ಸರ್ಕಾರಿ ನೌಕರರಿಗೆ ಬೆಳ್ಳಂಬೆಳಗ್ಗೆ ‘ಕರ್ತವ್ಯ’ ಶಾಕ್: ಬೆಳಗ್ಗೆ 10 ಗಂಟೆಗೆ ಬಯೋಮೆಟ್ರಿಕ್ ಕಡ್ಡಾಯ, ನಿಗಾ ಇಡಲಿದೆ ‘AI’ ತಂತ್ರಜ್ಞಾನ!

ಬೆಂಗಳೂರು(www.thenewzmirror.com): ರಾಜ್ಯ ಸರ್ಕಾರಿ ನೌಕರರ ಹಾಜರಾತಿ ಮತ್ತು ಕಚೇರಿ ಶಿಸ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಹತ್ವದ ಅದೇಶವೊಂದನ್ನು ಹೊರಡಿಸಿದ್ದಾರೆ. ಇನ್ನು ಮುಂದೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕಿದೆ.

RELATED POSTS

ವಿಶೇಷವೆಂದರೆ, ನೌಕರರ ಹಾಜರಾತಿಯನ್ನು ಹದ್ದಿನ ಕಣ್ಣಿನಿಂದ ಪರೀಕ್ಷಿಸಲು ಈ ಬಾರಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

‘ಕರ್ತವ್ಯ’ ಆ್ಯಪ್ ಬಳಕೆ ಕಡ್ಡಾಯ

ಸರ್ಕಾರ ಈಗಾಗಲೇ ಇ-ಆಡಳಿತ ಇಲಾಖೆಯ ಮೂಲಕ ‘ಕರ್ತವ್ಯ’ (Kartavya App) ಎಂಬ ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಯಲ್ಲಿರುವ ಎಲ್ಲಾ ನೌಕರರ ಮಾಹಿತಿಯನ್ನು ಈಗಾಗಲೇ ಈ ಆ್ಯಪ್‌ಗೆ ಜೋಡಿಸಲಾಗಿದೆ. ಆದರೆ, ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಆ್ಯಪ್ ಅನ್ನು ಸದುಪಯೋಗ ಪಡಿಸಿಕೊಳ್ಳದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಆ್ಯಪ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ನಿಯಮಾವಳಿಗಳು ಏನೇನು?

ಇನ್ ಮತ್ತು ಔಟ್ ದಾಖಲಾತಿ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ದರ್ಜೆಯ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ ಆ್ಯಪ್ ಮೂಲಕ ‘Check In’ ಮಾಡಬೇಕು. ಹಾಗೆಯೇ ಕಚೇರಿಯಿಂದ ನಿರ್ಗಮಿಸುವಾಗ ‘Check Out’ ದಾಖಲಿಸಬೇಕು.

ವಿಡಿಯೋ ಮೂಲಕ ತರಬೇತಿ: ಈ ತಂತ್ರಜ್ಞಾನ ಬಳಕೆಯ ಬಗ್ಗೆ ಮಾಹಿತಿ ಇಲ್ಲದವರಿಗಾಗಿ ಯೂಟ್ಯೂಬ್‌ನಲ್ಲಿ (KAAAMS) ವಿಶೇಷ ತರಬೇತಿ ವಿಡಿಯೋವನ್ನು ವೀಕ್ಷಿಸಲು ಲಿಂಕ್ ಒದಗಿಸಲಾಗಿದೆ.

ನೇರವಾಗಿ ವರದಿ ರವಾನೆ: ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ದಾಖಲಾಗುವ ಹಾಜರಾತಿಯನ್ನು ಇ-ಆಡಳಿತ ಇಲಾಖೆಯು ಪರಿಶೀಲಿಸಲಿದೆ. ಜಿಲ್ಲಾವಾರು ಮತ್ತು ಕಚೇರಿವಾರು ಲಭ್ಯವಾಗುವ ಮಾಹಿತಿಯನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ವಿಶ್ಲೇಷಿಸಿ, ಆಯಾ ಇಲಾಖಾ ಮುಖ್ಯಸ್ಥರಿಗೆ ಪ್ರತಿದಿನ ಸ್ವಯಂಚಾಲಿತವಾಗಿ (Automated Report) ವರದಿಯನ್ನು ತಲುಪಿಸಲಾಗುತ್ತದೆ.

ಮುಖ್ಯಸ್ಥರ ಲಾಗಿನ್ ಪರಿಶೀಲನೆ ಕಡ್ಡಾಯ:

ಹೊಸ ನಿಯಮದ ಪ್ರಕಾರ, ಪ್ರತಿ ಇಲಾಖೆಯ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ (Login) ಐಡಿ ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್‌’ ಅನ್ನು ಪ್ರತಿದಿನ ಕಡ್ಡಾಯವಾಗಿ ಪರಿಶೀಲಿಸಬೇಕು. ತಮ್ಮ ಕೈಕೆಳಗಿನ ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಯಾರಾದರೂ ಹಾಜರಾತಿ ದಾಖಲಿಸದೆ ನಿರ್ಲಕ್ಷ್ಯ ತೋರಿದರೆ, ಅಂತಹವರಿಗೆ ಇಲಾಖಾ ಮುಖ್ಯಸ್ಥರೇ ನೇರವಾಗಿ ಸೂಕ್ತ ನೋಟಿಸ್ ಅಥವಾ ಸೂಚನೆ ನೀಡಬೇಕಾಗುತ್ತದೆ.

ಪ್ರವಾಸದಲ್ಲಿದ್ದರೂ ‘OOD’ ಮೂಲಕ ನಿಗಾ!

ಅಧಿಕಾರಿಗಳು ಅಥವಾ ಸಿಬ್ಬಂದಿ ಕಚೇರಿ ಕೆಲಸದ ನಿಮಿತ್ತ ಅಧಿಕೃತ ಪ್ರವಾಸದಲ್ಲಿದ್ದರೆ (On Official Duty) ಅವರಿಗೂ ವಿನಾಯಿತಿ ಇಲ್ಲ. ಅಂತಹ ಸಂದರ್ಭಗಳಲ್ಲಿ ಆ್ಯಪ್‌ನಲ್ಲಿರುವ ‘OOD Option’ ಅನ್ನು ಬಳಸಬೇಕಾಗುತ್ತದೆ. ತಾವು ಹೋದ ಪ್ರವಾಸದ ಉದ್ದೇಶವನ್ನು ಅಲ್ಲಿ ನಮೂದಿಸಿ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ, ಡಿಜಿಟಲ್ ಆಗಿ ದೃಢೀಕರಿಸಲಿದ್ದಾರೆ.

ತಕ್ಷಣದಿಂದಲೇ ಜಾರಿ:

ಈ ಆದೇಶವನ್ನು ಅತ್ಯಂತ ತುರ್ತು ಮತ್ತು ಕಡ್ಡಾಯ ಎಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರ್ಕಾರದ ಈ ಹೊಸ ಆ್ಯಪ್ ಮತ್ತು AI ಆಧಾರಿತ ನಿಯಮದಿಂದಾಗಿ ಇನ್ಮುಂದೆ ಕಚೇರಿ ಕೆಲಸಗಳ ನೆಪ ಹೇಳಿ ಸಿಬ್ಬಂದಿ ಗೈರಾಗುವುದಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ತೀರ್ಮಾನದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದ್ದು, ಕಚೇರಿ ಸಮಯ ಪಾಲಿಸದ ಅಧಿಕಾರಿ ಮತ್ತು ಸಿಬ್ಬಂದಿಗೆ ಇನ್ನು ಮುಂದೆ ಸಂಕಷ್ಟ ಎದುರಾಗುವುದು ಖಚಿತವಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist