ಬೆಂಗಳೂರು(www.thenewzmirror.com): ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ವೇಗ ಪಡೆಯಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ನೂತನ ಜಿಲ್ಲಾಧ್ಯಕ್ಷರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯ ಪದಾಧಿಕಾರಿಗಳ ಮತ್ತು ಪ್ರಮುಖ ಮುಖಂಡರ ಉಪಸ್ಥಿತಿಯಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ನಿಯುಕ್ತಿಯ ನಂತರ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅವರಿಗೆ ಮುಂಬರುವ ಸವಾಲುಗಳು, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಾಧ್ಯಕ್ಷರು ನಿರ್ದೇಶನಗಳನ್ನು ಕೊಟ್ಟಿದ್ದಾರೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಬೂತ್ ಮಟ್ಟದಿಂದ ಜಿಲ್ಲಾ ತಂಡದ ಪಾತ್ರ ಯಾವ ರೀತಿ ಇರಬೇಕೆಂಬ ಕುರಿತು ಸಲಹೆ- ಸೂಚನೆಗಳನ್ನು ಕೊಡಲಾಗಿದೆ. ಕಾಂಗ್ರೆಸ್ ಸರಕಾರದ ಎರಡು ವರ್ಷಗಳ ದುರಾಡಳಿತವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಕಳೆದ ಒಂದೂಕಾಲು ವರ್ಷದಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಿಂದ ಆರಂಭಿಸಿ ಮುಡಾ ಹಗರಣ ಸಂಬಂಧ ಪಾದಯಾತ್ರೆ ನಡೆಸಿದ್ದಾರೆ. ಜನಾಕ್ರೋಶ ಯಾತ್ರೆ ಮೂಲಕ ಸರಕಾರದ ವೈಫಲ್ಯವನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ವೇಗ ಪಡೆಯಬೇಕೆಂದು ರಾಜ್ಯಾಧ್ಯಕ್ಷರು ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಆರೆಸ್ಸೆಸ್ನ ಹಿರಿಯರ ಪಾಲ್ಗೊಳ್ಳುವಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಪರಿವಾರದ ಎಲ್ಲ ಹಿರಿಯರ ಮಾರ್ಗದರ್ಶನದೊಂದಿಗೆ ಪಕ್ಷದ ಕಾರ್ಯಕರ್ತರು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಅನೇಕ ಹಿರಿಯರು ಮಾರ್ಗದರ್ಶನ ನೀಡುತ್ತಾರೆ. ಇವತ್ತು ಹಿರಿಯರು ಮಾರ್ಗದರ್ಶನ ನೀಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಅವರು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಎನ್ಡಿಎ ಮೈತ್ರಿ ಪಕ್ಷದ ಒಬ್ಬ ಪ್ರಭಾವಿ ನಾಯಕರು. ಜೆಡಿಎಸ್ ಕೂಡ ಎನ್ಡಿಎ ಮೈತ್ರಿಯಲ್ಲಿ ಪ್ರಮುಖ ಅಂಗ ಪಕ್ಷವಾಗಿದೆ. ಮೈತ್ರಿ ಮತ್ತಿತರ ವಿಷಯಗಳನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿಗಳು, ನಮ್ಮ ಗೃಹ ಸಚಿವರು ಮಾತನಾಡುತ್ತಾರೆ. ಇಲ್ಲಿ ನಾವು ಬಿಜೆಪಿ ಸಂಘಟನೆ, ಬೂತ್ ಮಟ್ಟದಲ್ಲಿ ಬಲಗೊಳಿಸುವ ಕುರಿತು ಚರ್ಚೆ ಮಾಡಿದ್ದೇವೆ. ದೊಡ್ಡ ವಿಷಯಗಳ ಕುರಿತು ದೊಡ್ಡವರು ಮಾತನಾಡುತ್ತಾರೆ.ಬೆಂಗಳೂರಿನ ಬಿಜೆಪಿ- ಜೆಡಿಎಸ್ ಕಚೇರಿಯಲ್ಲಿ ಚರ್ಚೆ ಆಗುವುದಿಲ್ಲ; ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಅವರ ರಾಜ್ಯ ಅಧ್ಯಕ್ಷರು ಮತ್ತು ನಮ್ಮ ರಾಜ್ಯ ಅಧ್ಯಕ್ಷರು ಜೊತೆಯಾಗಿ ಒಳ್ಳೆಯ ರೀತಿಯಲ್ಲಿ ಚರ್ಚೆ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಗೆ 3 ವರ್ಷ ಬಾಕಿ ಇದೆ. ಕ್ಷೇತ್ರಗಳನ್ನು ರಾಷ್ಟ್ರೀಯ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದ ಅವರು, ‘ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಎಂಎಲ್ಎ ಇಲ್ಲಾಂದ್ರೆ ಎಂ.ಪಿ. ಆಗ್ತೀನಿ. ಎಂ.ಪಿ. ಇಲ್ಲಾಂದ್ರೆ ಎಂ.ಎಲ್.ಸಿ. ಆಗುತ್ತೆ. ಎಂ.ಎಲ್.ಸಿ. ಇಲ್ಲಾಂದ್ರೆ ರಾಜ್ಯಸಭಾ ಆಗುತ್ತೆ. ಯಾವುದೂ ಬರ್ಕಂಡ್ ಬಂದಿರಲ್ಲ; ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ. ಬೇರೆಯವರಿಗೂ ಟೆನ್ಶನ್ ಕೊಡದೆ ಆರಾಮಾಗಿರಿ’ ಎಂದರು.