ಬೆಂಗಳೂರು(www.thenewzmirror.com):ನಿಮ್ಮ ಕನಸು ಗಗನದೆತ್ತರಕ್ಕೆ ಇರಬೇಕು. ಉದ್ಯೋಗ ಪಡೆಯುವುದಷ್ಟೇ ನಿಮ್ಮ ಕನಸಾಗಬಾರದು. ಬೇರೆಯವರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ನೀವು ಬೆಳೆಯುವುದು ನಿಮ್ಮ ಕನಸಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ಬೆಂಗಳೂರಿನ ಆಡುಗೋಡಿಯ ಅಯ್ಯಪ್ಪ ಗಾರ್ಡನ್ ನ ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆಯಲ್ಲಿ ಗುರುವಾರ ನಡೆದ “ಶಾಲಾ ಪ್ರಾರಂಭೋತ್ಸವ 2025-26” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,“ಇಷ್ಟು ದಿನ ಮಕ್ಕಳು ರಜೆಯಲ್ಲಿ ನಲಿದಾಡಿದ್ದೀರಿ. ಈಗ ನಲಿಯುವುದರ ಜತೆಗೆ ಕಲಿಯಿರಿ ಎಂದು ಶಾಲೆಗಳಿಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ವರ್ಷ ಬಾಗಲಕೋಟೆ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಈ ವರ್ಷ ಬೆಳಗಾವಿಯ ಬೈಲಹೊಂಗಲದ ದೇವಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ್ ಅವರು ಅಗ್ರಸ್ಥಾನ ಪಡೆದಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಿಗೆ ಸರ್ಕಾರ ಅಭಿನಂದಿಸುತ್ತಿದೆ” ಎಂದರು.
“ಬೀಜ ಬಿತ್ತಿದರೆ ಉತ್ತಮ ಬೆಳೆ ಬೆಳೆಯುತ್ತದೆ. ಜ್ಞಾನವನ್ನು ಬಿತ್ತಿದರೆ ಉತ್ತಮ ಪ್ರಜೆಗಳಾಗುತ್ತಾರೆ. ನೀವೆಲ್ಲರೂ ನಮ್ಮ ಆಸ್ತಿ ಎಂದು ನಮ್ಮ ಸರ್ಕಾರ ಹೆಚ್ಚಿನ ಸಹಕಾರ ನೀಡಲು ಬದ್ಧವಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಸಿಕ್ಕಾಗ ಬಹಳ ಸಿಹಿಯಾಗಿರುತ್ತದೆ. ಬೇಸಿಗೆ ರಜೆ ಮುಗಿಸಿರುವ ನೀವು ಈಗ ಶಾಲೆಗೆ ಬಂದು ಕಲಿತು ಉತ್ತಮ ಪ್ರಜೆಯಾಗಬೇಕು” ಎಂದು ಹೇಳಿದರು.
“ಚೆನ್ನಾಗಿ ಓದಿದರೆ ಎಲ್ಲಾ ರಂಗದಲ್ಲೂ ರಾಜನಾಗಿ ರೂಪುಗೊಳ್ಳಬಹುದು. ಇಲ್ಲವಾದರೆ ಸೇವಕನಾಗಿ ಇರಬೇಕಾಗುತ್ತದೆ. ಇವೆರಡರ ಆಯ್ಕೆ ನಿಮ್ಮದು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ” “ನೀವು ಜೀವನದಲ್ಲಿ ಯಶಸ್ಸು ಸಾಧಿಸಲು ಕನಸು ಕಾಣಬೇಕು, ಕನಸು ಈಡೇರಿಸಿಕೊಳ್ಳಲು ಬಯಸಬೇಕು. ಕನಸಿಗಾಗಿ ಬದ್ಧತೆ ಹೊಂದಿರಬೇಕು, ಅದಕ್ಕಾಗಿ ಶಿಸ್ತು ಹೊಂದಿರಬೇಕು. ನಿಮ್ಮ ಕನಸು ಗಗನದೆತ್ತರಕ್ಕೆ ಇರಬೇಕು. ಉದ್ಯೋಗ ಪಡೆಯುವುದಷ್ಟೇ ನಿಮ್ಮ ಕನಸಾಗಬಾರದು. ಬೇರೆಯವರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ನೀವು ಬೆಳೆಯುವುದು ನಿಮ್ಮ ಕನಸಾಗಬೇಕು. ಈ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರ್ ಗಳು, ವೈದ್ಯರು, ಮಾನವ ಸಂಪನ್ಮೂಲ ತಯಾರಾಗುತ್ತಿರುವುದು ಕರ್ನಾಟಕ ರಾಜ್ಯದಲ್ಲಿ. ವಿಶ್ವದ ಎಲ್ಲಾ ದೇಶಗಳಿಂದ ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಐಟಿ ಬಿಟಿ, ಸಂಶೋಧನೆ ಸೇರಿದಂತೆ ಪ್ರಮುಖ ಕ್ಷೇತ್ರಗಳು ಬೆಂಗಳೂರು ಯಶಸ್ಸು ಸಾಧಿಸಿದೆ. ಕೃಷ್ಣರಾಜ ಒಡೆಯರ್ ಅವರ ಕಾಲದಿಂದ ವಿವಿಧ ಸರ್ಕಾರಗಳು ಇಲ್ಲಿ ಶೈಕ್ಷಣಿಕವಾಗಿ ಅಡಿಪಾಯ ಹಾಕಿದ ಪರಿಣಾಮ ನಮ್ಮ ರಾಜ್ಯ ಹಾಗೂ ಬೆಂಗಳೂರು ಈ ಸಾಧನೆ ಮಾಡಿದೆ” ಎಂದು ತಿಳಿಸಿದರು.
“ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಮಕ್ಕಳನ್ನು ದೇಶದ ನಿಧಿ ಎಂದರು. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ಈ ವಿದ್ಯೆಯನ್ನು ನೀವು ಸರಿಯಾದ ರೀತಿ ಧಕ್ಕಿಸಿಕೊಳ್ಳಬೇಕು. ಆಮೂಲಕ ನೀವು ದೇಶದ ಆಸ್ತಿಯಾಗಬೇಕು. ನಾನು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಪ್ರವೇಶಿಸಿದೆ. ಹೀಗಾಗಿ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಲಿಲ್ಲ. ನಾನು ವಿಧಾನಸೌಧಕ್ಕೆ ಹೋದಾಗ ಅಲ್ಲಿದ್ದ ಹಿರಿಯ ನಾಯಕರು ಭಾಷಣ ಕೇಳಿದ ನಂತರ ನನಗೆ ವಿದ್ಯೆ ಕೊರತೆ ಇದೆ ಎಂದು ಅರಿವಾಯಿತು. ಹೀಗಾಗಿ ನಾನು 47ನೇ ವಯಸ್ಸಿಗೆ ಮೈಸೂರು ಮುಕ್ತ ವಿವಿಯಲ್ಲಿ ಪದವಿ ಪಡೆದೆ. ನಾನು ಸಚಿವ ಸಂಪುಟ ಸದಸ್ಯನಾದಾಗ ಸಿಕ್ಕ ಸಂತೋಷಕ್ಕಿಂತ ಪದವಿ ಪಡೆದಾಗ ಹೆಚ್ಚು ಸಂತೋಷವಾಯಿತು” ಎಂದರು.
“ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಲು 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡು ಶಿಕ್ಷಕರ ಕೊರತೆ ಇರುವ ಕಡೆ ಅವರಿಂದ ಶಿಕ್ಷಕರನ್ನು ಪೂರೈಸಲಾಗುವುದು. ಅನೇಕ ಸಂಸ್ಥೆಗಳು ಈಗಾಗಲೇ ಪಂಚಾಯ್ತಿ ಮಟ್ಟದಲ್ಲಿ ಈ ಶಾಲೆ ನಿರ್ಮಾಣಕ್ಕೆ ಮುಂದಾಗಿವೆ. ರಾಮಲಿಂಗಾ ರೆಡ್ಡಿ ಅವರು ಬಿಟಿಎಂ ಕ್ಷೇತ್ರದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಆಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ” ಎಂದು ತಿಳಿಸಿದರು.