮೆ ನಾಟಕ ಬಿಟ್ಟು ಬಿಡಿ: ಛಲವಾದಿ ನಾರಾಯಣಸ್ವಾಮಿ

RELATED POSTS

ಬೆಂಗಳೂರು(www.thenewzmirror.com): ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಕೇಸ್ ಹಾಕಿದ್ದಾರೆ,ಇದಕ್ಕೆಲ್ಲಾ ನಾವು ಹೆದರಲ್ಲ, ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಕೇಸಿನ ವಿರುದ್ಧ ಹೋರಾಟ ಮಾಡುತ್ತೇವೆ. ಇದರಿಂದ ನೀವು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ,ಕಾಂಗ್ರೆಸ್ಸಿನವರು ಮಾನನಷ್ಟ ಮೊಕದ್ದಮೆಯ ನಾಟಕವನ್ನು ಬಿಟ್ಟು ಬಿಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸರಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ಸರಕಾರದ 5 ಗ್ಯಾರಂಟಿಗಳೂ ಅರ್ಧಕ್ಕರ್ಧ ಜನರಿಗೆ ಮುಟ್ಟಿಲ್ಲ; ಆದರೂ, 5 ಗ್ಯಾರಂಟಿಗಳ ಹೆಸರಿನಲ್ಲಿ 5 ವರ್ಷ ದೂಡಿ ಹೋಗಬೇಕೆಂಬ ಯೋಚನೆಯಲ್ಲಿ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಯಾವುದೇ ಸಾಧನೆ ಮಾಡದೆ ಎರಡು ವರ್ಷ ಕಳೆದಿದ್ದಾರೆ. ಸಾಧನೆ ಇಲ್ಲದ ವೇದನಾ ಸಮಾವೇಶ ಮಾಡಿದ್ದಾಗಿ ಮೊದಲೇ ಹೇಳಿದ್ದೇವೆ. ಬೆಂಗಳೂರಿನ ಮಳೆಯಿಂದ ಆದ ಹಾನಿ ಪರಿಸ್ಥಿತಿ ನೋಡಲಿಲ್ಲ; ಮಳೆಯಿಂದ 5 ಜನರು ಮರಣ ಹೊಂದಿದರೂ ಗಮನಿಸಲಿಲ್ಲ; ನಿಮಗೆ ಜನರ ಪ್ರಾಣ, ಮಾನ ಮುಖ್ಯವಲ್ಲ; ಕೇವಲ ಅಧಿಕಾರ ಮಾತ್ರ ಮುಖ್ಯ ಎಂಬುದನ್ನು ತೋರಿಸಿಕೊಡುತ್ತಾ ಹೋಗುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ಇವತ್ತು ನಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೀರಿ. ನಮ್ಮ ಸರಕಾರ ಇದ್ದಾಗ ನೀವು ಸುಳ್ಳು ಆರೋಪ ಮಾಡಿದ್ದೀರಿ. ನಿಮ್ಮ ಸರಕಾರವು ಬೆಳಿಗ್ಗೆ ಎದ್ದು ಬಳಸುವ ಹಾಲಿನಿಂದ ಆಲ್ಕೋಹಾಲಿನ ವರೆಗೆ ಎಲ್ಲ ದರಗಳನ್ನೂ ಹೆಚ್ಚಿಸಿದೆ. ಅದನ್ನೇ ನಾವು ಹೇಳಿದ್ದೇವೆ. ಇದರಲ್ಲಿ ಸುಳ್ಳಿದೆಯೇ ಎಂದು ಪ್ರಶ್ನಿಸಿದರು.

ಹೆಚ್ಚಿಸಿದ ಹಾಲಿನ ದರವನ್ನು ರೈತರಿಗೆ ಕೊಟ್ಟಿದ್ದೀರಾ?ಪೆಟ್ರೋಲ್ ದರ, ದವಸಧಾನ್ಯಗಳ ದರ ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಏರಿಸಿದ್ದೀರಿ. ಕಸಕ್ಕೆ ತೆರಿಗೆ ವಿಧಿಸಿದ್ದೀರಿ. ನೀರಿಗೆ ಟ್ಯಾಕ್ಸ್ ಹಾಕಿದ್ದೀರಿ ಎಂದು ಟೀಕಿಸಿದರು. ಇದಲ್ಲದೆ ನಮ್ಮ ಮೇಲೆ ಶೇ 40 ಭ್ರಷ್ಟಾಚಾರದ ಆರೋಪ ಮಾಡಿದ್ದೀರಿ. ಈಗ ಅವರೇ ಕಾಂಗ್ರೆಸ್ ಶೇ 60 ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಅವರ ಮುಂದೆ ನೀವು ಬೆತ್ತಲಾಗಿದ್ದೀರಿ ಎಂದು ಆರೋಪಿಸಿದರು.

