ಚೆನ್ನೈ(thenewzmirror.com): ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ಚೆನ್ನೈನಲ್ಲಿ ಶನಿವಾರ ನಡೆದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸಿದರು.
ಈ ಸಭೆಯ ನೇತೃತ್ವ ವಹಿಸಿರುವ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ ಮನ್, ಒಡಿಶಾ ಮಾಜಿ ಸಚಿವ ಸಂಜಯ್ ಕುಮಾರ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,
ಸ್ನೇಹಿತರೇ, ಇದು ಉತ್ತರ ಹಾಗೂ ದಕ್ಷಿಣ ನಡುವಣ ಹೋರಾಟವಲ್ಲ. ಭಾರತದಲ್ಲಿ ಸಮಾನ ರಾಜ್ಯಗಳ ಒಕ್ಕೂಟ ವ್ಯವಸ್ಥೆಗಾಗಿ ನಡೆಯುತ್ತಿರುವ ಹೋರಾಟ. ಹೀಗಾಗಿ ನಾವೆಲ್ಲರೂ ಸೇರಿ ನಮ್ಮ ಬೇಡಿಕೆಗಳಿಗೆ ಆಗ್ರಹಿಸೋಣ ಎಂದು ಕರೆ ನೀಡಿದರು.
ಬೇಡಿಕೆಗಳು:
1. ಕ್ಷೇತ್ರ ಮರುವಿಂಗಡಣೆ ನ್ಯಾಯ:
ಮಾನವ ಅಭಿವೃದ್ಧಿ ಸೂಚ್ಯಂಕಗಳು, ತೆರಿಗೆ ಪಾಲು ಹಾಗೂ ಜನಸಂಖ್ಯೆ ನಿಯಂತ್ರಣ, ಪ್ರತಿನಿಧಿತ್ವ, ಗುಣಮಟ್ಟದ ಆಡಳಿತಗಳನ್ನು ಒಳಗೊಂಡ ಸೂತ್ರದ ಮೇಲೆ ಕ್ಷೇತ್ರ ಮರುವಿಂಗಡಣೆಯಾಗಬೇಕೇ ಹೊರತು, ಕೇವಲ ಜನಸಂಖ್ಯೆ ಆಧಾರದ ಮೇಲೆ ಅಲ್ಲ.
2. ದ್ವಿಸದಸ್ಯ ಸಮತೋಲನ:
ರಾಜ್ಯಸಭೆಯನ್ನು ಬಲವರ್ದಿಸಿ, ಲೋಕಸಭೆಗೆ ಸಮತೋಲನವಾಗುವಂತೆ ಮಾಡಬೇಕು. ರಾಜ್ಯಸಭೆಗೂ ಹೆಚ್ಚಿನ ಶಾಸನದ ಅಧಿಕಾರ ನೀಡಿ ಆರ್ಥಿಕ ನಿರ್ಧಾರ ಕೈಗೊಳ್ಳುವಾಗ ಇವರ ಪಾತ್ರವೂ ಇರುವಂತೆ ಮಾಡಬೇಕು. ಆಮೂಲಕ ಪ್ರಗತಿಯ ರಾಜ್ಯಗಳನ್ನು ಮೂಲೆಗುಂಪು ಮಾಡುವುದನ್ನು ತಪ್ಪಿಸಬೇಕು.
3. ವಿತ್ತೀಯ ನೀತಿ:
ನ್ಯಾಯಯುತ ತೆರಿಗೆ ಪಾಲು ಹಂಚಿಕೆ, ಸಂಪನ್ಮೂಲ ಹಂಚಿಕೆಗೆ ನೂತನ ಆರ್ಥಿಕ ಒಕ್ಕೂಟ ಒಪ್ಪಂದ ಅಗತ್ಯವಿದೆ. 16ನೇ ಹಣಕಾಸು ಆಯೋಗವು ಸಮಾನತೆ, ದಕ್ಷತೆ ಹಾಗೂ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಪನ್ಮೂಲ ಹಂಚಿಕೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸೂಚ್ಯಂಕಗಳನ್ನು ಪರಿಚಯಿಸಬೇಕು. ಕೇಂದ್ರದ ಅನುದಾನ ಹಂಚಿಕೆಯು ಆರ್ಥಿಕ ಪ್ರಗತಿಯ ಮೇಲೆ, ವಿತ್ತೀಯ ಶಿಸ್ತಿ ಹಾಗೂ ಗುಣಮಟ್ಟದ ಆಡಳಿತದ ಮೇಲೆ ಪರಿಣಾಮಕಾರಿಯಾಗಿರಬೇಕು.
4. ಸಾಂಸ್ಕೃತಿಕ ಸಾರ್ವಭೌಮತ್ವ:
ರಾಷ್ಟ್ರೀಯ ಭಾಷಾ ಹಕ್ಕು ಆಯೋಗವನ್ನು ಸ್ಥಾಪಿಸಿ, ಎಲ್ಲಾ ಶೆಡ್ಯುಲ್ ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕು. ಬ್ಯಾಂಕ್, ರೈಲ್ವೇ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಕೇಂದ್ರೀಯ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸುವ ನಿರ್ಣಯ ಜಾರಿಗೊಳಿಸಬೇಕು.
5. ಸಹಯೋಗದ ಮೂಲಕ ಏಕತೆ:
ಜೆಎಸಿ (Joint Action Committee) ಬಲವರ್ಧಿಸಿ, ಕಾನೂನು, ಶಾಸನಗಳ ಮಧ್ಯೆ ಸಹಯೋಗ ರೂಪಿಸಬೇಕು.
ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸೋಣ:
“ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಎಲ್ಲಾ ಪ್ರಗತಿಯ ರಾಜ್ಯಗಳು ಮೌನವಾಗಿರುವುದಿಲ್ಲ. ಈ ವಿಚಾರವಾಗಿ ಸದನದಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಜನರ ಮಧ್ಯೆ ರಸ್ತೆಗಳಲ್ಲಿ ಹೋರಾಟ ನಡೆಸುತ್ತೇವೆ. ಆಮೂಲಕ ನಮ್ಮ ಹಕ್ಕು, ನಮ್ಮ ಸಂಪನ್ಮೂಲ ಹಾಗೂ ನಮ್ಮ ಗುರುತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಪ್ರತಿಪಾದಿಸಿದರು.
ಪೆರಿಯಾರ್ ಅವರ ಹೋರಾಟ, ಅಣ್ಣಾದುರೈ ಅವರ ನಾಯಕತ್ವ, ಬಸವಣ್ಣನವರ ಕಿಚ್ಚನ್ನು ನಾವು ರೂಢಿಸಿಕೊಳ್ಳಬೇಕು. ನೆನಪಿರಲಿ, ಕರ್ನಾಟಕ ಹಾಗೂ ತಮಿಳುನಾಡು ಒಟ್ಟಾಗಿ ನಿಂತರೆ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಹಾಗೂ ಪಂಜಾಬ್ ತಮ್ಮ ಧ್ವನಿ ಎತ್ತಿದರೆ ಹಿಮಾಲಯವೇ ನಡುಗುತ್ತದೆ.ನಮ್ಮ ಧ್ವನಿ ದುರ್ಬಲಗೊಳಿಸಲು, ನಮ್ಮ ಸಂಪನ್ಮೂಲ ಲೂಟಿಗೊಳಿಸಲು, ನಮ್ಮ ಸಂಸ್ಕೃತಿ ನಾಸಪಡಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಈ ಜೆಎಸಿ ಸಭೆ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪುನರ್ ಸ್ಥಾಪಿಸೋಣ. ಈ ದೇಶದಲ್ಲಿ ವೈವಿದ್ಯತೆಯನ್ನು ಸಂಭ್ರಮಿಸಬೇಕು, ಸಮಾನತೆಯನ್ನು ಎತ್ತಿಹಿಡಿಯಬೇಕು.ತನ್ನ ಬಾಳಿಗೆ ತಾನೇ ದೀಪ, ತನ್ನ ಬಾಳಿಗೆ ತಾನೆ ಕಾವಲು ಎಂಬ ಕುವೆಂಪು ಅವರ ಸಾಲಿನಂತೆ ನಮ್ಮ ಹಕ್ಕು, ಭವಿಷ್ಯವನ್ನು ನಾವೇ ಕಾಪಾಡಿಕೊಳ್ಳೋಣ” ಎಂದು ತಿಳಿಸಿದರು.