ಬೆಂಗಳೂರು, (www.thenewzmirror.com) ;
ಬಿ ಎಂ ಆರ್ ಸಿ ಎಲ್ ಸಂಸ್ಥೆಯು ಇತ್ತೀಚಿನ ತನ್ನ ಲೋಕೋ ಪೈಲೆಟ್ ಗಳ ನೇಮಕಾತಿಯಲ್ಲಿನ 3 ವರ್ಷಗಳ ಅನುಭವದ ಷರತ್ತುಗಳು ಸಂಪೂರ್ಣ ಕನ್ನಡಿಗರನ್ನು ಹೊರಗಿಡುವ ಹುನ್ನಾರವೇ ಹೊರತು ಬೇರೇನೂ ಅಲ್ಲ. ಅನ್ಯ ರಾಜ್ಯಗಳ ಮೆಟ್ರೋಗಳಲ್ಲಿ ಕೆಲಸ ಮಾಡುತ್ತಿರುವ ಅನ್ಯ ಭಾಷಿಕರನ್ನು ಚಾಲಕ ಹುದ್ದೆಗಳಿಗೆ ತುಂಬುವುದೇ ಇವರ ಷಡ್ಯಂತ್ರ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತುರ್ತುಪತ್ರಿಕ ಹೇಳಿಕೆಯನ್ನು ಹೊರಡಿಸಿದ್ದಾರೆ.
ಈಗಾಗಲೇ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳೆಲ್ಲವೂ ಅನ್ಯ ಭಾಷಿಕರ ಪಾಲಾಗಿದ್ದು ಅವರುಗಳ ಇಚ್ಛಾನುಸಾರವೇ ನೇಮಕಾತಿಗಳು ಸಹ ನಡೆಯುತ್ತಿರುವುದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ಕನ್ನಡದ ನೆಲ, ಜಲ, ತೆರಿಗೆ ಎಲ್ಲವನ್ನು ಬಳಸಿಕೊಳ್ಳುತ್ತಿರುವ ಸಂಸ್ಥೆಯು ಕನ್ನಡಿಗರ ನೇಮಕಾತಿಯ ವಿಚಾರದಲ್ಲಿ ಅನವಶ್ಯಕ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಕೂಡಲೇ ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮೆಟ್ರೋ ಉನ್ನತ ಅಧಿಕಾರಿಗಳು ಅನವಶ್ಯಕವಾಗಿ ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸಗಳನ್ನು ಕೈಗೊಂಡು ಮೋಜಿನ ಜೀವನ ನಡೆಸುತ್ತಿದ್ದಾರೆ. ಸಂಸ್ಥೆಯಲ್ಲಿ ಅನವಶ್ಯಕ ದುಬಾರಿ ಖರ್ಚುಗಳನ್ನು ಮಾಡುವ ಮೂಲಕ ನಷ್ಟವನ್ನು ತೋರಿಸುತ್ತಿದ್ದಾರೆ. ಸಂಸ್ಥೆಯು ಕನ್ನಡ ನೌಕರರ ಯೂನಿಯನ್ ಜೊತೆ ಯಾವುದೇ ಚರ್ಚೆಗಳನ್ನು ಮಾಡದೆ ಕನ್ನಡ ವಿರೋಧಿ ಧೋರಣೆಯನ್ನು ಪದೇ ಪದೇ ಮುಂದುವರಿಸುತ್ತಲೇ ಬರುತ್ತಿದ್ದಾರೆ. ಇವುಗಳೆಲ್ಲವೂ ತಕ್ಷಣವೇ ನಿಲ್ಲಬೇಕು.
ಈಗಾಗಲೇ ಸಮಾಜದ ಎಲ್ಲ ವರ್ಗಗಳ ತೀವ್ರ ವಿರೋಧಗಳ ನಡುವೆಯೂ ಸಹ ಮೆಟ್ರೋ ಟಿಕೆಟ್ ಬೆಲೆಯನ್ನು ಏರಿಸಿದ್ದಾರೆ. ಮೆಟ್ರೋ ಅಧಿಕಾರಿಗಳ ಬಂಡತನ ಎಲ್ಲೆ ಮೀರಿದೆ. ಕನ್ನಡಿಗರ ಅಸ್ಮಿತೆಯ ವಿಷಯದಲ್ಲಿ ಸರ್ಕಾರವು ಮಧ್ಯಪ್ರವೇಶ ಮಾಡಲೇಬೇಕಾಗಿದೆ. ಇಂತಹ ಕನ್ನಡ ವಿರೋಧಿ ನೇಮಕಾತಿ ಅಧಿಸೂಚನೆಯನ್ನು ಕೂಡಲೇ ಹಿಂಪಡೆದುಕೊಳ್ಳಬೇಕು. ಇದಕ್ಕಾಗಿ 15 ದಿವಸಗಳ
ಗಡುವನ್ನು ಸಹ ನೀಡುತ್ತಿದ್ದೇವೆ. ಇಲ್ಲದಿದ್ದಲ್ಲಿ ಮೆಟ್ರೋ ಸಂಸ್ಥೆಯ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.