ಮೂರು ಕಾಸಿನ ಅಭಿವೃದ್ಧಿ ಕೆಲಸ ಮಾಡಿಲ್ಲ; ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಮಾತೆತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ ಎಂದು ಆಕ್ಷೇಪಿಸಿದರು. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಕೇಸಿನ ವಿರುದ್ಧ ಹೋರಾಟ ಮಾಡುತ್ತೇವೆ. ಇದರಿಂದ ನೀವು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿಗಳು ಹೋಗಿಲ್ಲವೇಕೆ?

ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿಗಳು ಹೋಗಿಲ್ಲವೇಕೆ? ಎಂದು ಪ್ರಶ್ನಿಸಿದರು. ಇಲ್ಲಿ ಕುಳಿತು ಅನುದಾನ ಕೊಡುತ್ತಿಲ್ಲ; ಹಣ ನೀಡುತ್ತಿಲ್ಲವೆಂದು ಹೇಳುತ್ತಿದ್ದ ನಿಮಗೆ ನೀತಿ ಆಯೋಗದ ಸಭೆಗೆ ಹೋಗಲು ಭಯವೇ ಎಂದು ಕೇಳಿದರು.

ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಭೆಗೆ ಹೋಗಿದ್ದರು. ಅವರವರ ಬೇಡಿಕೆಗಳನ್ನೂ ಚರ್ಚೆ ಮಾಡಿದ್ದಾರೆ. ಹಣ ಬಿಡುಗಡೆ ಆಗಿಲ್ಲವೆನ್ನುವ ನೀವು ಸಭೆಗೆ ಹೋಗಬೇಕಿತ್ತು. ಕೇಂದ್ರ ಸರಕಾರವು ಆಯಾ ಸಂದರ್ಭಕ್ಕೆ ಯಾರಿಗೆ ಏನೇನು ಕೊಡಬೇಕೋ ಅದನ್ನು ಕೊಡುತ್ತದೆ. ಆದರೆ, ನೀವು ರಾಜಕೀಯ ಮಾಡಲು ಸುಳ್ಳು ಹೇಳುತ್ತೀರಿ ಎಂದು ದೂರಿದರು. ಇಂಥ ಸುಳ್ಳುಗಳಿಗೆ ಅವರೂ ಉತ್ತರ ನೀಡುತ್ತಾರೆ. ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಸರಕಾರದ ನೀತಿ- ನಡತೆ ಕಾರಣ ಎಂದು ಟೀಕಿಸಿದರು.

ನೀವು ಇಂಥ ಸಭೆಗಳಿಗೆ ಹಾಜರಾಗಿ ರಾಜ್ಯಕ್ಕೆ ಹೆಚ್ಚಿನ ಹಣದ ಬೇಡಿಕೆ ಇಡದಿದ್ದರೆ ಅವರಿಗೆ ಅರ್ಥವಾಗುವುದು ಹೇಗೆ? ಕೇಂದ್ರದ ವಿರುದ್ಧ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ; ಹಕ್ಕು ಇಲ್ಲ ಎಂದು ತಿಳಿಸಿದರು.

ಜನೌಷಧಿ ಕೇಂದ್ರಗಳನ್ನು ಮುಚ್ಚಿದ್ದೇಕೆ?

ಸರಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳೇ ಬೇಡ ಎಂದು ತೆಗೆದಿದ್ದೀರಿ. ಔಷಧಿ ಕೊಂಡುಕೊಳ್ಳುವಾಗ ಕಮಿಷನ್ ಸಿಗುತ್ತಿಲ್ಲ ಎಂಬುದೇ ಇದಕ್ಕೆ ಕಾರಣವೇ ಎಂದು ಕೇಳಿದರು. ಅಥವಾ ಖಾಸಗಿಯವರಿಂದ ಕಮಿಷನ್ ಪಡೆಯಬೇಕೆಂಬ ಉದ್ದೇಶವೇ ಎಂದರು. ಬಡವರಿಗೆ ಅನುಕೂಲ ಆಗಲೆಂದು ಮೋದಿಜೀ ಅವರು ಜನೌಷಧಿ ಕೇಂದ್ರಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ತೆರೆದಿದ್ದರು. ಅಂಥ ಅನುದಾನದಿಂದ ಸಿಗುವ ಔಷಧಿ ಬಡವರಿಗೆ ಸೇರಬಾರದೆಂದು ಜನೌಷಧಿ ಕೇಂದ್ರಗಳನ್ನು ಕಿತ್ತು ಹೊರಗಡೆ ಹಾಕುತ್ತೀರಲ್ಲವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಾಗಿದ್ದ ಮೇಲೆ ನೀವು ಕೇಂದ್ರದ ಅನುದಾನಕ್ಕೆ ಕಾಯುವುದೇಕೆ? ನೀವೇ ಸರಕಾರ ನಡೆಸಿ ಎಂದು ಒತ್ತಾಯಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist