ಬೆಂಗಳೂರು(www.thenewzmirror.com):ಕಬ್ಬಿಣದಿಂದ ಕತ್ತರಿ ಹಾಗೂ ಸೂಜಿ ಎರಡೂ ತಯಾರಾಗುತ್ತದೆ. ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ. ನಿತ್ಯ ಸುಮಾರು 50 ಸಾವಿರ ನಮ್ಮ ಜನ ಹೊಸೂರಿಗೆ ಹೋಗುತ್ತಾರೆ. ಅಲ್ಲಿರುವವರು ಇಲ್ಲಿ ವಾಸ ಮಾಡುತ್ತಿದ್ದಾರೆ. ಏನಾದರೂ ಹೆಚ್ಚುಕಮ್ಮಿಯಾದರೆ ಇವರ ಜವಾಬ್ದಾರಿ ಹೊರುವವರು ಯಾರು? ಎಂದು ಕಮಲ್ ಹಾಸನ್ ವಿಚಾರದಲ್ಲಿ ಸರ್ಕಾರದ ನಡೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಸುಮ್ಮನಹಳ್ಳಿ ಮಾಗಡಿ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜಮೀನು ಹಾಗೂ ಇದೇ 27 ರಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣವನ್ನು ವೀಕ್ಷಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು,ಡಿಎಂಕೆ ಮಿತ್ರಪಕ್ಷ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಮಲ್ ಹಾಸನ್ ವಿಚಾರದಲ್ಲಿ ಮೃದುಧೋರಣೆ ತಾಳಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ ಆದರೆ, “ಜಾತಿ, ಭಾಷೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತದೆಯೇ? ಬಿಜೆಪಿಯವರು ಸಮಾಜವನ್ನು ಒಡೆದು ಆಳುವವರು. ನಾವು ಸಮಾಜವನ್ನು ಒಂದುಗೂಡಿಸಿ ಆಡಳಿತ ಮಾಡುವವರು. ಕಬ್ಬಿಣದಿಂದ ಕತ್ತರಿ ಹಾಗೂ ಸೂಜಿ ಎರಡೂ ತಯಾರಾಗುತ್ತದೆ. ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ. ನಿತ್ಯ ಸುಮಾರು 50 ಸಾವಿರ ನಮ್ಮ ಜನ ಹೊಸೂರಿಗೆ ಹೋಗುತ್ತಾರೆ. ಅಲ್ಲಿರುವವರು ಇಲ್ಲಿ ವಾಸ ಮಾಡುತ್ತಿದ್ದಾರೆ. ಏನಾದರೂ ಹೆಚ್ಚುಕಮ್ಮಿಯಾದರೆ ಇವರ ಜವಾಬ್ದಾರಿ ಹೊರುವವರು ಯಾರು? ಎಂದರು.
ಕಮಲ್ ಅವರು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತಾರೆ. ಆದರೆ ಅದನ್ನು ಇಟ್ಟುಕೊಂಡು ಎಲ್ಲೆಲ್ಲಿಗೋ ವಿಚಾರಗಳನ್ನು ತೆಗೆದುಕೊಂಡು ಹೋಗಬಾರದು. ನ್ಯಾಯಾಲಯದಲ್ಲಿ ಈ ವಿವಾದಕ್ಕೆ ಒಂದು ಪರಿಹಾರ ಸಿಕ್ಕಿದೆ. ನ್ಯಾಯಾಲಕ್ಕೆ ಗೌರವಿಸಿ ಕ್ಷಮೆ ಕೇಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಕಾನೂನು ಕೈಗೆ ತೆಗೆದುಕೊಳ್ಳುವುದು, ಚಿತ್ರ ಮಂದಿರಗಳ ಮುಂದೆ ಗಲಾಟೆ ಮಾಡುವುದು ಬೇಡ ಎಂದು ಕನ್ನಡ ಸಂಘಟನೆಗಳಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
ಕಮಲ್ ಹಾಸನ್ ನ್ಯಾಯಾಲಯದ ಆದೇಶ ಪಾಲಿಸುವ ವಿಶ್ವಾಸವಿದೆ:
ನಟ ಕಮಲ್ ಹಾಸನ್ ಅವರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂದಿದ್ದು, ಕ್ಷಮೆ ಕೋರುವಂತೆ ಸೂಚಿಸಿರುವ ಬಗ್ಗೆ ಕೇಳಿದಾಗ, “ನ್ಯಾಯಾಲಯ ಎಲ್ಲರನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಹಿತ, ಭಾಷೆ ಕಾಪಾಡಲು ತನ್ನ ಅಭಿಪ್ರಾಯ ತಿಳಿಸಿರುತ್ತದೆ. ಈ ವಿವಾದದ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಜತೆ ಚರ್ಚೆ ಮಾಡಿದೆ. ಆಗ ನನಗೆ ತಿಳಿದಿದ್ದು, ನಾವು ದ್ರಾವಿಡ ಭಾಗಕ್ಕೆ ಸೇರಿದವರು. ಇಲ್ಲಿ ಮೇಲು ಕೀಳು ಎಂಬ ಬೇಧವಿಲ್ಲ. ನಮ್ಮ ಭಾಷೆಗಳು ಒಂದರ ಜೊತೆ ಮತ್ತೊಂದು ತನ್ನದೇ ಆದ ರೀತಿಯಲ್ಲಿ ಬೆಸೆದುಕೊಂಡಿವೆ. ಕಮಲ್ ಹಾಸನ್ ಅವರ ಹೇಳಿಕೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇದಕ್ಕೆ ನನ್ನ ಸಹಮತವಿದೆ. ಕಮಲ್ ಹಾಸನ್ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಆಲಮಟ್ಟಿ ಅಣೆಕಟ್ಟು ಸಂಬಂಧ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆಯುವುದರ ಬಗ್ಗೆ ಕೇಳಿದಾಗ, “ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಪತ್ರಕ್ಕೆ ನಮ್ಮ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇನೆ. ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ಕಳುಹಿಸಿಕೊಡುತ್ತೇನೆ. ನಂತರ ಈ ವಿಚಾರವಾಗಿ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ದಿನಾಂಕ ಕೇಳುತ್ತೇವೆ. ಈ ವಿಚಾರವಾಗಿ ನಾವೆಲ್ಲಾ ಸೇರಿ ಒತ್ತಾಯ ಮಾಡಲೇಬೇಕು” ಎಂದು ಅಭಿಪ್ರಾಯ ಪಟ್ಟರು.
“ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಬುದ್ಧಿವಂತರಿದ್ದಾರೆ. ಈ ಹಿಂದೆ ಅವರೇ ಈ ಯೋಜನೆಗೆ ಬೆಂಬಲ ನೀಡಿದ್ದರು. ಈಗ ಅವರು ಯಾಕೆ ಈ ಪತ್ರ ಬರೆದರು ಎಂದು ಅಚ್ಚರಿಯಾಗಿದೆ. ಮಳೆ ಹೆಚ್ಚಾದಾಗ ಪ್ರವಾಹ ಬರುತ್ತದೆ. ಇದನ್ನು ನಿಭಾಯಿಸುವುದು ಅವರ ಕರ್ತವ್ಯ” ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಜಾಗ ಬದಲಿಗೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ:
ಕೆಂಪೇಗೌಡ ಜಯಂತಿ ಕಾರ್ಯಕ್ರಮ ಸ್ಥಳ ವೀಕ್ಷಣೆ ಬಗ್ಗೆ ಕೇಳಿದಾಗ, “ಈ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಇಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಸರ್ಕಾರ ಸಮೀಪದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನಿಗದಿ ಮಾಡಿದೆ. ಈ ಜಾಗದಲ್ಲಿ ಜೂ.27ರಂದು ಶಂಕುಸ್ಥಾಪನೆ ಮಾಡಿ, ನಂತರ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಇಲ್ಲಿ ಆಚರಿಸಲು ಮುಂದಾಗಿದ್ದೇವೆ. ಇಲ್ಲಿ ಕೆಂಪೇಗೌಡರ ಇತಿಹಾಸ ಸಾರುವ ವಸ್ತುಪ್ರದರ್ಶನ ಕೇಂದ್ರ ನಿರ್ಮಾಣ ಮಾಡಲಾಗುವುದು” ಎಂದು ಹೇಳಿದರು.
“ಈಗ ಮಂಜೂರಾಗಿರುವ ಜಾಗವನ್ನು ಸಮಾಜ ಕಲ್ಯಾಣ ಇಲಾಖೆ ಜಾಗದ ಜೊತೆ ಬದಲಾಯಿಸಿಕೊಳ್ಳಬೇಕು ಎಂದು ನಮ್ಮ ಸ್ಥಳೀಯ ನಾಯಕರು ಸಲಹೆ ನೀಡಿದ್ದಾರೆ. ಅಧಿಕಾರಿಗಳ ಜತೆ ಇಂದು ಈ ಜಾಗದ ಪರಿಶೀಲನೆ ಮಾಡಿದೆ. ಜಾಗ ಅದಲು ಬದಲು ಮಾಡಿದರೆ, ಪಕ್ಕದಲ್ಲೇ ಈ ದೊಡ್ಡ ಸಭಾಂಗಣ ಇದೆ. ಆಗ ಮತ್ತೊಂದು ಸಭಾಂಗಣ ನಿರ್ಮಾಣ ಮಾಡುವ ಅಗತ್ಯ ಇರುವುದಿಲ್ಲ. ಮುಂದೆ ಇಲ್ಲಿ ರೈಲ್ವೆ ಮಾರ್ಗ ಬರಲಿದ್ದು, ಇಲ್ಲೇ ಒಂದು ನಿಲ್ದಾಣವನ್ನು ಮಾಡಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
ಈ ಜಾಗ ದೂರ ಆಗಲಿಲ್ಲವೇ ಎಂದು ಕೇಳಿದಾಗ, “ಬೆಂಗಳೂರು ಬೆಳೆದಿದೆ ಏನು ಮಾಡುತ್ತೀರಿ? ಬೆಂಗಳೂರಿನಲ್ಲಿ ಬೇರೆ ಎಲ್ಲಿ ಜಾಗ ನೀಡುತ್ತೀರಿ? ಗಾಲ್ಫ್ ಕೋರ್ಸ್, ಕಬ್ಬನ್ ಪಾರ್ಕ್, ರೇಸ್ ಕೋರ್ಸ್ ಬಿಡಲು ಯಾರೂ ಸಿದ್ಧರಿಲ್ಲ. ಮತ್ತೆ ಬೇರೆ ಎಲ್ಲಿ ಜಾಗ ಇದೆ? ಮಂತ್ರಿಗಳ ಮನೆ, ನ್ಯಾಯಾಧೀಶರಿಗೆ ಹೊಸ ಮನೆ, ಹೈಕೋರ್ಟ್ ಮಾಡಲು ಬೆಂಗಳೂರು ಮಧ್ಯಭಾಗದಲ್ಲಿ ಜಾಗ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬೇರೆ ಎಲ್ಲಿ ನೀಡಲು ಸಾಧ್ಯ? ಹೀಗಾಗಿ ಇಲ್ಲಿ ಜಾಗ ನೀಡಿದ್ದೇವೆ” ಎಂದು ತಿಳಿಸಿದರು.
ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವೆ:
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ಕೇಂದ್ರ ಸಚಿವಾಲಯಗಳು ಅಲ್ಲಿರುವ ಕಾರಣ ದೆಹಲಿಗೆ ತೆರಳಬೇಕಾಗುತ್ತದೆ. ಸಧ್ಯಕ್ಕೆ ನನಗೆ ದೆಹಲಿಯಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ. ಸಿಎಂ ಅವರ ಕಾರ್ಯಕ್ರಮ ಇರಬಹುದು. ಹೈಕಮಾಂಡ್ ನನಗೆ ಭೇಟಿ ಮಾಡಲು ತಿಳಿಸಿದರೆ ನಾನು ಹೋಗುತ್ತೇನೆ. ಆದರೆ ನಾನು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಿದ್ದು, ಅವರ ಸಮಯ ನಿಗದಿ ಮಾಡಿದ ನಂತರ ನಾನು ಪ್ರವಾಸ ಮಾಡುತ್ತೇನೆ” ಎಂದು ತಿಳಿಸಿದರು.
ಸರ್ಕಾರಕ್ಕೆ 2 ವರ್ಷ ಪೂರೈಸಿದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಈ ವಿಚಾರ ಏನಿದ್ದರೂ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನೇ ಕೇಳಬೇಕು” ಎಂದರು.
ನಿಗಮ ಮಂಡಳಿ ನೇಮಕ ಬಗ್ಗೆ ಕೇಳಿದಾಗ, “ಅದನ್ನು ಶೀಘ್ರದಲ್ಲೇ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಸಮಿತಿಯಲ್ಲಿ 4 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. 8 ಸಾವಿರ ಜನ ಕಾರ್ಯಕರ್ತರನ್ನು ಬೇರೆ ಬೇರೆ ಸಮಿತಿ ಸದಸ್ಯರನ್ನಾಗಿ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ 500-600 ಜನಕ್ಕೆ ಮಾಡಬೇಕಿದೆ. ಈ ಪಟ್ಟಿ ಸಿದ್ಧವಾಗಿದ್ದು, ಸ್ಥಳೀಯ ನಾಯಕರ ಜತೆ ಚರ್ಚಿಸಿ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.
ಪರಿಷತ್ ಸದಸ್ಯತ್ವ ನೇಮಕ ಬಗ್ಗೆ ಕೇಳಿದಾಗ, “ಇದನ್ನು ಹೈಕಮಾಂಡ್ ಮಾಡಲಿದೆ” ಎಂದರು.ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪತ್ರದ ಬಗ್ಗೆ ಕೇಳಿದಾಗ, “ನನಗೆ ಇನ್ನೂ ಆ ಪತ್ರ ಬಂದಿಲ್ಲ. ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಬಿಜೆಪಿಯವರು ಯಾವ ರೀತಿ ಆಯ್ಕೆ ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಇದನ್ನು ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಆರ್ ಸಿಬಿ ಕಪ್ ಗೆದ್ದು ಬರಲಿ:
“ಈ ಬಾರಿಯ ಐಪಿಎಲ್ ಟೂರ್ನಿಯನ್ನು ನಮ್ಮ ಆರ್ ಸಿಬಿ ತಂಡ ಗೆಲ್ಲಬೇಕು ಎಂದು ರಾಜ್ಯ ಹಾಗೂ ದೇಶದ ಅಭಿಮಾನಿಗಳು ಬಯಸುತ್ತಿದ್ದಾರೆ. ರಾಜ್ಯದ ಜನರ ಪರವಾಗಿ ಆರ್ ಸಿಬಿ ತಂಡದ ಆಟಗಾರರಿಗೆ ಶುಭಕೋರುತ್ತೇನೆ. ಈ ಬಾರಿ ಐಪಿಎಲ್ ಕಪ್ ಅನ್ನು ಗೆದ್ದು ತರಬೇಕು. ಫೈನಲ್ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಆಟಗಾರರು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ” ಎಂದು ತಿಳಿಸಿದರು.