ಬೆಂಗಳೂರು(www.thenewzmirror.com):ದೊಡ್ಡಬಳ್ಳಾಪುರ-ಡಾಬಸ್ ಪೇಟೆ ನಡುವೆ ನಿರ್ಮಾಣವಾಗಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ ಯೋಜನೆ ಬಗ್ಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ (ಎಡಿಬಿ) ಉನ್ನತ ಅಧಿಕಾರಿಗಳ ತಂಡಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿ ವಿವರಿಸಲಾಯಿತು.
ಎಡಿಬಿ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಫೂಕ್ ಯೆನ್ ಚಾಂಗ್ ನೇತೃತ್ವದ ಒಂಬತ್ತು ಜನರ ತಂಡಕ್ಕೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ.ಮಹೇಶ್, ಕರ್ನಾಟಕ ಉದ್ಯೋಗಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಹಾಗೂ ಕೈಗಾರಿಕಾ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಅವರ ನೇತೃತ್ವದಲ್ಲಿ ಪ್ರ್ಯಾತ್ಯಕ್ಷಿಕೆ ನೀಡಲಾಯಿತು.
ಉದ್ದೇಶಿತ ಕ್ವಿನ್ ಸಿಟಿಯಲ್ಲಿ ದೇಶ ವಿದೇಶಗಳ ಮುಂಚೂಣಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಕ್ಯಾಂಪಸ್ ಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಈ ‘ಕ್ವಿನ್ ಸಿಟಿ’ಯನ್ನು ಜ್ಞಾನ-ಆರೋಗ್ಯ-ನಾವೀನ್ಯಾತಾ ವಲಯವನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ, ಇಲ್ಲಿ ತಮ್ಮ ಕ್ಯಾಂಪಸ್ ಗಳನ್ನು ಸ್ಥಾಪಿಸಲು ಮುಂದಾಗುವ ಶಿಕ್ಷಣ ಸಂಸ್ಥೆಗಳು ಬ್ಯಾಂಕಿನಿಂದ ಸಾಲ ನೆರವು ಕೋರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಡಿಬಿ ಉನ್ನತಾಧಿಕಾರಿಗಳಿಗೆ ಯೋಜನೆ ಕುರಿತು ವಿವರ ಮಾಹಿತಿ ಇದ್ದರೆ ಅನುಕೂಲವಾಗುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ಪ್ರಸ್ತುತಪಡಿಸಲಾಯಿತು.
ಯೋಜನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಎಡಿಬಿ ನಿಯೋಗದ ಸದಸ್ಯರು, ಎಂತಹ ಸಂಸ್ಥೆಗಳು ಕ್ವಿನ್ ಸಿಟಿಗೆ ಬರಲಿವೆ, ಉದ್ದೇಶಿತ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ಇನ್ನಿತರ ಅಂಶಗಳ ಬಗ್ಗೆ ವಿವರ ಪಡೆದರು. ನಂತರ, ಅವರು ಪ್ರಸ್ತಾವಿತ ಕ್ವಿನ್ ಸಿಟಿ ಕುರಿತು ಮೆಚ್ಚುಗೆ ಮಾತುಗಳನ್ನು ಕೂಡ ಆಡಿದರು.
ಶಾಲಾ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉನ್ನತ ಶಿಕ್ಷಣದ ವಲಯಗಳಿಗೆ ಸಂಬಂಧಿಸಿದ ಹಲವು ಉಪಕ್ರಮಗಳಲ್ಲಿ ಭಾಗಿಯಾಗುವ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ ಎಡಿಬಿ ಪ್ರತಿನಿಧಿಗಳು, “ಕ್ವಿನ್ ಸಿಟಿಯಲ್ಲಿನ ಅವಕಾಶಗಳ ಬಗ್ಗೆ ಪರಿಶೋಧಿಸಲಾಗುವುದು. ರಾಜ್ಯ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದು ಸಹಭಾಗಿತ್ವದ ಅವಕಾಶಗಳ ಬಗ್ಗೆ ಸಮಾಲೋಚನೆ ಮುಂದುವರಿಸಲಾಗುವುದು” ಎಂದರು.
ಎಡಿಬಿಯ ಶಿಕ್ಷಣ ವಿಭಾಗದ ತಜ್ಞರಾದ ಕೆ.ಡಬ್ಲ್ಯು.ಸ್ಯಾಮ್ಯುಯೆಲ್, ನಹ್ಯುನ್ ಕಿಮ್, ಶಾನ್ ಎಂ.ವೆಲ್ ಬೌರ್ನ್, ಲೀಹ್ ಮೆಕ್ ಮ್ಯಾನಸ್ ಮತ್ತಿತರರು ಇದ್ದರು